
ಹಾಸನ: ಜಿಲ್ಲಾ ಸಿವಿಲ್ ಎಂಜಿನಿಯರ್ಸ್ ಮತ್ತು ಆರ್ಕಿಟೆಕ್ಟ್ ಸಂಘ ಮತ್ತು ಯು.ಎಸ್. ಕಮ್ಯುನಿಕೇಶನ್ ವತಿಯಿಂದ ನಗರದ ಜ್ಞಾನಾಕ್ಷಿ ಕಲ್ಯಾಣ ಮಂಟಪದಲ್ಲಿ ಆರಂಭವಾಗಿರುವ ಮೂರು ದಿನಗಳ ಕಟ್ಟಡ ಸಾಮಗ್ರಿಗಳ ವಸ್ತು ಪ್ರದರ್ಶನವನ್ನು ಶುಕ್ರವಾರ ಶೇಖರ್ ಪೇಂಟ್ಸ್ ಆಂಡ್ ಸಿರಾಮಿಕ್ಸ್ ಶೋರೂಂ ಮಾಲೀಕ ಎಚ್.ಕೆ. ಶೇಖರ್, ರಂಗನಾಥ ಸ್ಟೀಲ್ ಟ್ರೇಡರ್ಸ್ ಮಾಲೀಕ ರವೀಂದ್ರ ಪ್ರಸಾದ್ ಉದ್ಘಾಟಿಸಿದರು.
ಎಚ್.ಕೆ.ಶೇಖರ್ ಮಾತನಾಡಿ, ವಿವಿಧ ಕಂಪನಿಗಳ ಹಲವಾರು ಕಟ್ಟಡ ತಯಾರಿಕಾ ಸಾಮಗ್ರಿಗಳು ಹಾಸನಕ್ಕೆ ಬಂದಿರುವುದು ಸಂತೋಷದ ವಿಚಾರ. ಕಟ್ಟಡ ತಯಾರಿಕೆಗೆ ಬೇಕಾದ ಎಲ್ಲ ರೀತಿಯ ವಸ್ತುಗಳು ತಯಾರಿಕರಿಂದ ನೇರವಾಗಿ ಗ್ರಾಹಕರಿಗೆ ಪ್ರದರ್ಶನಗೊಳ್ಳುತ್ತಿರುವುದು ಸಂತಸದ ಸಂಗತಿ ಎಂದರು.
ಮುಂದಿನ ದಿನಗಳಲ್ಲಿ ಶೇಖರ್ ಪೇಂಟ್ಸ್ ಅಂಡ್ ಸಿರಾಮಿಕ್ಸ್ ವತಿಯಿಂದ ವಸ್ತು ಪ್ರದರ್ಶನಕ್ಕೆ ಇನ್ನೂ ಹೆಚ್ಚಿನ ಬೆಂಬಲ ನೀಡುವುದಾಗಿ ಹೇಳಿದರು.
ರವೀಂದ್ರ ಪ್ರಸಾದ್ ಮಾತನಾಡಿ, ಈ ರೀತಿಯ ವಸ್ತು ಪ್ರದರ್ಶನ ಬಂದಿರುವುದು ಜನರಿಗೆ ಅನುಕೂಲ ಕಲ್ಪಿಸಿದಂತಾಗಿದೆ. ಎಲ್ಲ ಕಂಪನಿಯ ಪ್ರತಿನಿಧಿಗಳು ನೇರವಾಗಿ ಗ್ರಾಹಕರಿಗೆ ಮಾಹಿತಿ ನೀಡುತ್ತಿರುವುದು ಪ್ರಯೋಜನಕಾರಿ ಎಂದರು.
ಹಾಸನ ಸಿವಿಲ್ ಎಂಜಿನಿಯರ್ಸ್ ಮತ್ತು ಆರ್ಕಿಟೆಕ್ಟ್ ಸಂಘದ ಅಧ್ಯಕ್ಷ ಮುರಳೀಧರ್ ಮಾತನಾಡಿ, ಹಾಸನ ಜಿಲ್ಲಾ ಸಿವಿಲ್ ಎಂಜಿನಿಯರ್ಸ್ ಮತ್ತು ಆರ್ಕಿಟೆಕ್ಟ್ಸ್ ಸಂಘದ ಪದಾಧಿಕಾರಿಗಳೆಲ್ಲರೂ ವಿಶ್ವಾಸ ಪೂರ್ಣ ಸಹಕಾರ ಕೊಡುವ ಮೂಲಕ ಈ ವಸ್ತು ಪ್ರದರ್ಶನಕ್ಕೆ ಸಹಕರಿಸಿದ್ದಾರೆ. ಮುಂದಿನ ದಿನಗಳಲ್ಲಿ ಗ್ರಾಹಕರಿಗೆ ಅನುಕೂಲವಾಗುವಂತೆ ವಸ್ತು ಪ್ರದರ್ಶನ ಆಯೋಜನೆ ಮಾಡಲಾಗುವುದು ಎಂದರು.
ಯುಎಸ್ ಕಮ್ಯೂನಿಕೇಶನ್ ವ್ಯವಸ್ಥಾಪಕ ಉಮಾಪತಿ ಮಾತನಾಡಿ, ಜಿಲ್ಲೆಯ ಜನತೆಗೆ ಉಪಯೋಗವಾಗಲೆಂದು ಈ ವಸ್ತು ಪ್ರದರ್ಶನ ಆಯೋಜಿಸಿದ್ದು, ಇಲ್ಲಿ ವಿವಿಧ ಕಂಪನಿಯ ಕಟ್ಟಡ ಸಾಮಾಗ್ರಿಗಳು ಬಂದಿದ್ದು ಇದರ ಸದುಪಯೋಗ ಪಡೆದುಕೊಳ್ಳುವಂತೆ ಮನವಿ ಮಾಡಿದರು.
ಸಂಘದ ಕಾರ್ಯದರ್ಶಿ ಬಾಬು ಮತ್ತು ಪದಾಧಿಕಾರಿಗಳು ಹಾಜರಿದ್ದರು. ಜ.7ರವರೆಗೆ ಪ್ರದರ್ಶನ ನಡೆಯಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.