ADVERTISEMENT

ಭೂ ಸುಧಾರಣೆ ತಿದ್ದುಪಡಿ ಬೆಂಬಲಿಸಿ ರೈತರಿಗೆ ಮೋಸ

ಜೆಡಿಎಸ್‌ ವಿರುದ್ಧ ರೈತ ಸಂಘದ ಮುಖಂಡರ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 11 ಡಿಸೆಂಬರ್ 2020, 13:14 IST
Last Updated 11 ಡಿಸೆಂಬರ್ 2020, 13:14 IST

ಹಾಸನ: ‘ರೈತ ವಿರೋಧಿ ಎಪಿಎಂಸಿ ಹಾಗೂ ಕರ್ನಾಟಕ ಭೂ ಸುಧಾರಣಾ ತಿದ್ದುಪಡಿ ಕಾಯ್ದೆಯನ್ನು ಬೆಂಬಲಿಸುವ ಮೂಲಕ ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ ಅನ್ನದಾತರಿಗೆ ಮೋಸ ಮಾಡಿದ್ದಾರೆ’ ಎಂದು ರೈತ ಸಂಘದ ರಾಜ್ಯ ಉಪಾಧ್ಯಕ್ಷ ಆನೆಕೆರೆ ರವಿ ದೂರಿದರು.

ರೈತರ ಹೆಸರಿನಲ್ಲಿ ಅಧಿಕಾರ ಅನುಭವಿಸಿದ ಜೆಡಿಎಸ್ ನಾಯಕರು ರಾಜಕೀಯ ಲಾಭಕ್ಕಾಗಿ ಬಿಜೆಪಿಗೆ ಬೆಂಬಲ ನೀಡುತ್ತಿದ್ದಾರೆ. ದೆಹಲಿಯಲ್ಲಿ ಲಕ್ಷಾಂತರ ರೈತರು ಪ್ರತಿಭಟನೆ ನಡೆಸುತ್ತಿರುವುದರ ಅರಿವು ಅವರಿಗೆ ಇಲ್ಲ. ಗ್ಯಾಟ್ ಒಪ್ಪಂದದಿಂದ ಕೃಷಿ ಸಮುದಾಯ ಅನುಭವಿಸಿದ ಹೊಡೆತ ಹೇಳತೀರದು. ಅದೇ ಅನಾಹುತ ಮತ್ತೆ ಸಂಭವಿಸುಬಹುದು ಎಂಬ ಆತಂಕ ಎಲ್ಲರನ್ನು ಕಾಡುತ್ತಿದೆ. ಆದ್ದರಿಂದ ದೇಶದ ಕೋಟ್ಯಂತರ ರೈತರು ಬೀದಿಗಿಳಿದಿದ್ದಾರೆ’ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

‘ಎಚ್.ಡಿ.ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿದ್ದಾಗ ರೈತರ ಕೃಷಿ ಸಾಲ ಮನ್ನಾ ಮಾಡಿದ್ದು ಒಳ್ಳೆಯ
ಬೆಳವಣಿಗೆ.ಆದರೆ, ಸಾಲ ಮನ್ನಾ ಯೋಜನೆಯ ಲಾಭ ಸರಿಯಾಗಿ ರೈತರಿಗೆ ತಲುಪಲಿಲ್ಲ. ಅಧಿಕಾರಿಗಳು ರೈತರಲ್ಲಿ ಗೊಂದಲ ಉಂಟು ಮಾಡಿದರು. ಕುಮಾರಸ್ವಾಮಿ ಅವರ ಇತ್ತೀಚಿನ ನಡವಳಿಕೆ ಬೇಸರ ತರಿಸಿದೆ. ರೈತ ಸಂಘದ ರಾಜ್ಯ ಘಟಕದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಕುರಿತು ಅವಹೇಳನಕಾರಿಯಾಗಿ ಮಾತನಾಡುತ್ತಿರುವುದು ಸರಿಯಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.

ADVERTISEMENT

‘ಬಂಡವಾಳಶಾಹಿಗಳಿಗೆ ಅನುಕೂಲ ಮಾಡಿಕೊಡುತ್ತಿರುವ ಕೇಂದ್ರ ಸರ್ಕಾರದ ವಿರುದ್ಧ ಪ್ರಬಲ ಹೋರಾಟದ ಅನಿವಾರ್ಯತೆ ಇದೆ. ಡಿ. 14 ರಂದು ನಗರದಲ್ಲಿ ರಿಲಯನ್ಸ್ ಕಂಪನಿಯ ಕಚೇರಿಗಳ ಎದುರು ಪ್ರತಿಭಟನೆ ಹಮ್ಮಿಕೊಂಡಿದ್ದು, ಅಂಬಾನಿ ಒಡೆತನದ ಜಿಯೋ ಸಿಮ್‍ಗಳನ್ನು ಮೊಬೈಲ್‍ನಿಂದ ತೆಗೆದು ಹಾಕುವ ಅಭಿಯಾನ ಹಮ್ಮಿಕೊಳ್ಳಲಾಗಿದೆ’ ಎಂದು ಹೇಳಿದರು.

ರೈತ ಸಂಘದ ಮುಖಂಡರಾದ ಮೀಸೆ ಮಂಜಣ್ಣ, ಜವರೇಶ್, ಬಾಬು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.