
ಚನ್ನರಾಯಪಟ್ಟಣ: ವಕೀಲರು ಹೊಸ ಕಾಯ್ದೆಯನ್ನು ಅಧ್ಯಯನ ಮಾಡುವ ಮೂಲಕ ಜ್ಞಾನವೃದ್ದಿಸಿಕೊಳ್ಳಬೇಕು. ಇದರಿಂದ ಕಕ್ಷಿದಾರರಿಗೆ ನ್ಯಾಯ ಒದಗಿಸುವ ಕೊಡುವಲ್ಲಿ ನೆರವಾಗುತ್ತದೆ ಎಂದು ಶಾಸಕ ಸಿ.ಎನ್. ಬಾಲಕೃಷ್ಣ ಹೇಳಿದರು.
ಪಟ್ಟಣದಲ್ಲಿ ಅಂದಾಜು 2.50 ವೆಚ್ಚದಲ್ಲಿ ನವೀಕರಣಗೊಂಡ ವಕೀಲರ ಸಂಘದ ಸಭಾಂಗಣದ ಉದ್ಘಾಟನಾ ಸಮಾರಂಭದಲ್ಲಿ ಬುಧವಾರ ಮಾತನಾಡಿದ ಅವರು, ಕಾನೂನಿಗೆ ಸಂಬಂಧಿಸಿದಂತೆ ವಕೀಲರು ಜೀವನಪರ್ಯಂತ ಅಧ್ಯಯನ ಮಾಡಬೇಕು. ಇದರಿಂದ ನ್ಯಾಯಾಲಯದಲ್ಲಿ ಸಮರ್ಥವಾಗಿ ವಾದ ಮಾಡಲು ಅನುಕೂಲವಾಗುತ್ತದೆ. ವೃತ್ತಪರತೆ ಹೆಚ್ಚಿಸಿಕೊಳ್ಳಬೇಕು. ವೃತ್ತಿ ಧರ್ಮ ಪಾಲಿಸಬೇಕು ಎಂದು ಹೇಳಿದರು.
ಈ ಹಿಂದೆ ಭರವಸೆ ನೀಡಿದಂತೆ 2.50 ಲಕ್ಷ ವೆಚ್ಚ ಮಾಡಿ ವಕೀಲರ ಸಭಾಂಗಣವನ್ನು ನವೀಕರಿಸಲಾಗಿದೆ. ಮುಂಬರುವ ದಿನಗಳಲ್ಲಿ ಸೃಳೀಯ ಶಾಸಕರ ಕ್ಷೇತ್ರಾಭಿವೃದ್ದಿ ಅನುದಾನದಲ್ಲಿ ವಕೀಲರ ಸಭಾಂಗಣದಲ್ಲಿ ಲಿಫ್ಟ್ ಅಳವಡಿಸುವ ಉದ್ದೇಶ ಹೊಂದಲಾಗಿದೆ. ಚನ್ನರಾಯಪಟ್ಟಣದಲ್ಲಿ 7 ನ್ಯಾಯಾಲಯಗಳಿವೆ. ಒಟ್ಟು 170 ವಕೀಲರು ಪ್ರಾಕ್ಟಿಸ್ ಮಾಡುತ್ತಿದ್ದಾರೆ. ಅದರಲ್ಲಿ 50 ಮಹಿಳಾ ವಕೀಲರಿದ್ದಾರೆ ಎಂದು ತಿಳಿಸಿದರು.
ಪಟ್ಟಣದಲ್ಲಿ 10 ಕೋಟಿ ವೆಚ್ಚದಲ್ಲಿ ನಿರ್ಮಿಸುತ್ತಿರುವ ನೂತನ ನ್ಯಾಯಾಲಯದ ಕಟ್ಟಡ ಕಾಮಗಾರಿ ಒಂದುವರೆ ತಿಂಗಳಲ್ಲಿ ಪೂರ್ಣಗೊಳ್ಳಲಿದೆ. ನೂತನ ನ್ಯಾಯಾಲಯದ ಕಟ್ಟಡದಲ್ಲಿ ಎರಡು ಲಿಫ್ಟ್ ಅಳವಡಿಸಲಾಗುವುದು ಎಂದರು.
ವಕೀಲರಸಂಘದ ಅಧ್ಯಕ್ಷ ಡಿ.ಕೆ. ಹರೀಶ್, ಉಪಾಧ್ಯಕ್ಷ ಪಿ. ದಿನೇಶ್, ಕಾರ್ಯದರ್ಶಿ ವಿ.ಸಿ. ಹೇಮಂತ್ಕುಮಾರ್, ಖಜಾಂಚಿ ಕೆ.ಎಲ್. ಚೇತನ್, ಜಂಟಿಕಾರ್ಯದರ್ಶಿ ಸುಶ್ಮಿತಾ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.