ADVERTISEMENT

ಕೊಣನೂರು | ಎರಡು ದಿನಗಳಿಂದ ಮಳೆ: ಹೊಲಗಳಿಗೆ ನುಗ್ಗಿದ ನೀರು

​ಪ್ರಜಾವಾಣಿ ವಾರ್ತೆ
Published 28 ಜುಲೈ 2025, 5:50 IST
Last Updated 28 ಜುಲೈ 2025, 5:50 IST
ಕೊಣನೂರು ಸಮೀಪದ ಬಂಡಿಪಾಳ್ಯ ಗ್ರಾಮದ ಬಳಿ ಶುಂಠಿ ಜಮೀನಿಗೆ ನೀರು ನುಗ್ಗಿರುವುದು
ಕೊಣನೂರು ಸಮೀಪದ ಬಂಡಿಪಾಳ್ಯ ಗ್ರಾಮದ ಬಳಿ ಶುಂಠಿ ಜಮೀನಿಗೆ ನೀರು ನುಗ್ಗಿರುವುದು   

ಕೊಣನೂರು: ಎರಡು ದಿನಗಳಿಂದ ಉತ್ತಮ ಮಳೆಯಾಗುತ್ತಿದ್ದು, ಗಾಳಿ, ಮಳೆಯಿಂದಾಗಿ ಹಲವೆಡೆ ವಿದ್ಯುತ್‌ ಕಂಬಗಳು ಉರುಳಿವೆ. ಕಾವೇರಿ ನದಿಯ ಉಕ್ಕಿ ಹರಿಯುತ್ತಿದ್ದು, ಕೆಲವೆಡೆ ನೀರು ಹೊಲಗಳಿಗೆ ನುಗ್ಗಿದೆ.

ನದಿಯಂಚಿನ ತಗ್ಗು ಪ್ರದೇಶಗಳಗೆ ನೀರು ನುಗ್ಗತ್ತಿದೆ. ಶನಿವಾರ ರಾತ್ರಿ ಬೀಸಿದ ಬಿರುಗಾಳಿಗೆ ಕೆಸವತ್ತೂರಿನಲ್ಲಿ ಮರವೊಂದು ವಿದ್ಯುತ್ ಕಂಬದ ಮೇಲೆ ಬಿದ್ದಿದ್ದು, 10 ವಿದ್ಯುತ್ ಕಂಬಗಳು ಮುರಿದಿವೆ.

ಕೊಡಗಿನ ಹಾರಂಗಿ ಅಣೆಕಟ್ಟೆಯಿಂದ ಹೆಚ್ಚಿನ ನೀರನ್ನು ಕಾವೇರಿ ನದಿಗೆ ಹರಿಸುತ್ತಿರುವುದರಿಂದ ನದಿಯಲ್ಲಿ ನೀರಿನ ಹರಿವು ಹೆಚ್ಚುತ್ತಿದೆ. ಇದರಿಂದ ಕೊಣನೂರು ಮತ್ತು ರಾಮನಾಥಪುರ ಹೋಬಳಿಗಳ ವ್ಯಾಪ್ತಿಯ ಅನೇಕ ಗ್ರಾಮಗಳ ನದಿಯಂಚಿನ ತಗ್ಗು ಪ್ರದೇಶಗಳು ಜಲಾವೃತವಾಗಿವೆ.

ADVERTISEMENT

ಕಡವಿನಹೊಸಹಳ್ಳಿ, ಬಾನಗುಂದಿ, ವಡ್ವಾಣಹೊಸಳ್ಳಿ, ಕಟ್ಟೇಪುರ, ಗೊಬ್ಬಳಿ, ಮಾದಾಪುರ ಸೇರಿದಂತೆ ವಿವಿಧ ಗ್ರಾಮಗಳ ಹತ್ತಾರು ಎಕರೆಯಲ್ಲಿನ ಅಡಿಕೆ, ತೆಂಗು, ಶುಂಠಿ, ಜೋಳದ ಮತ್ತು ತಂಬಾಕು ಬೆಳೆಗಳು ಜಲಾವೃತವಾಗಿವೆ.

ಕಟ್ಟೇಪುರದ ಕೃಷ್ಣರಾಜ ಅಣೆಕಟ್ಟೆ ಹಿನ್ನೀರಿನಿಂದ ಬಂಡಿಪಾಳ್ಯ ಗ್ರಾಮಕ್ಕೆ ಹೋಗುವ ಸಂಪರ್ಕ ರಸ್ತೆ ಜಲಾವೃತವಾಗಿದೆ. ಪಕ್ಕದ ಅಡಿಕೆ ತೋಟ ಹಾಗೂ ಶುಂಠಿ ಹೊಲದಲ್ಲಿ ನೀರು ನಿಂತಿದೆ.

ಪುಣ್ಯಕ್ಷೇತ್ರ ರಾಮನಾಥಪುರದ ಕಾವೇರಿ ಸ್ನಾನಘಟ್ಟ ನೀರಿನಲ್ಲಿ ಮುಳುಗಿದ್ದು, ಘಟ್ಟಕ್ಕೆ ಇಳಿಯುವ ಮೆಟ್ಟಿಲುಗಳು ಬಹುತೇಕ ಜಲಾವೃತವಾಗಿವೆ.

ಕಟ್ಟೆಪುರದ ಕೃಷ್ಣರಾಜ ಅಣೆಕಟ್ಟೆಯ ಮೇಲಿನಿಂದ ರಭಸವಾಗಿ ನೀರು ಹರಿಯುತ್ತಿದ್ದು, ನೋಡುಗರನ್ನು ಸೆಳೆಯುತ್ತಿದೆ. ಈ ದೃಶ್ಯವನ್ನು ಕಣ್ತುಂಬಿಕೊಳ್ಳಲು ಸುತ್ತಲಿನ ಗ್ರಾಮಗಳ ಜನರು ಬರುತ್ತಿದ್ದು, ಸೆಲ್ಫಿ ತೆಗೆದುಕೊಳ್ಳುತ್ತಿದ್ದಾರೆ.

ಕೊಣನೂರು ಸಮೀಪದ ಕಟ್ಟೇಪುರದ ಕೃಷ್ಣರಾಜ ಅಣೆಕಟ್ಟೆಯ ಮೇಲಿನಿಂದ ನೀರು ಹರಿಯುತ್ತಿದ್ದು ನೋಡುಗರನ್ನು ಸೆಳೆಯುತ್ತಿದೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.