ಹೆತ್ತೂರು: ಜಲಪಾತದಲ್ಲಿ ಈಜಲು ಹೋದ ಯುವಕ ತಲೆಗೆ ತೀವ್ರ ಪೆಟ್ಟು ಬಿದ್ದು ಮೃತಪಟ್ಟಿರುವ ಘಟನೆ ಹೋಬಳಿಯ ಮೂಕನಮನೆ ಜಲಪಾತದಲ್ಲಿ ಶನಿವಾರ ನಡೆದಿದೆ.
ಬೆಂಗಳೂರು ಜೆ.ಸಿ. ನಗರ ನಿವಾಸಿ ಕೆ.ಎನ್. ನಿಂಗರಾಜ್ (17) ಮೃತ ವ್ಯಕ್ತಿ. ವೆಸ್ಟ್ ಲಯನ್ಸ್ ಪ್ಯಾರಾ ಮೆಡಿಕಲ್ ಕಾಲೇಜಿನ ವಿದ್ಯಾರ್ಥಿ.
ಘಟನೆಯ ವಿವರ: ಹೆತ್ತೂರು ಹೋಬಳಿಯ ವಳಲಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮೂಕನಮನೆ ಜಲಪಾತಕ್ಕೆ 27 ವಿದ್ಯಾರ್ಥಿಗಳು ಹಾಗೂ ಕಾಲೇಜಿನ ಕೆಲ ಸಿಬ್ಬಂದಿ ಜೊತೆಗೆ ಪ್ರವಾಸಕ್ಕೆ ಬಂದಿದ್ದರು. ಜಲಪಾತದಲ್ಲಿ ಮಧ್ಯಾಹ್ನ ಈಜಲು ಹೋದಾಗ ನೀರಿನ ಸುಳಿಗೆ ಸಿಕ್ಕಿ ಕೊಚ್ಚಿ ಹೋಗಿ ಬಂಡೆಯೊಂದಕ್ಕೆ ತಲೆ ಅಪ್ಪಳಿಸಿದ ಪರಿಣಾಮ ತೀವ್ರ ಪೆಟ್ಟು ಬಿದ್ದಿದೆ. ಇವನನ್ನು ರಕ್ಷಿಸಲು ಸಮೀಪದಲ್ಲಿದ್ದವರು ಪ್ರಯತ್ನಿಸಿದರೂ ಸಹ ರಕ್ಷಣೆ ಮಾಡಲು ಸಾಧ್ಯವಾಗಿಲ್ಲ.
ನಂತರ ಪೊಲೀಸರು, ಅಗ್ನಿಶಾಮಕ ದಳದ ಸಿಬ್ಬಂದಿ ಸಹಾಯದಿಂದ ಮೃತದೇಹವನ್ನು ನೀರಿನಿಂದ ಹೊರ ತೆಗೆಯಲಾಯಿತು. ಈ ಸಂದರ್ಭದಲ್ಲಿ ಸ್ನೇಹಿತರ ಆಕ್ರಂದನ ಮುಗಿಲು ಮುಟ್ಟಿತ್ತು. ನಂತರ ಸಕಲೇಶಪುರದ ಕ್ರಾಫರ್ಡ್ ಆಸ್ಪತ್ರೆಗೆ ಶವ ಪರೀಕ್ಷೆಗೆ ಕಳುಹಿಸಲಾಯಿತು.
ಸ್ಥಳಕ್ಕೆ ಯಸಳೂರು ಪಿಎಸ್ಐ ಮಂಜುನಾಥ್ ಭೇಟಿ ನೀಡಿ ಪರಿಶೀಲಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.