ADVERTISEMENT

ಗ್ರಾಹಕರ ಗಮನ ಸೆಳೆದ ಚಿಣ್ಣರ ಸಂತೆ

ನುರಿತ ವ್ಯಾಪಾರಿಗಳಂತೆ ವಹಿವಾಟು ನಡೆಸಿದ ಮಕ್ಕಳು

​ಪ್ರಜಾವಾಣಿ ವಾರ್ತೆ
Published 19 ಏಪ್ರಿಲ್ 2019, 19:51 IST
Last Updated 19 ಏಪ್ರಿಲ್ 2019, 19:51 IST
ಅರಕಲಗೂಡಿನಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಚಿಣ್ಣರ ಸಂತೆಯಲ್ಲಿ ವ್ಯಾಪಾರ ನಡೆಸಿದ ಮಕ್ಕಳು
ಅರಕಲಗೂಡಿನಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಚಿಣ್ಣರ ಸಂತೆಯಲ್ಲಿ ವ್ಯಾಪಾರ ನಡೆಸಿದ ಮಕ್ಕಳು   

ಅರಕಲಗೂಡು: ಪಟ್ಟಣದಲ್ಲಿ ಶುಕ್ರವಾರ ‘ವಾರದ ಸಂತೆ’ ಮುಗಿಸಿ ಮನೆಗೆ ತೆರಳುತ್ತಿದ್ದವರಿಗೆ ಕೋಟೆ ದೊಡ್ಡಮ್ಮ ದೇವಾಲಯದ ಆವರಣದಲ್ಲಿ ನಡೆಯುತ್ತಿದ್ದ ಇನ್ನೊಂದು ಸಂತೆಯನ್ನು ಕಂಡು ಅಚ್ಚರಿ.

ಪಟ್ಟಣದಲ್ಲಿ ಎರಡು ಕಡೆಗಳಲ್ಲಿ ಸಂತೆ ನಡೆಯುತ್ತದೆಯೇ ಎಂಬ ಅಚ್ಚರಿ ಬಹುತೇಕರಿಗೆ ಕಾಡಿತ್ತು. ಆದರೆ, ಅದು ಏಕತಾರಿ ಸಾಂಸ್ಕೃತಿಕ ಸಂಘಟನೆ ಹಮ್ಮಿಕೊಂಡಿದ್ದ ‘ಹಾರೋಣ ಬಾ’ ಮಕ್ಕಳ ಬೇಸಿಗೆ ಶಿಬಿರದ ಪ್ರಯುಕ್ತ ಆಯೋಜಿಸಿದ್ದ ಚಿಣ್ಣರ ಸಂತೆ.

ಮಕ್ಕಳ ಸಂತೆಯಲ್ಲಿ ಕ್ಯಾರೆಟ್‌, ಬೀನ್ಸ್‌, ಸೌತೆಕಾಯಿ ಸೇರಿದಂತೆ ತರಕಾರಿ, ಸೊಪ್ಪು, ಮಾವು, ಕಲ್ಲಂಗಡಿ ಹಣ್ಣು, ಬಾಳೆಹಣ್ಣು, ನಿಂಬೆಹಣ್ಣು, ತೆಂಗಿನ ಕಾಯಿ, ಮೊಳಕೆ ಕಟ್ಟಿದ ಧಾನ್ಯಗಳಿಂದ ತಯಾರಿಸಿದ ಸಲಾಡ್, ಜಾಮೂನು, ಚುರುಮುರಿ, ಪಾನಿಪುರಿ, ತಂಪು ಪಾನೀಯಗಳನ್ನು ಮಾರಾಟ ಮಾಡಲಾಯಿತು.

ADVERTISEMENT

ಗ್ರಾಹಕರನ್ನು ಸೆಳೆಯಲು ಮಕ್ಕಳು ನಾನಾ ಕಸರತ್ತು ಮಾಡಿದರು. ನುರಿತ ವ್ಯಾಪಾರಿಗಳಂತೆ ಕಾರ್ಯನಿರ್ವಹಿಸಿದರು. ಸಂತೆಯಲ್ಲಿ 80ಕ್ಕೂ ಹೆಚ್ಚಿನ ಮಕ್ಕಳು ಪಾಲ್ಗೊಂಡಿದ್ದರು.

ಮಕ್ಕಳಿಗೆ ವ್ಯವಹಾರದ ಜ್ಞಾನವನ್ನು ಕಲಿಸುವ ಉದ್ದೇಶದಿಂದ ಸಂತೆಯನ್ನು ಹಮ್ಮಿಕೊಳ್ಳಲಾಗಿದೆ. ಮಕ್ಕಳು ಸಿದ್ಧ ವಸ್ತುಗಳನ್ನು ಅಂಗಡಿಗಳಲ್ಲಿ ಖರೀದಿಸಿ ಇಲ್ಲಿ ಮಾರಾಟಕ್ಕಿಟ್ಟಿದ್ದರು. ವಿವಿಧ ಆಹಾರ ಪದಾರ್ಥಗಳನ್ನು ಮನೆಗಳಲ್ಲೇ ತಯಾರಿಸಿ ತಂದಿದ್ದರು. ಹೆಚ್ಚಿನ ವಹಿವಾಟು ನಡೆಸಿದ ಮಕ್ಕಳಿಗೆ ಬಹುಮಾನ ನೀಡಿ ಪ್ರೋತ್ಸಾಹಿಸಲಾಗುವುದು ಎಂದು ಶಿಬಿರದ ವ್ಯವಸ್ಥಾಪಕ ದೇವಾನಂದ ಪ್ರಸಾದ್ ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.