ADVERTISEMENT

ಇಷ್ಟಲಿಂಗವೇ ಶಾಶ್ವತ ದೇವಾಲಯ: ಸಿದ್ದರಾಮ ಸ್ವಾಮೀಜಿ

ಬಸವ ಸಂಸ್ಕೃತಿ ಯಾತ್ರೆ: ವಿದ್ಯಾರ್ಥಿಗಳ ಜೊತೆಗಿನ ಸಂವಾದದಲ್ಲಿ ತೋಂಟದಾರ್ಯ ಸ್ವಾಮೀಜಿ

​ಪ್ರಜಾವಾಣಿ ವಾರ್ತೆ
Published 22 ಸೆಪ್ಟೆಂಬರ್ 2025, 5:44 IST
Last Updated 22 ಸೆಪ್ಟೆಂಬರ್ 2025, 5:44 IST
ಹಾಸನದ ಹಾಸನಾಂಬ ಕಲಾಕ್ಷೇತ್ರದಲ್ಲಿ ಭಾನುವಾರ ನಡೆದ ಕಾರ್ಯಕ್ರಮದಲ್ಲಿ ಶಾಸಕ ಸಿ.ಎನ್‌.ಬಾಲಕೃಷ್ಣ ಜ್ಯೋತಿ ಬೆಳಗಿದರು.
ಹಾಸನದ ಹಾಸನಾಂಬ ಕಲಾಕ್ಷೇತ್ರದಲ್ಲಿ ಭಾನುವಾರ ನಡೆದ ಕಾರ್ಯಕ್ರಮದಲ್ಲಿ ಶಾಸಕ ಸಿ.ಎನ್‌.ಬಾಲಕೃಷ್ಣ ಜ್ಯೋತಿ ಬೆಳಗಿದರು.   

ಹಾಸನ: ದೇಹವೇ ದೇವಾಲಯ, ಶಿರವೇ ಕಳಸ ಎಂಬ ಭಾವನೆಗೆ ಜೀವ ತುಂಬಿದವರು ಬಸವಣ್ಣ. ದೇವಾಲಯಕ್ಕೆ ಹೋಗುವುದೇ ಧರ್ಮವಲ್ಲ, ಇಷ್ಟಲಿಂಗವೇ ಶಾಶ್ವತ ದೇವಾಲಯ. ಪೂಜಾರಿ ಮಾಡಿದ ಪೂಜೆಯ ಬದಲು ಪ್ರತಿಯೊಬ್ಬರೂ ತಾವೇ ಮಾಡುವ ಪೂಜೆಯೇ ನಿಜವಾದ ಧರ್ಮಾಚರಣೆ. ಇದನ್ನು ಬಸವಣ್ಣನವರು ಕೊಟ್ಟ ಸಂದೇಶ ಎಂದು ಗದಗದ ತೋಂಟದಾರ್ಯ ಸಂಸ್ಥಾನ ಮಠದ ತೊಂಟದ ಸಿದ್ದರಾಮ ಸ್ವಾಮೀಜಿ ಹೇಳಿದರು.

ನಗರದ ಹಾಸನಾಂಬ ಕಲಾಕ್ಷೇತ್ರ ಭಾನುವಾರ ನಡೆದ ವಿಶ್ವಗುರು ಜಗಜ್ಯೋತಿ ಸಾಂಸ್ಕೃತಿಕ ನಾಯಕ ಬಸವಣ್ಣನವರ ಸಾಂಸ್ಕೃತಿಕ ಅಭಿಯಾನ ಕಾರ್ಯಕ್ರಮದಲ್ಲಿ ಸಾನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.

ದೇಹವೇ ದೇಗುಲವಿದೆ. ಶಿರವೇ ಒಂದು ಕಳಸ. ಇದರ ಪ್ರಚಾರಕ್ಕಾಗಿಯೇ ಬಸವ ಸಂಸ್ಕೃತಿಯ ಅಭಿಯಾನ ಹೊರಟಿದೆ ಎಂಬುದನ್ನು ತಿಳಿದುಕೊಳ್ಳಬೇಕು. ನಾವು ಹೆಚ್ಚೆಚ್ಚು ಪ್ರಚಾರ ಮಾಡಿದರೇ ನಮ್ಮ ಸಂಸ್ಕೃತಿ ಬಗ್ಗೆ ತಿಳಿಯುತ್ತದೆ. ದೇವಾಲಯಕ್ಕೆ ಹೋಗುವ ಸಂಖ್ಯೆ ಕಡಿಮೆ ಆಗಲು ನಾವು ಜಾಗೃತಿ ಮಾಡಬೇಕು ಎಂದು ಕಿವಿಮಾತು ಹೇಳಿದರು.

ADVERTISEMENT

ಮನೆ ಮನೆ ಒಳಗೆ ಜಾಗೃತಿ ಮಾಡುವ ಅವಶ್ಯಕತೆ ಇದೆ. ಇಷ್ಟ ಲಿಂಗವನ್ನು ಬಸವಣ್ಣನವರು ಕೊಟ್ಟಿದ್ದು. ಪೂಜಾರಿ ಪೂಜೆ ಮಾಡಿದರೇ ನಿಮಗೆ ಪ್ರಯೋಜನವಿಲ್ಲ. ನಾವು ಯಾವಾಗ ಬೇಕೋ ಅವಾಗ ಪೂಜೆ ಮಾಡಬಹುದು ಎಂದರು.

‘ಕೋವಿಡ್‌ ಸಮಯದಲ್ಲಿ ಎಲ್ಲ ದೇವಾಲಯಗಳ ಬಾಗಿಲುಗಳು ಮುಚ್ಚಿದ್ದಾಗಲೂ, ಜನರ ಹೃದಯದಲ್ಲಿದ್ದ ಇಷ್ಟಲಿಂಗವೇ ತೆರೆದಿತ್ತು. ಬಸವಣ್ಣನವರ ದಾರಿ ಅದು. ಸಮಾ ಸಮಾಜ, ಸಮಾನತೆ ಸ್ಥಾಪಿಸುವುದು ಬಸವಣ್ಣನವರ ಉದ್ದೇಶವಾಗಿತ್ತು. ಮನುಷ್ಯರೆಲ್ಲರೂ ಒಂದೇ ಎಂಬುದರ ಸಂದೇಶ ಕೊಡಬೇಕಾಗಿತ್ತು. ಇದರಿಂದಲೇ ಜಾತಿಗಳ ನಡುವೆ ಸಾಮರಸ್ಯ ಸಾಧಿಸಲು ಮುಂದಾದರು’ ಎಂದು ಹೇಳಿದರು.

ಇಂದಿನ ಯುಗದಲ್ಲಿ ಬಸವಣ್ಣನವರ ಸಂದೇಶ ಹೇಗೆ ಪ್ರಸ್ತುತ? ಜಾತಿ ಭೇದ ನಿವಾರಣೆಗೆ ಏನು ಮಾಡಬೇಕು? ಸೇರಿದಂತೆ ಹಲವಾರು ಪ್ರಶ್ನೆಗಳನ್ನು ವಿದ್ಯಾರ್ಥಿಗಳು ಕೇಳಿದರು. ಪ್ರಶ್ನೆಗಳಿಗೆ ಸ್ವಾಮೀಜಿಗಳು ತಾಳ್ಮೆಯಿಂದ ಉತ್ತರಿಸಿ, ಸತ್ಯ ಮತ್ತು ಧರ್ಮದ ಮಾರ್ಗವೇ ಸಮಾಜಕ್ಕೆ ಬೆಳಕು ಎಂದು ತಿಳಿಸಿದರು.

ಶಾಸಕ ಎಚ್.ಪಿ. ಸ್ವರೂಪ್, ಸಾಣೇನಹಳ್ಳಿ ತರಳಬಾಳು ಜಗದ್ಗುರು ಶಾಖಾ ಮಠದ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ, ಭಾಲ್ಕಿ ಹಿರೇಮಠದ ಬಸವಲಿಂಗ ಪಟ್ಟದೇವರು ಸ್ವಾಮೀಜಿ, ಗುರುಬಸವ ಸ್ವಾಮೀಜಿ, ಶಿವಾನಂದ ಸ್ವಾಮೀಜಿ, ಜ್ಞಾನಪ್ರಭು ಸಿದ್ದರಾಮ ದೇಸಿ ಕೇಂದ್ರ ಸ್ವಾಮೀಜಿ, ರುದ್ರಮುನಿ ಸ್ವಾಮೀಜಿ, ಸಂಗಮೇಶ್ವರ ಸ್ವಾಮೀಜಿ, ಪುಷ್ಪಗಿರಿ ಮಠದ ಸೋಮಶೇಖರ ಶಿವಾಚಾರ್ಯ ಸ್ವಾಮೀಜಿ, ತಣ್ಣೀರುಹಳ್ಳ ಮಠದ ವಿಜಯಕುಮಾರ ಸ್ವಾಮೀಜಿ, ಜಯಚಂದ್ರಶೇಖರ ಸ್ವಾಮೀಜಿ, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಜಿಲ್ಲಾ ಘಟಕದ ಅಧ್ಯಕ್ಷ ನವಿಲೆ ಪರಮೇಶ್, ತಾಲ್ಲೂಕು ಘಟಕದ ಅಧ್ಯಕ್ಷ ಕಟ್ಟಾಯ ಶಿವಕುಮಾರ್, ಇತರರು ಉಪಸ್ಥಿತರಿದ್ದರು.

Highlights - ಅಭಿಯಾನದಲ್ಲಿ ಜನರು, ಶಾಲಾ-ಕಾಲೇಜು ವಿದ್ಯಾರ್ಥಿಗಳು ಭಾಗಿ ವಿದ್ಯಾರ್ಥಿಗಳ ಜೊತೆಗೆ ಸಂವಾದ ನಡೆಸಿದ ಸ್ವಾಮೀಜಿ ಮೆರವಣಿಗೆ ಮೂಲಕ ಬಸವ ಸಂಸ್ಕೃತಿ ರಥಯಾತ್ರೆಗೆ ಸ್ವಾಗತ

Cut-off box - ಅರ್ಥಪೂರ್ಣ ಕಾರ್ಯಕ್ರಮ ಮಠಗಳ ಆಶೀರ್ವಾದದಿಂದ ಧರ್ಮದ ಜಾಗೃತಿ ಸಾಮಾಜಿಕ ಪ್ರಗತಿ ಆಗಿದ್ದು ಶೈಕ್ಷಣಿಕ ಪ್ರಗತಿಯಾಗಿ ನಮ್ಮ ದೇಶ ಅಭಿವೃದ್ಧಿಪಥದಲ್ಲಿ ಹೋಗುತ್ತಿದೆ. ಇಂತಹ ಮಹತ್ವದ ಕಾರ್ಯಕ್ರಮದಲ್ಲಿ ಸಂವಾದ ಮಾಡುವ ಮೂಲಕ ವಿದ್ಯಾರ್ಥಿಗಳಿಗೆ ಬಸವೇಶ್ವರರ ಸಂದೇಶಗಳನ್ನ ತಿಳಿಸುವುದು ಅರ್ಥಪೂರ್ಣವಾಗಿದೆ ಎಂದು ಶಾಸಕ ಸಿ.ಎನ್. ಬಾಲಕೃಷ್ಣ ಹೇಳಿದರು. 12ನೇ ಶತಮಾನದಲ್ಲಿ ಅನುಭವ ಮಂಟಪವನ್ನು ದಯಪಾಲಿಸಿದವರು ಬಸವಣ್ಣನವರು. ಈ ಪ್ರಪಂಚದ ಜನಸಂಖ್ಯೆ 850 ಕೋಟಿ ಇದ್ದು ಅದರಲ್ಲಿ ಭಾರತದ ನಮ್ಮ ಜನಸಂಖ್ಯೆ 150 ಕೋಟಿ ಇದೆ. ಗಟ್ಟಿ ಪ್ರಜಾಪ್ರಭುತ್ವಕ್ಕೆ ಬಸವಣ್ಣನವರ ಆಶೀರ್ವಾದದಿಂದ ಒಳ್ಳೆಯ ತಳಹದಿ ಸಿಕ್ಕಿದೆ ಎಂದರು. ಹಾಸನದಲ್ಲಿ ಬಸವೇಶ್ವರರ ಪುತ್ಥಳಿ ನಿರ್ಮಾಣ ಮಾಡಲು ಶಾಸಕ ಎಚ್.ಪಿ. ಸ್ವರೂಪ್ ಚಿಂತನೆ ಮಾಡಿದ್ದು ಚನ್ನರಾಯಪಟ್ಟಣದಲ್ಲೂ ಪ್ರತಿಮೆ ನಿಮಾಣ ಮಾಡಲಾಗುವುದು. ರಾಜ್ಯದ ವಿವಿಧ ಜಿಲ್ಲೆಗಳಿಂದ ಸ್ವಾಮೀಜಿಗಳು ಈ ಕಾರ್ಯಕ್ರಮಕ್ಕೆ ಬಂದಿರುವುದು ಶಕ್ತಿ ಬಂದಂತಾಗಿದೆ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.