ಸಕಲೇಶಪುರ: 53ನೇ ದನಗಳ ಜಾತ್ರೆ ಹಾಗೂ ವಸ್ತು ಪ್ರದರ್ಶನದ ಹರಾಜು ಮಾ.7ರಂದು ನಡೆಯಲಿದೆ ಎಂದು ಪುರಸಭಾ ಅಧ್ಯಕ್ಷ ಎಸ್.ಡಿ.ಆದರ್ಶ ಹೇಳಿದರು.ಪುರಸಭಾ ಸಭಾಂಗಣದಲ್ಲಿ ಜಾತ್ರೆ ನಡೆಸುವ ಸಂಬಂಧ ಶುಕ್ರವಾರ ನಡೆದ ಪೂರ್ವಭಾವಿ ಸಭೆ ಬಳಿಕ ಮಾತನಾಡಿದ ಅವರು, ಮಾರ್ಚ್ 17ರಿಂದ 31ರ ವರೆಗೆ ಜಾತ್ರಾ ವಸ್ತು ಪ್ರದರ್ಶನ ನಡೆಯಲಿದೆ.ವಸ್ತು ಪ್ರದರ್ಶನದ ಗುತ್ತಿಗೆ ಪಡೆಯುವವರು ಹರಾಜಿನಲ್ಲಿ ಪಾಲ್ಗೊಳ್ಳಲು 1.50 ಲಕ್ಷ ರೂಪಾಯಿ ಠೇವಣಿ ಸಂಗ್ರಹಿಸಲಾಗುವುದು. ಅರ್ಜಿ ದರವನ್ನು 2 ಸಾವಿರ ರೂಪಾಯಿಗೆ ನಿಗದಿಗೊಳಿಸಲಾಗಿದೆ ಎಂದರು.
ಈ ಬಾರಿ ವಿಭಿನ್ನವಾಗಿ ಜಾತ್ರೆ, ವಸ್ತು ಪ್ರದರ್ಶನ, ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ಕ್ರೀಡಾ ಚಟವಟಿಕೆ ನಡೆಸಲು ಸಭೆಯಲ್ಲಿ ಸುದೀರ್ಘ ಚರ್ಚೆ ನಡೆಯಿತು. ಉದ್ಘಾಟನೆಯಂದು ಪುರಭವನದಿಂದ ಸಕಲೇಶ್ವರಸ್ವಾಮಿ ದೇವಸ್ಥಾನದ ಮೂಲಕ ಜಾತ್ರಾ ಮೈದಾನದ ವರೆಗೆ ಮಹಿಳೆಯರು 101 ಪೂರ್ಣ ಕುಂಭ ಕಳಸದ ಮೂಲಕ ತೆರಳುವುದು. ಮೆರವಣಿಗೆಯಲ್ಲಿ ಪುರಸಭೆಯ ನಿರಂತರ ಉಳಿತಾಯ ಗುಂಪಿನ ಸದಸ್ಯರು, 25 ಜೋಡಿ ರಾಸುಗಳು, ಕೇರಳದ ಸಿಂಗಾರಿ ಚಂಡೆ, ನವಿಲು ಕುಣಿತ ಮೊದಲಾದ ಜಾನಪದ ನೃತ್ಯಗಳ ಮೆರಗು ನೀಡಲಿವೆ.
ಕನ್ನಡದಲ್ಲಿ ಯಕ್ಷಗಾನ ಪ್ರದರ್ಶನ, ಹಾಸ್ಯ ಸಂಜೆ, ಮಿಮಿಕ್ರಿಯೆ ದಯಾನಂದ್ ಸೇರಿದಂತೆ ಸ್ಥಳೀಯ ಹಾಗೂ ರಾಜ್ಯ ಮಟ್ಟದ ವಿವಿಧ ಕಲಾ ತಂಡಗಳನ್ನು ಕರೆಸಿ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಲು ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಯಿತು. ಹೊನಲು ಬೆಳಕಿನ ಕಬ್ಬಡಿ ಪಂದ್ಯಾವಳಿ ನಡೆಸಲು ತೀರ್ಮಾನ ಕೈಗೊಳ್ಳಲಾಯಿತು.
ಸಮಿತಿ ರಚನೆ: ಸಭೆಯಲ್ಲಿ ಜಾತ್ರೆ ಹಾಗೂ ವಸ್ತು ಪ್ರದರ್ಶನ ಸಮಿತಿ ರಚನೆ ಮಾಡಲಾಗಿದ್ದು ಸಮಿತಿ ಅಧ್ಯಕ್ಷರಾಗಿ ಎಸ್.ಡಿ.ಆದರ್ಶ, ಸದಸ್ಯರಾಗಿ ಎಸ್.ಆರ್.ದೇವರಾಜ್, ಎಸ್.ಎನ್.ಪ್ರಕಾಶ್, ಯು.ಕೆ.ಪ್ರೇಮಾ, ನಂದೀಶ, ಪ್ರದೀಪ, ಹಾಗೂ ಮುಖ್ಯಾಧಿಕಾರಿ ರಾಮಚಂದ್ರು. ಕ್ರೀಡಾ ಸಮಿತಿ ಅಧ್ಯಕ್ಷರಾಗಿ ಡಿ.ಎಂ.ಶಿವಪ್ರಕಾಶ್, ಸದಸ್ಯರಾಗಿ ಎಸ್.ಎಂ.ಮಂಜುನಾಥ್, ಎಂ.ಬಿ.ಉಮೇಶ್ ಆಚಾರ್, ಸುಮಿತ್ರ, ಅಕ್ರಂಪಾಶ, ಚೌಡೇಗೌಡ, ಸಾಂಸ್ಕೃತಿಕ ಸಮಿತಿ ಅಧ್ಯಕ್ಷರಾಗಿ ಮಲ್ನಾಡ್ ಜಾಕೀರ್, ಎಚ್.ಎ.ಭಾಸ್ಕರ್, ಎಸ್.ಎ.ಮೋಹನ್, ಸಂತೋಷ್, ಪರ್ವೀನ್, ರಮೇಶ್ ಪ್ರಭಾದೇವಿ. ಪ್ರಚಾರ ಸಮಿತಿ ಅಧ್ಯಕ್ಷರಾಗಿ ಕಾಡಪ್ಪ, ಯಾದ್ಗಾರ್ ಇಬ್ರಾಹಿಂ, ಶಿವನಾಗಮ್ಮ, ರವಿಕುಮಾರ್, ಗೋಪಾಲಕೃಷ್ಣ, ಮಹಿಳಾ ಕ್ರೀಡಾ ಸಮಿತಿ ಅಧ್ಯಕ್ಷರಾಗಿ ಪುಷ್ಪಾವತಿ, ಸದಸ್ಯರಾಗಿ ವರಲಕ್ಷ್ಮಿ, ಅಮೀನಾಬಿ, ಲಲಿತಮ್ಮ, ನೇತ್ರಮ್ಮ, ಜಾನಕಮ್ಮರನ್ನು ಆಯ್ಕೆ ಮಾಡಲಾಗಿದೆ.
ಜಾತ್ರಾ ಸಮಿತಿ ಗುಮಾಸ್ತರಾಗಿ, ಶಾಂತಕುಮಾರ್, ಸಹಾಯಕರಾಗಿ ಬಿ.ಆರ್.ಅನಿಲ್ಕುಮಾರ್, ನೈರ್ಮಲ್ಯ ಸಮಿತಿ ಉಸ್ತುವಾರಿಗೆ ಪರಿಸರ ಎಂಜಿನಿಯರ್ ಹಾಗೂ ಆರೋಗ್ಯ ನಿರೀಕ್ಷಕರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.