ಹಾಸನ: ‘ದೃಷ್ಟಿದೋಷ ಎಂಬ ಕಾರಣಕ್ಕೆ ದಾಖಲಾಗಿದ್ದ ಆರು ವರ್ಷದ ಬಾಲಕನ ಸಾವಿಗೆ ವೈದ್ಯರ ನಿರ್ಲಕ್ಷ್ಯವೇ ಕಾರಣ’ ಎಂದು ಆರೋಪಿಸಿ ಮೃತನ ಪೋಷಕರು ಹಾಗೂ ಸಂಬಂಧಿಕರು ಆಸ್ಪತ್ರೆ ಎದುರು ಶವವಿಟ್ಟು ಪ್ರತಿಭಟನೆ ನಡೆಸಿದರು.
ಕೆಂಪರಾಜು ಮತ್ತು ಪುಷ್ಪಾ ಅವರು ಕಳೆದ ತಿಂಗಳು ಮಗನಿಗೆ ಕಣ್ಣಿನ ದೋಷದ ಸಮಸ್ಯೆ ಇದೆ ಎಂಬ ಕಾರಣಕ್ಕೆ ವೈದ್ಯ ರಾಕೇಶ್ ಗೆ ತೋರಿಸಿದ್ದರು. ಶಸ್ತ್ರಚಿಕಿತ್ಸೆಗೆ ಬಾಲಕ ಹಾಗೂ ಪೋಷಕರನ್ನು ಕರೆಸಿಕೊಂಡ ವೈದ್ಯರು, ದಾಖಲು ಮಾಡಿಕೊಂಡರು.
‘ಬೆಳಗ್ಗೆ ಆಪರೇಷನ್ ಮಾಡುವುದಾಗಿ ತುರ್ತು ಚಿಕಿತ್ಸಾ ಘಟಕಕ್ಕೂ ಕರೆದೊಯ್ದ ವೈದ್ಯರು, ಅದಾದ ಕೆಲವೇ ಹೊತ್ತಿನಲ್ಲಿ ಮಗು ಮೃತಪಟ್ಟಿದೆ ಎಂದರು. ಚೆನ್ನಾಗಿಯೇ ಇದ್ದ ಮಗನ ಸಾವಿಗೆ ವೈದ್ಯರ ನಿರ್ಲಕ್ಷ್ಯ ಕಾರಣರಾದ ವೈದ್ಯರಿಗೆ ಶಿಕ್ಷೆಯಾಗಬೇಕು’ ಎಂದು ಪೋಷಕರು ಆಗ್ರಹಿಸಿದರು.
‘ಕಣ್ಣಿನ ಪೊರೆ ತೆಗೆಯಲು ಸಣ್ಣ ಶಸ್ತ್ರಚಿಕಿತ್ಸೆ ಬಿಟ್ಟರೆ, ಬೇರೆ ಯಾವುದೇ ಸಮಸ್ಯೆ ಇಲ್ಲ. ಬಾಲಕ ಆರೋಗ್ಯವಾಗಿದ್ದಾನೆ ಎಂದಿದ್ದ ವೈದ್ಯರೇ, ತಮ್ಮ ತಪ್ಪಿನಿಂದ ಮಗನ ಸಾವಿಗೆ ಕಾರಣರಾಗಿದ್ದಾರೆ. ಕಣ್ಣಿಗೆ ಶಸ್ತ್ರಚಿಕಿತ್ಸೆ ಮಾಡಿದರೆ ಬಾಯಿ-ಮೂಗಲ್ಲಿ ರಕ್ತ ಬಂದಿರುವುದೇಕೆ’ ಎಂದು ಬಾಲಕನ ತಂದೆ ಕೆಂಪರಾಜು ಪ್ರಶ್ನಿಸಿದರು.
‘ಲವಲವಿಕೆಯಿಂದ್ದ ಮಗನಿಗೆ ಯಾವುದೇ ಆರೋಗ್ಯ ತೊಂದರೆ ಇಲ್ಲ ಎಂದು ಹೇಳಿದ್ದರು. ಆದರೆ ಈಗ ಹೃದಯದ ಸಮಸ್ಯೆಯಿಂದ ಸತ್ತಿದ್ದಾನೆ ಎಂದು ಹೇಳುತ್ತಿರುವುದು ಅನುಮಾನ ಮೂಡಿಸಿದೆ. ಕಣ್ಣುದುರೇ ಕರುಳ ಕುಡಿಯನ್ನು ಶಾಶ್ವತವಾಗಿ ಕಳೆದುಕೊಳ್ಳುವ ಪರಿಸ್ಥಿತಿ ಯಾವ ತಂದೆ-ತಾಯಿಗೂ ಬರ ಬರಬಾರದು’ ಎಂದು ತಾಯಿ ಪುಷ್ಪಾ ಕಣ್ಣೀರಿಟ್ಟರು.
ಬಾಳಿ ಬದುಕಬೇಕಾದ ಕರುಳು ಬಳ್ಳಿಯ ಕಳೆದುಕೊಂಡ ಪೋಷಕರ ಕಣ್ಣೀರ ಕೂಗು ಮುಗಿಲು ಮುಟ್ಟಿತ್ತು. ಅದರಲ್ಲೂ ಮೊಮ್ಮಗ ಇನ್ನಿಲ್ಲ ಎಂಬ ಸತ್ಯ ತಿಳಿದ ಪ್ರಣವ್ ನ ಅಜ್ಜಿ-ತಾತನ ರೋಧನ ಸ್ಥಳದಲ್ಲಿದ್ದವರ ಕಣ್ಣಾಲಿಗಳನ್ನು ತೇವವಾಗಿಸಿತು.
ಈ ಸಂಬಂಧ ಆಸ್ಪತ್ರೆ ಆಡಳಿತ ಮಂಡಳಿ ಸಂಪರ್ಕಿಸಿದಾಗ ಪ್ರತಿಕ್ರಿಯಿಸಲು ಯಾರು ಲಭ್ಯವಾಗಲಿಲ್ಲ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.