ADVERTISEMENT

ಕೇಂದ್ರದಿಂದ ಕಾರ್ಮಿಕರ ಒಡೆದಾಳುವ ನೀತಿ: ಹೇಮಲತಾ ಆರೋಪ

ಸಿಐಟಿಯು ಬಹಿರಂಗ ಸಮಾವೇಶದಲ್ಲಿ ರಾಷ್ಟ್ರೀಯ ಅಧ್ಯಕ್ಷೆ ಹೇಮಲತಾ ಆರೋಪ

​ಪ್ರಜಾವಾಣಿ ವಾರ್ತೆ
Published 16 ನವೆಂಬರ್ 2025, 4:50 IST
Last Updated 16 ನವೆಂಬರ್ 2025, 4:50 IST
ಸಿಐಟಿಯು ರಾಜ್ಯ ಸಮ್ಮೇಳನದ ಅಂಗವಾಗಿ ಶನಿವಾರ ಸಿಐಟಿಯು ಕಾರ್ಯಕರ್ತರು ಹಾಸನದಲ್ಲಿ ಪಥಸಂಚಲನ ನಡೆಸಿದರು
ಸಿಐಟಿಯು ರಾಜ್ಯ ಸಮ್ಮೇಳನದ ಅಂಗವಾಗಿ ಶನಿವಾರ ಸಿಐಟಿಯು ಕಾರ್ಯಕರ್ತರು ಹಾಸನದಲ್ಲಿ ಪಥಸಂಚಲನ ನಡೆಸಿದರು   

ಹಾಸನ: ‘ಆರ್‌ಎಸ್‌ಎಸ್‌ನ ಮಾರ್ಗದರ್ಶನದಲ್ಲಿ ನಡೆಯುತ್ತಿರುವ ಬಿಜೆಪಿ ಸರ್ಕಾರ, ಧರ್ಮವನ್ನು ಮುಂದೆ ತಂದು ಕಾರ್ಮಿಕರ ನಡುವೆ ಒಡೆದಾಳುವ ನೀತಿ ಅನುಸರಿಸುತ್ತಿದೆ’ ಎಂದು ಸಿಐಟಿಯು ರಾಷ್ಟ್ರೀಯ ಅಧ್ಯಕ್ಷೆ ಡಾ.ಕೆ.ಹೇಮಲತಾ ಆರೋಪಿಸಿದರು.

ಸಿಐಟಿಯುನ 16ನೇ ರಾಜ್ಯ ಸಮ್ಮೇಳನದ ಅಂತಿಮ ದಿನವಾದ ಶನಿವಾರ ನಗರದಲ್ಲಿ ನಡೆದ ಬಹಿರಂಗ ಸಭೆಯಲ್ಲಿ ಮಾತನಾಡಿದ ಅವರು, ‘ಒಗ್ಗಟ್ಟಾಗುವ ಕಾರ್ಮಿಕರನ್ನು ಚದುರಿಸುವ ಕೆಲಸ ಮಾಡಲಾಗುತ್ತಿದೆ’ ಎಂದರು.

‘ಬಂಡವಾಳಶಾಹಿ ವ್ಯವಸ್ಥೆಯಲ್ಲಿ ಕಾರ್ಮಿಕರ ಹಕ್ಕುಗಳನ್ನು ಹೇಗೆ ಕಸಿಯಲಾಗುತ್ತಿದೆ ಎಂಬುದನ್ನು ನಾವೆಲ್ಲರೂ ಕಂಡುಕೊಂಡಿದ್ದೇವೆ. ಇಂತಹ ಕಾರ್ಮಿಕ ವರ್ಗವನ್ನು ಒಡೆದಾಳುವ ನೀತಿಯನ್ನು ಕೇಂದ್ರ ಸರ್ಕಾರ ನಡೆಸುತ್ತಿದೆ. ದಲಿತರು, ಮಹಿಳೆಯರು, ಅಲ್ಪಸಂಖ್ಯಾತರ ಮೇಲಿನ ದಾಳಿ ಹತ್ತಿಕ್ಕುವ ಕೆಲ ನಿರ್ಣಯ ಅಂಗೀಕರಿಸಿದ್ದೇವೆ. ನೆರೆಯ ರಾಜ್ಯ ಕೇರಳದಲ್ಲಿ ಎಡಪಂಥೀಯ ಸರ್ಕಾರ ಆಡಳಿತದಲ್ಲಿದ್ದು, ಅಲ್ಲಿಯ ನೀತಿ ಜಾರಿಗೊಳಿಸಬೇಕು’ ಎಂದು ಆಗ್ರಹಿಸಿದರು.

ADVERTISEMENT

‘ಈ ಸಮ್ಮೇಳನವು ವಿಶಾಖಪಟ್ಟಣಂನಲ್ಲಿ ನಡೆಯಲಿರುವ ರಾಷ್ಟ್ರೀಯ ಸಮ್ಮೇಳನಕ್ಕೆ ಪೂರ್ವಭಾವಿಯಾಗಿದೆ. ಇಂತಹ ಹೋರಾಟಗಳಲ್ಲಿ ರೈತ, ಕಾರ್ಮಿಕರ ವಿರೋಧಿ ನೀತಿಗಳನ್ನು ಖಂಡಿಸಲಾಗುವುದು. ಅಂಗನವಾಡಿ ನೌಕರರು, ಆಶಾ ಕಾರ್ಯಕರ್ತೆಯರು, ಬೀಡಿ ಕಾರ್ಮಿಕರು ಸ್ವಚ್ಛತೆ ಕಾರ್ಮಿಕರ ವೇತನದ ಹಕ್ಕು, ಸಮಯದ ಹಕ್ಕುಗಳನ್ನು ಕಿತ್ತುಕೊಳ್ಳಲಾಗಿದೆ’ ಎಂದು ದೂರಿದರು.

‘ಮೂರು ದಿನಗಳ ರಾಜ್ಯ ಸಮ್ಮೇಳನದಲ್ಲಿ ನಿರಂತರ ಚರ್ಚೆ ಮಾಡಿ, ಕಾರ್ಮಿಕ ವರ್ಗ, ದುಡಿಯುವ ಜನರ ಮೇಲೆ ನಡೆಯುತ್ತಿರುವ ದಬ್ಬಾಳಿಕೆ ತಡೆಗಟ್ಟಲು, ಅವರ ಸ್ಥಿತಿ ಗತಿ ಕುರಿತು ಕಾರ್ಮಿಕ ವರ್ಗದ ಅನುಭವ ತಿಳಿದುಕೊಳ್ಳಲಾಗಿದೆ. ಅದಕ್ಕಾಗಿ ನಿರ್ಣಯ ಅಂಗೀಕಾರ ಮಾಡಿದ್ದೇವೆ’ ಎಂದರು.

ಎಲ್ಲ ಕಾರ್ಮಿಕರ ಬವಣೆಗಳ ಬಗ್ಗೆ ಚರ್ಚಿಸಲಾಗಿದೆ. ಇದರ ಯಾವ ರೀತಿಯ ಪರಿಹಾರ ಕ್ರಮಗಳನ್ನು ಕೈಗೊಳ್ಳಬೇಕು ಎಂಬುದನ್ನು ಕಂಡುಕೊಳ್ಳಬೇಕು ಎನ್ನುವ ಚಿಂತನೆಯನ್ನೂ ನಡೆಸಿದ್ದೇವೆ ಎಂದರು.

ದೇಶದಾದ್ಯಂತ ಕಾರ್ಮಿಕ ವರ್ಗದಲ್ಲಿ ಏಕತೆ ಮೂಡಿಸಬೇಕು. ಜನರನ್ನು ಒಗ್ಗೂಡಿಸಬೇಕು. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಅನುಸರಿಸುತ್ತಿರುವ ಕಾರ್ಮಿಕ ವಿರೋಧಿ ನೀತಿಗಳ ಬಗ್ಗೆ ಜಾಗೃತಿ ಮೂಡಿಸಬೇಕು ಎಂದು ಸಲಹೆ ನೀಡಿದರು.

ಸಿಐಟಿಯು ರಾಜ್ಯ ಘಟಕದ ಅಧ್ಯಕ್ಷ ಎಸ್. ವರಲಕ್ಷ್ಮಿ, ಕಾರ್ಯದರ್ಶಿ ಮೀನಾಕ್ಷಿ ಸುಂದರಂ, ಉಪಾಧ್ಯಕ್ಷ ವಿ.ಜಿ.ಕೆ. ನಾಯರ್‌, ಹಾಸನ ಜಿಲ್ಲಾ ಘಟಕದ ಧರ್ಮೇಶ್, ಸ್ವಾಗತ ಸಮಿತಿ ಅಧ್ಯಕ್ಷ ಪರಮಶಿವಯ್ಯ, ಯಮುನಾ ಗಾಂವ್ಕರ್‌, ಎಂ.ಬಿ. ಪುಷ್ಪಾ, ಪೃಥ್ವಿ, ಎಚ್.ಆರ್.ನವೀನ್ ಕುಮಾರ್, ರಮೇಶ್ ಮೊದಲಾದವರು ಇದ್ದರು.

ಇದಕ್ಕೂ ಮುನ್ನ ನಗರದ ಹೇಮಾವತಿ ಪ್ರತಿಮೆ ಬಳಿಯಿಂದ ಕೆಂಪು ಸಮವಸ್ತ್ರಧಾರಿಗಳ ಮೆರವಣಿಗೆ ನಡೆಯಿತು.

ಅಖಿಲ ಭಾರತ ಸಮ್ಮೇಳನ ವೇಳೆ ಕಟ್ಟಡ ಆಸಂಘಟಿತ ಕಾರ್ಮಿಕರು ಸೇರಿದಂತೆ ಎಲ್ಲ ಕಾರ್ಮಿಕರೂ ಹೋರಾಟ ತೀವ್ರಗೊಳಿಸಬೇಕು. ಸರ್ಕಾರಗಳನ್ನು ಬಡಿದೆಬ್ಬಿಸುವ ಕೆಲಸ ಮಾಡಬೇಕು
ಡಾ.ಕೆ.ಹೇಮಲತಾ ಸಿಐಟಿಯು ರಾಷ್ಟ್ರೀಯ ಅಧ್ಯಕ್ಷೆ

ಸಿಐಟಿಯು ಹೋರಾಟ ನಿರಂತರ

‘ಮುಂದಿನ 3 ವರ್ಷಗಳಲ್ಲಿ ಯಾವ ರೀತಿಯ ಕಾನೂನು ಬರಬೇಕು ಎಂಬುದನ್ನು ಸಿಐಟಿಯು ತೀರ್ಮಾನ ಮಾಡಿದೆ. ನಿರಂತರವಾಗಿ ಹೋರಾಟ ಮಾಡುತ್ತಿದ್ದೇವೆ. ಕಾರ್ಮಿಕರನ್ನು ಕಾಯಂ ಕಾರ್ಮಿಕರನ್ನಾಗಿ ನೇಮಿಸಿಕೊಳ್ಳಬೇಕು’ ಎಂದು ರಾಷ್ಟ್ರೀಯ ಕಾರ್ಯದರ್ಶಿ ಉಮೇಶ್ ಆಗ್ರಹಿಸಿದರು. ಕನಿಷ್ಠ ವೇತನಕ್ಕಾಗಿ ಕೇಳಿದರೆ ಪ್ರಧಾನಿ ಮೋದಿಗಳು ಶ್ರಮ ಏವ ಜಯತೇ ಎಂಬ ಘೋಷಣೆ ಕೊಟ್ಟಿದ್ದಾರೆ. ಇಡೀ ಶ್ರಮಿಕರನ್ನು ದಫನ್ ಮಾಡುವ ಕೆಲಸ ಮಾಡುತ್ತಿದ್ದಾರೆ ಎಂದು ಆಪಾದಿಸಿದರು. ‘ಬ್ರಿಟಿಷರ ಕಾಲದಲ್ಲಿಯೇ ಡಾ.ಬಿ.ಆರ್ ಅಂಬೇಡ್ಕರ್ ಜಾರಿಗೊಳಿಸಲು ಉದ್ದೇಶಿಸಿದ್ದ ಕಾನೂನು ಜಾರಿಯಾಗಬೇಕು. ಅದಕ್ಕಾಗಿ ನಿರಂತರ ಹೋರಾಟ ಮಾಡುತ್ತಿದರೂ ಕಾರ್ಮಿಕ ವಿರೋಧಿ ನೀತಿ ಅನುಸರಿಸಲಾಗುತ್ತಿದೆ. ಕಾರ್ಮಿಕರ ಶ್ರಮ ಸಂಹಿತೆಗಳನ್ನು ಜಾರಿಗೊಳಿಸಲಾಗುತ್ತಿಲ್ಲ’ ಎಂದು ಆರೋಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.