ಬೇಲೂರು: ಅವರೆಲ್ಲರೂ ಆಪ್ತ ಸ್ನೇಹಿತರು. ಚೆನ್ನಾಗಿ ಓದಿ ಉತ್ತಮ ಭವಿಷ್ಯರೂಪಿಸಿಕೊಳ್ಳಬೇಕೆಂಬ ಹೊಂಗನಸು ಕಟ್ಟಿಕೊಂಡಿದ್ದರು. ಓದು, ಓಡಾಟದ ಸಂದರ್ಭದಲ್ಲಿ ಜೊತೆ ಜೊತೆಯಾಗಿಯೇ ಇದ್ದವರ ಬದುಕಿನಲ್ಲಿ ವಿಧಿ ತನ್ನ ಅಟ್ಟಹಾಸ ಮೆರೆದಿದೆ.
ತಾಲ್ಲೂಕಿನ ಸಂಕೇನಹಳ್ಳಿ ಗಡಿ ತಿರುವಿನಲ್ಲಿ, ರಾಷ್ಟ್ರೀಯ ಹೆದ್ದಾರಿಯಲ್ಲಿಮಂಗಳವಾರ ಮಧ್ಯಾಹ್ನ ಸಾರಿಗೆ ಬಸ್ ಮತ್ತು ಮಾರುತಿ ಆಲ್ಟೊ ಕಾರಿನನಡುವೆ ಸಂಭವಿಸಿದ ರಸ್ತೆ ಅಪಘಾತದಲ್ಲಿ ಐವರು ವಿದ್ಯಾರ್ಥಿಗಳು ತಮ್ಮ ಜೀವನ ಅಂತ್ಯಗೊಳಿಸಿಕೊಂಡಿದ್ದಾರೆ.
ಬೆಳೆಯುವ ಮಕ್ಕಳು ಕಣ್ಮುಂದೆಯೇ ಮೃತಪಟ್ಟಿದ್ದು ಕುಟುಂಬಸ್ಥರು, ಸಂಬಂಧಿಕರ ಆಕ್ರಂದನವನ್ನು ಮುಗಿಲು ಮುಟ್ಟಿಸಿತ್ತು. ಆಸ್ಪತ್ರೆ ಬಳಿ ತಮ್ಮ ಮಕ್ಕಳನ್ನು ಕಳೆದುಕೊಂಡು ರೋದಿಸುತ್ತಿದ್ದ ದೃಶ್ಯ ಮನಕಲಕಿತು. ನೆರೆದಿದ್ದವರ ಕಣ್ಣಾಲಿಗಳು ತೇವಗೊಂಡಿದ್ದವು.
ಪಟ್ಟಣದ ಜೆ.ಪಿ.ನಗರ ಕೋಟೆ ನಿವಾಸಿಗಳಾದ ಹಸನ್ ಮೋಹಿನ್ (20),ರಿಹಾನ್ ಪಾಷ (19), ಮೊಹಮದ್ ಕೈಫ್(18), ಹೊಸನಗರದ ಮೊಹಮ್ಮದ್ಜಿಲಾನಿ (20), ಎಂ.ಕೆ.ಹೊಸಕೊಪ್ಪಲಿನ ಅಕ್ಮಲ್ಪಾಷ (19) ಮೃತದುರ್ದೈವಿಗಳು. ಆತ್ಮೀಯ ಸ್ನೇಹಿತರು ಸಾವಿನಲ್ಲೂ ಒಂದಾಗಿದ್ದಾರೆ.
ಅಪಘಾತದ ತೀವ್ರತೆಗೆ ಆಲ್ಟೊ ಕಾರು ಬಹುತೇಕ ನಜ್ಜುಗುಜ್ಜಾಗಿದ್ದು,ಮೃತದೇಹಗಳು ಹೊರ ತೆಗೆಯಲಾಗದಷ್ಟು ವಿರೂಪವಾಗಿದ್ದವು. ಬಸ್ಮುಂಭಾಗ ಸಹ ಜಖಂಗೊಂಡಿದೆ. ಬಸ್ನಲ್ಲಿದ್ದ ಕೆಲವು ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯಗಳಾಗಿವೆ.
ಅಪಘಾತಕ್ಕೆ ಅತಿವೇಗವೇ ಕಾರಣ ಎನ್ನಲಾಗಿದ್ದು, ತಮ್ಮ ಮುಂದೆ ಚಲಿಸುತ್ತಿದ್ದಮತ್ತೊಂದು ವಾಹನವನ್ನು ಹಿಂದಿಕ್ಕಲು ಹೋಗಿ ಎದುರಿನಿಂದ ಬರುತ್ತಿದ್ದ ಸಾರಿಗೆಬಸ್ಗೆ ಕಾರು ಡಿಕ್ಕಿ ಹೊಡೆದಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಕಾರಿನ ಒಳಗೆ ಸಿಲುಕಿದ್ದ ಮೃತದೇಹಗಳನ್ನು ಹೊರ ತೆಗೆಯಲು ಪೊಲೀಸರುಹರಸಾಹಸಪಟ್ಟರು. ಅಪಾರ ಮಂದಿ ಜಮಾಯಿಸಿದ್ದರಿಂದಕೆಲ ಹೊತ್ತು ಹಾಸನ-ಬೇಲೂರು ನಡುವಿನ ರಾಷ್ಟ್ರೀಯ ಹೆದ್ದಾರಿ ಸಂಚಾರ ಅಸ್ತವ್ಯಸ್ತವಾಗಿತ್ತು.
ಮೃತರಲ್ಲಿ ರಿಹಾನ್ ಹಾಸನದ ಎನ್ಡಿಆರ್ಕೆ ಕಾಲೇಜಿನಲ್ಲಿ ದ್ವಿತೀಯ ವರ್ಷದಬಿ.ಕಾಂ ಓದುತ್ತಿದ್ದರೆ, ಉಳಿದ ನಾಲ್ವರು ಪಟ್ಟಣದ ವಿದ್ಯಾವಿಕಾಸ ಕಾಮರ್ಸ್ಕಾಲೇಜಿನಲ್ಲಿ ಪಿಯುಸಿ ಓದುತ್ತಿದ್ದರು.
ಮಂಗಳವಾರ ಪೂರ್ವ ಸಿದ್ಧತಾ ಪರೀಕ್ಷೆ ಮುಗಿದ ಬಳಿಕ ಎಲ್ಲರೂ ಸ್ನೇಹಿತ ರಿಹಾನ್ ಜೊತೆಗೂಡಿ ಕಾರಿನಲ್ಲಿ ಹಾಸನಕ್ಕೆ ಹೋಗುತ್ತಿದ್ದರು. ಸಂಕೇನಹಳ್ಳಿ ತಿರುವಿನಲ್ಲಿ ವೇಗವಾಗಿ ಚಲಿಸಿದ ಕಾರು ಎದುರಿಂದ ಬರುತ್ತಿದ್ದ ಸಾರಿಗೆ ಬಸ್ಗೆ ಡಿಕ್ಕಿ ಹೊಡೆಯಿತು.
ಪರೀಕ್ಷೆ ಮುಗಿಸಿದ ಸಂಭ್ರಮ, ಓದುವ ಪುಸ್ತಕ ತರುವುದರ ಜೊತೆಗೆಹಾಸನದಲ್ಲಿ ಬಿ.ಕಾಂ ಓದುತ್ತಿದ್ದ ಸ್ನೇಹಿತನ ಪರೀಕ್ಷೆಯ ಪ್ರವೇಶ ಪತ್ರ ತರಲೆಂದುಹಾಸನಕ್ಕೆ ತೆರಳುತ್ತಿದ್ದವರು ಮಸಣ ಸೇರಿರುವುದು ಪೋಷಕರು, ಸಂಬಂಧಿಕರಲ್ಲಿ ನೋವು ತರಿಸಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.