ADVERTISEMENT

ಶೆಟ್ಟಿಹಳ್ಳಿಯಿಂದ ಬೈಕ್‌ ರ್‍ಯಾಲಿ

ಕಟ್ಟಾಯ ಹೋಬಳಿ ಅಭಿವೃದ್ಧಿ ನಿರ್ಲಕ್ಷ್ಯ: ಆರೋಪ

​ಪ್ರಜಾವಾಣಿ ವಾರ್ತೆ
Published 22 ಡಿಸೆಂಬರ್ 2021, 17:03 IST
Last Updated 22 ಡಿಸೆಂಬರ್ 2021, 17:03 IST
‌ದೇವರಾಜೇಗೌಡ
‌ದೇವರಾಜೇಗೌಡ   

ಹಾಸನ: ‘ತಾಲ್ಲೂಕಿನ ಕಟ್ಟಾಯ ಹೋಬಳಿ ಅಭಿವೃದ್ಧಿ ನಿರ್ಲಕ್ಷ್ಯ ವಹಿಸಿರುವ ಜೆಡಿಎಸ್ ಶಾಸಕ ಎಚ್.ಕೆ. ಕುಮಾರಸ್ವಾಮಿ ಹಾಗೂ ಬಿಜೆಪಿ ಸರ್ಕಾರದ ವಿರುದ್ಧ ಡಿ. 24ರಂದು ಬೆಳಿಗ್ಗೆ 10 ಗಂಟೆಗೆ ಶೆಟ್ಟಿಹಳ್ಳಿಯಿಂದ ಹಾಸನದ ಬೈಪಾಸ್ ವರೆಗೂ ಬೈಕ್ ಜಾಥಾ ಹಮ್ಮಿಕೊಳ್ಳಲಾಗಿದೆ’ ಎಂದು ಕಾಂಗ್ರೆಸ್ ಮುಖಂಡ ದೇವರಾಜೇಗೌಡ ಹೇಳಿದರು.

‘ಕಟ್ಟಾಯ ಹೋಬಳಿ ಹೆಚ್ಚು ಜನಸಂಖ್ಯೆ ಹೊಂದಿದ್ದರೂ ಅಭಿವೃದ್ಧಿಯಾಗಿಲ್ಲ. ಮೂರು ಚುನಾವಣೆಯಲ್ಲೂ ಜೆಡಿಎಸ್ ಶಾಸಕರು ಆಯ್ಕೆಯಾಗಿದ್ದಾರೆ. ಕಟ್ಟಾಯ ಹೋಬಳಿ 2009ರ ವರೆಗೆ ಹಾಸನ ವಿಧಾನ ಸಭಾ ಕ್ಷೇತ್ರಕ್ಕೆ ಸೇರಿತ್ತು. ನಂತರ ನಡೆದ ವಿಧಾನಸಭಾ ಕ್ಷೇತ್ರವಾರು ಮರು ವಿಂಗಡಣೆ ವೇಳೆ ಸಕಲೇಶಪುರ ಮೀಸಲು ಕ್ಷೇತ್ರಕ್ಕೆ ಸೇರಿಸಲಾಯಿತು’ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

‘ಒಕ್ಕಲಿಗ ಸಮುದಾಯ ಹೆಚ್ಚು ಇದ್ದ ಕಾರಣ ಹಾಗೂ ಪ್ರಬಲವಾಗಿ ಕಾಂಗ್ರೆಸ್ ಪಕ್ಷವನ್ನೇ ಬೆಂಬಲಿಸುತ್ತಿದ್ದುದರಿಂದ ಉದ್ದೇಶ ಪೂರ್ವಕವಾಗಿ ಸಕಲೇಶಪುರ ಮೀಸಲು ಕ್ಷೇತ್ರಕ್ಕೆ ಸೇರ್ಪಡೆ ಮಾಡಿದರು.ಶೆಟ್ಟಿಹಳ್ಳಿಯಿಂದ ಹಾಸನಕ್ಕೆ ರಸ್ತೆ ವಿಸ್ತರಣೆ, ಯಗಚಿ ಹೊಳೆಗೆ ಅಡ್ಡಲಾಗಿ ಸೇತುವೆ ನಿರ್ಮಾಣ, ಶೆಟ್ಟಿಹಳ್ಳಿ ಚರ್ಚ್ ಕಟ್ಟಡವನ್ನು ಸ್ಮಾರಕವನ್ನಾಗಿ ಮಾಡಿ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಪ್ರಯತ್ನ ಕೂಡ ಮಾಡಿಲ್ಲ’ ಎಂದು ಆರೋಪಿಸಿದರು.

ADVERTISEMENT

‘ಶೆಟ್ಟಿಹಳ್ಳಿಯಿಂದ ಹಾಸನದವರೆಗಿನ ರಸ್ತೆ ತುಂಬಾ ಚಿಕ್ಕದಾಗಿದ್ದು, 30 ವರ್ಷಗಳಿಂದ ಡಾಂಬರ್ ಕಂಡಿರುವುದಿಲ್ಲ. ವಿಸ್ತರಣೆ ಕೂಡ ಮಾಡಿಲ್ಲ. ನಿತ್ಯ ಹತ್ತಾರು ಅಪಘಾತಗಳು ಆಗುತ್ತವೆ. ಈ ಮೂಲಕ ಪ್ರಾಣ ಹಾನಿಯಾಗುತ್ತಿದೆ’ ಎಂದು ದೂರಿದರು.

ಸುದ್ದಿಗೋಷ್ಠಿಯಲ್ಲಿ ಮುಖಂಡರಾದ ಮಲ್ಲಿಗೆವಾಳ್ ದೇವಪ್ಪ, ನಾಯಕರಹಳ್ಳಿ ಅಶೋಕ್, ರಂಗಸ್ವಾಮಿ, ಕುಮಾರ್ ಶೆಟ್ಟಿ, ಮಹಮದ್ ಗೌಸ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.