ಬೇಲೂರು: ಪ್ರಧಾನ ಮಂತ್ರಿ ಆವಾಜ್ ಯೋಜನೆ ಅನುಷ್ಠಾನಗೊಳಿಸಲು ನಿವೇಶನ ಮತ್ತು ವಸತಿ ರಹಿತರ ಮಾಹಿತಿಯನ್ನು ಪುರಸಭೆ ಅಧಿಕಾರಿಗಳು ಒಂದುವಾರದೊಳಗೆ ಸಂಗ್ರಹಿಸಬೇಕು, ಇಲ್ಲವಾದಲ್ಲಿ ಜಿಲ್ಲಾಧಿಕಾರಿಗಳ ಗಮನಕ್ಕೆ ತಂದು ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಸಂಸದ ಶ್ರೇಯಸ್ ಪಾಟೇಲ್ ಎಚ್ಚರಿಸಿದರು.
ಶುಕ್ರವಾರ ಇಲ್ಲಿ ಹಮ್ಮಿಕೊಂಡಿದ್ದ ಕೇಂದ್ರ ಸರ್ಕಾರದ ಪ್ರಧಾನ ಮಂತ್ರಿ ಆವಾಸ್ ಯೋಜನೆ ಅನುಷ್ಠಾನ ಸಭೆಯಲ್ಲಿ ಅವರು ಮಾತನಾಡಿದರು. ಪ್ರತಿ ವಾರ್ಡ್ಗಳಿಗೆ ಪುರಸಭೆಯ ಸಿಬ್ಬಂದಿ ತೆರಳಿ ನಿವೇಶನ, ವಸತಿ ರಹಿತರು, ಜೋಪಡಿ ಮನೆಗಳ ನಿವಾಸಿಗರನ್ನು ಗುರುತಿಸಿ ಮೊಬೈಲ್ ಆ್ಯಪ್ನಲ್ಲಿ ವಿವರ ದಾಖಲಿಸಬೇಕು. ಪಂಚಾಯಿತಿ ಸಮೀಕ್ಷೆ ನಡೆಸಲಾಗುತ್ತಿದೆ. ನಮ್ಮ ಜಿಲ್ಲೆಯಲ್ಲಿ ಎಷ್ಟು ವಸತಿ ರಹಿತರು ಇದ್ದಾರೆ ಎಂಬ ಬಗ್ಗೆ ಕೇಂದ್ರ ಸರ್ಕಾರಕ್ಕೆ ಮನದಟ್ಟು ಮಾಡುವ ಪ್ರಯತ್ನ ಇದಾಗಿದೆ. ಸಹಾಯಧನ ನೀಡಿ ವಸತಿ ಯೋಜನೆಯಡಿ ಫಲಾನುಭವಿಗಳಿಗೆ ಅನುಕೂಲ ಮಾಡಿಕೊಡಲಾಗುವುದು. ಪ್ರಸ್ತುತ ಯೋಜನೆಯಡಿ ನಿವೇಶನ ರಹಿತರಿಗೆ ₹1.5ಲಕ್ಷ ಪ್ರೋತ್ಸಾಹ ಧನ ನೀಡಲಾಗುತ್ತದೆ. ₹9ಲಕ್ಷ ವರೆಗಿನ ಸಾಲ ನೀಡಲಾಗುವುದು ಎಂದು ತಿಳಿಸಿದರು.
ಕಾಮಗಾರಿ ಹಾಗೂ ಟೆಂಟರ್ಗಳ ಬಗ್ಗೆ ಮಾತನಾಡಿದ ಸಂಸದ ಶ್ರೇಯಸ್ ಪಟೇಲ್ , ‘ಪುರಸಭೆ ಸದಸ್ಯರ ಗಮನಕ್ಕೆ ಬರದೆ ಅಗಿರುವ ಕಾಮಗಾರಿಗಳ ಟೆಂಡರ್ ರದ್ದುಪಡಿಸಿ, ಸಭೆ ನಡೆಸಿ, ಅನುಮೊದನೆ ಪಡೆದು ಮರು ಟೆಂಡರ್ ಕರೆಯಬೇಕು’ ಎಂದು ಪುರಸಭೆ ಅಧಿಕಾರಿಗಳಿಗೆ ಸೂಚಿಸಿದರು.
ಪುರಸಭೆ ಅಧ್ಯಕ್ಷೆ ಉಷಾ ಸತೀಶ್, ಯೋಜನೆ ನಿರ್ದೇಶಕ ತ್ಯಾಗರಾಜ್, ಸಿಎಲ್ಟಿಸಿ ಅಧಿಕಾರಿ ಸೌಮ್ಯ, ಮುಖ್ಯಾಧಿಕಾರಿ ಬಸವರಾಜು ಟಾಕಪ್ಪ ಶಿಗ್ಗಾವಿ, ಕಂದಾಯ ಅಧಿಕಾರಿ ಗೋಪಿ, ಕಂದಾಯ ನಿರೀಕ್ಷಕ ಲಕ್ಷ್ಮಣ್, ಆಶ್ರಯ ಅಧಿಕಾರಿ ಪೃಥ್ವಿ, ಆರೋಗ್ಯಾಧಿಕಾರಿಗಳಾದ ಲೋಹಿತ್, ಜ್ಯೋತಿ, ಕಿರಿಯ ಎಂಜಿನಿಯರ್ ಮೋಹನ್, ಹಾಗೂ ಪುರಸಭೆ ಸಿಬ್ಬಂದಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.