ADVERTISEMENT

ಶ್ರೀರಾಮನ ಕುರಿತು ಅವಹೇಳನಕಾರಿ ಹೇಳಿಕೆ ಆರೋಪ: ಬಹಿರಂಗ ಚರ್ಚೆಗೆ ಬರದ ಭಗವಾನ್‌

​ಪ್ರಜಾವಾಣಿ ವಾರ್ತೆ
Published 2 ಜನವರಿ 2019, 16:14 IST
Last Updated 2 ಜನವರಿ 2019, 16:14 IST
ಪೇಜಾವರ ಮಠದ ವಿಶ್ವೇಶತೀರ್ಥ ಸ್ವಾಮೀಜಿ
ಪೇಜಾವರ ಮಠದ ವಿಶ್ವೇಶತೀರ್ಥ ಸ್ವಾಮೀಜಿ   

ಹಾಸನ: ‘ಶ್ರೀರಾಮನ ಕುರಿತು ಅವಹೇಳನಕಾರಿ ಹೇಳಿಕೆ ನೀಡುತ್ತಿರುವ ಸಾಹಿತಿ ಕೆ.ಎಸ್.ಭಗವಾನ್ ಸಾರ್ವಜನಿಕವಾಗಿ ಚರ್ಚೆಗೆ ಬರುವುದಿಲ್ಲ’ ಎಂದು ಪೇಜಾವರ ಮಠದ ವಿಶ್ವೇಶತೀರ್ಥ ಸ್ವಾಮೀಜಿ ಹೇಳಿದರು.

ನಗರದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ‘ಮೈಸೂರಿನಲ್ಲಿ ಖಾಸಗಿ ಸಂಸ್ಥೆಗಳು ಚರ್ಚೆಗೆ ವೇದಿಕೆ ಸಿದ್ಧಪಡಿಸಿದ್ದವು. ನಾನೂ ಆಹ್ವಾನ ನೀಡಿದ್ದೆ. ಬೇರೆ ಯಾರೂ ಬೇಡ ನಾನು ಅವರು ಇಬ್ಬರೇ ಚರ್ಚೆಯಲ್ಲಿ ಇರುತ್ತೇವೆ. ರಾಮಾಯಣ ಕುರಿತು ಅವರ ಎಲ್ಲ ಪ್ರಶ್ನೆಗಳಿಗೆ ಉತ್ತರಿಸುತ್ತೇನೆ. ಆದರೆ, ಅವರು ಬಹಿರಂಗ ಚರ್ಚೆಗೆ ಬರಲಿಲ್ಲ. ಜತೆಗೆ ಸರ್ಕಾರ ಅದಕ್ಕೆ ಅನುಮತಿ ಕೊಡಲಿಲ್ಲ’ ಎಂದು ತಿಳಿಸಿದರು.

‘ಸೂಕ್ಷ್ಮ ವಿಚಾರಗಳ ಕುರಿತು ಕಾರ್ಯಕ್ರಮ ಆಯೋಜಿಸಬೇಕೆಂದರೆ ಸರ್ಕಾರದ ಜವಾಬ್ದಾರಿಯು ಹೆಚ್ಚಿರುತ್ತದೆ. ಆದ್ದರಿಂದ ಇದಕ್ಕೆ ಬಹಿರಂಗ ವೇದಿಕೆ ಸೃಷ್ಟಿಸಿಕೊಡಲು ಸರ್ಕಾರದಿಂದ ಸಾಧ್ಯವಿಲ್ಲ. ಆದ್ದರಿಂದ ಭಗವಾನ್ ಅವರೇ ಖಾಸಗಿಯಾಗಿ ನಾನು ಇರುವಲ್ಲಿಗೆ ಬರಲಿ ಅಥವಾ ಅವರು ಹೇಳುವ ಜಾಗಕ್ಕೆ ನಾನು ಹೋಗುತ್ತೇನೆ. ಇದರಿಂದ ಸರ್ಕಾರದ ಬೊಕ್ಕಸದ ಮೇಲಿನ ಹೊರೆ ಕಡಿಮೆಯಾಗುತ್ತದೆ. ಅಪಾಯದ ಹೇಳಿಕೆ ನೀಡುತ್ತಿರುವುದರಿಂದ ಭದ್ರತೆಗೆ ಅವರಿಗಾಗಿ ಲಕ್ಷಾಂತರ ರೂಪಾಯಿ ಖರ್ಚು ಮಾಡಿರುವ ಕುರಿತು ನಾನೇನು ಹೇಳುವುದಿಲ್ಲ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ADVERTISEMENT

ತುಮಕೂರು ಸಿದ್ಧಗಂಗಾ ಸ್ವಾಮೀಜಿ ಸಮಾಜದ ದೊಡ್ಡ ಆಸ್ತಿ. ಶ್ರೀಗಳಿಗೆ ಚಿಕಿತ್ಸೆ ನೀಡುತ್ತಿರುವ ವೈದ್ಯರನ್ನು ಭೇಟಿಯಾಗಿದ್ದು, ಆರೋಗ್ಯದಲ್ಲಿ ಸುಧಾರಣೆಯಾಗಿದೆ ಎಂದಿದ್ದಾರೆ. ಶ್ರೀಗಳ ಆರೋಗ್ಯ ಸುಧಾರಿಸಲೆಂದು ದೇವರಲ್ಲಿ ಪ್ರಾರ್ಥಿಸುತ್ತೇನೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.