ಅರಸೀಕೆರೆ: ನಗರದ ಗ್ರಾಮ ದೇವತೆ ಕರಿಯಮ್ಮ ದೇವಿ ಹಾಗೂ ಮಲ್ಲಿಗೆಮ್ಮ ದೇವಿಯ ಕಡೇ ಕಾರ್ತಿಕ ದೀಪೋತ್ಸವ ಮಂಗಳವಾರ ಸಂಜೆ ಭಕ್ತರ ಸಮ್ಮುಖದಲ್ಲಿ ಸಂಭ್ರಮದಿಂದ ನೆರವೇರಿತು.
ಕರಿಯಮ್ಮ ಮಲ್ಲಿಗೆಮ್ಮ ದೇವಿ ಹಾಗೂ ಚೆಲುವರಾಯ, ದೂತರಾಯ, ಕೆಂಚರಾಯ ಸ್ವಾಮಿ ಉತ್ಸವ ಮೂರ್ತಿಗಳಿಗೆ ಪುಷ್ಪಾಲಂಕಾರ ಮಾಡಲಾಗಿತ್ತು. ವಿದ್ಯುತ್ ದೀಪಗಳಿಂದ ಅಲಂಕೃತಗೊಂಡಿದ್ದ ಕುದುರೆ ಸಾರೋಟ್ ಮೇಲೆ ಕರಿಯಮ್ಮ ದೇವಿ ಉತ್ಸವ ಮೂರ್ತಿಯನ್ನು ಪ್ರತಿಷ್ಠಾಪಿಸಿ ಮಹಾ ಮಂಗಳಾರತಿ ಸಲ್ಲಿಸಿ ಉತ್ಸವಕ್ಕೆ ಚಾಲನೆ ನೀಡಲಾಯಿತು.
ಉತ್ಸವದಲ್ಲಿ ಮಲ್ಲಿಗೆಮ್ಮ ದೇವಿ, ಚೆಲುವರಾಯ, ದೂತರಾಯ ಸ್ವಾಮಿಯವರ ಕುಣಿತವು ಭಕ್ತರ ಮನಸೂರೆಗೊಂಡಿತ್ತು. ಮಂಗಳವಾದ್ಯ ಸಮೇತ ವಿವಿಧ ಜಾನಪದ ಕಲಾತಂಡಗಳ ಕಲಾ ಪ್ರದರ್ಶನದೊಂದಿಗೆ ಸಾಗಿದ ಉತ್ಸವದಲ್ಲಿ ಸಾವಿರಾರು ಮಂದಿ ಪಾಲ್ಗೊಂಡಿದ್ದರು. ಉತ್ಸವವು ಊರ ಒಳಗಿನ ದೇವಸ್ಥಾನದಿಂದ ಮೂಲ ಸನ್ನಿಧಾನದವರೆಗೂ ಸಾಗಿತು. ಅಲ್ಲಿ ಕರಿಯಮ್ಮ ದೇವಿ ಸಮೇತ ನೆಲೆಸಿರುವ ಪಂಚ ಮಾತೃಕೆಯರಿಗೆ ಮಹಾಮಂಗಳಾರತಿ ಬೆಳಗಲಾಯಿತು. ನಂತರ ಭಕ್ತರಿಗೆ ತೀರ್ಥ ಪ್ರಸಾದ ವಿತರಣೆ ನಡೆಯಿತು. ದೇವಸ್ಥಾನಕ್ಕೆ ವಿದ್ಯುತ್ ದೀಪಾಲಂಕಾರ ಮಾಡಲಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.