ಹಳೇಬೀಡು: ಬಸವೇಶ್ವರ ಜಯಂತಿ ಪ್ರಯುಕ್ತ ಹಳೇಬೀಡಿನಲ್ಲಿ ಭಾನುವಾರ ಸಂಜೆ ವೈಭವದ ಮೆರವಣಿಗೆ ನಡೆಯಿತು. ಕಲ್ಮಠ ಬೀದಿಯ ಮಲ್ಲೇಶ್ವರ ದೇವಾಲಯದಲ್ಲಿ ಅಭಿಷೇಕ ಹಾಗೂ ಪೂಜಾ ವಿಧಾನ ನೆರವೇರಿತು.
ವಾದ್ಯ ವೈಭವ, ವಚನ ಗಾಯನ ಹಾಗೂ ಘೋಷಣೆಯೊಂದಿಗೆ ಸಂಜೆ ಪುಷ್ಪಾಲಂಕೃತ ಮಂಟಪದಲ್ಲಿ ಬಸವೇಶ್ವರರ ಚಿತ್ರವನ್ನು ಆರೋಹಣ ಮಾಡಲಾಯಿತು. ಪೂಜೆ ನೆರವೇರಿಸಿದ ನಂತರ ಮೆರವಣಿಗೆಗೆ ಚಾಲನೆ ನೀಡಲಾಯಿತು.
ಡೊಳ್ಳು ಕುಣಿತ ಹಾಗೂ ಚಂಡೆ ನೃತ್ಯದೊಂದಿಗೆ ಮೆರವಣಿಗೆ ಸಾಗಿತು. ಮಲ್ಲೇಶ್ವರ ದೇವಾಲಯದಿಂದ ಸಾಗಿದ ಮೆರವಣಿಗೆ ರಂಗನಾಥ ಸ್ವಾಮಿ ದೇವಾಲಯ ವೃತ್ತಕ್ಕೆ ಬಂದು ತಲುಪಿದಾಗ ಭಾರೀ ಸಂಖ್ಯೆಯ ಜನ ಜಮಾಯಿಸಿದ್ದರು. ಬ್ರಾಹ್ಮಣರ ಬೀದಿ, ಹೊಯ್ಸಳ ದೇವಾಲಯ ರಸ್ತೆ ಮುಖಾಂತರ ಸಾಗಿದ ಮೆರವಣಿಗೆ ಬೇಲೂರು ರಸ್ತೆ, ರಾಜನಶಿರಿಯೂರು ವೃತ್ತದಲ್ಲಿ ಚಲಿಸಿ ಮಲ್ಲೇಶ್ವರ ದೇಗುಲಕ್ಕೆ ಬಂದು ಸೇರಿತು.
ಯುವಕರು ಡೊಳ್ಳಿನ ಸದ್ದಿಗೆ ಹೆಜ್ಜೆ ಹಾಕಿ ಸಂಭ್ರಮಿಸಿದರು. ಪಟಾಕಿ ಸಿಡಿಸಿ ಹರ್ಷ ವ್ಯಕ್ತಪಡಿಸಿದರು. ಶ್ವೇತ ವರ್ಣದ ಉಡುಪಿನೊಂದಿಗೆ ಹೆಗಲಿನಲ್ಲಿ ಕೇಸರಿ ಬಣ್ಣದ ಟವೆಲ್ ಧರಿಸಿದ ಹಿರಿಯರು ಮೆರವಣಿಗೆಯಲ್ಲಿ ಸಾಗಿದರು. ಮೆರವಣಿಗೆಯಲ್ಲಿ ಅಲಂಕೃತ ಜೋಡೆತ್ತುಗಳು ಠೀವಿಯಿಂದ ಹೆಜ್ಜೆ ಹಾಕಿದವು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.