ಹಾಸನ: ರಾಜ್ಯ ಬಜೆಟ್ ಅಧಿವೇಶನದಲ್ಲಿ ರೈತರ, ಕಾರ್ಮಿಕರ ಮತ್ತು ಜನಸಾಮಾನ್ಯರ ಪರವಾಗಿ ಶಾಸನ ರೂಪಿಸುವಂತೆ ಒತ್ತಾಯಿಸಿ ಫ಼ೆ. 18 ರಿಂದ 26 ರವರೆಗೆ ಜಿಲ್ಲೆಯ ಎಲ್ಲಾ ಶಾಸಕರಿಗೆ ಮೆರವಣಿಗೆಯಲ್ಲಿ ತೆರಳಿ ಮನವಿ ಸಲ್ಲಿಸಲಾಗುವುದು ಎಂದು ಸಿಐಟಿಯು ಜಿಲ್ಲಾ ಘಟಕದ ಅಧ್ಯಕ್ಷ ಧರ್ಮೇಶ್ ಹೇಳಿದರು.
ಕಾರ್ಮಿಕ, ಕೃಷಿ ಹಾಗೂ ಕರ್ನಾಟಕ ಭೂ ಸೂಧಾರಣೆ ಕಾಯ್ದೆ ತಿದ್ದುಪಡಿ, ವಿದ್ಯುತ್ ಖಾಸಗೀಕರಣ ಮಸೂದೆ, ಬೆಲೆ ಏರಿಕೆ ಮತ್ತು ಖಾಸಗೀಕರಣ ನೀತಿ ಹಿಂಪಡೆಯಬೇಕು. ಕಾರ್ಮಿಕರ ಮತ್ತು ರೈತರ ಆದಾಯ ಹೆಚ್ಚಳಕ್ಕೆ ಕಾರ್ಮಿಕರಿಗೆ ತಿಂಗಳಿಗೆಕನಿಷ್ಠ ₹24 ಸಾವಿರ ವೇತನ ನೀಡಬೇಕು. ರೈತರ ಉತ್ಪನ್ನಗಳಿಗೆ ಬೆಂಬಲ ಬೆಲೆ ನಿಗದಿಗೆ ಶಾಸನಾತ್ಮಕ ಕಾಯ್ದೆ ಜಾರಿ ಮಾಡಬೇಕು. ಬೆಲೆ ಏರಿಕೆ ಮತ್ತು ನಿರುದ್ಯೋಗ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಲು ಆಗ್ರಹಿಸಿ ಮಾ. 4 ರಿಂದ ಬೆಂಗಳೂರಿನಲ್ಲಿ ಕಾರ್ಮಿಕರ 'ಬಜೆಟ್ ಅಧಿವೇಶನ ಚಲೋ' ನಡೆಸಲಾಗುವುದು ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಈ ಹೋರಾಟದ ಪೂರ್ವಭಾವಿಯಾಗಿ ರಾಜ್ಯದ ಎಲ್ಲಾ ವಿಧಾನಸಭಾ ಕ್ಷೇತ್ರಗಳ ಶಾಸಕರಿಗೆ ಮನವಿ ಪತ್ರ ಸಲ್ಲಿಸಲಾಗುವುದು. ಫ಼ೆ. 18 ರಂದು ಆಲೂರು, 19 ಚನ್ನರಾಯಪಟ್ಟಣ, 20 ಹೊಳೆನರಸೀಪುರ, 22 ಹಾಸನ, 23 ಅರಕಲಗೂಡು, 24 ಅರಸೀಕೆರೆ, 25 ಸಕಲೇಶಪುರ ಮತ್ತು 26 ರಂದು ಬೇಲೂರಿನಲ್ಲಿಕಾರ್ಮಿಕರು ಶಾಸಕರ ಕಚೇರಿಗೆ ತೆರಳಿ, ಬಜೆಟ್ ಅಧಿವೇಶನದಲ್ಲಿ ರೈತರು, ಕಾರ್ಮಿಕರು ಮತ್ತು ಜನಸಾಮಾನ್ಯರ ಪರವಾಗಿ ನಿಲ್ಲುವಂತೆ ಮನವಿ ಮಾಡಲಾಗುವುದು ಎಂದರು.
ಗೋಷ್ಠಿಯಲ್ಲಿ ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಂ.ಬಿ. ಪುಷ್ಪ, ಗ್ರಾಮ ಪಂಚಾಯಿತಿ ನೌಕರರ ಸಂಘದ ಜಿಲ್ಲಾ
ಕಾರ್ಯದರ್ಶಿ ಅಶೋಕ್ ಅತ್ನಿ, ಅಂಗನವಾಡಿ ನೌಕರರ ಸಂಘದ ಜಿಲ್ಲಾ ಕಾರ್ಯದರ್ಶಿ ಜಯಂತಿ, ಬಿಸಿಯೂಟ ನೌಕರರ
ಸಂಘದ ಜಿಲ್ಲಾ ಖಜಾಂಚಿ ಕಲಾ, ಸಿಐಟಿಯು ಜಿಲ್ಲಾ ಕಾರ್ಯದರ್ಶಿ ಅರವಿಂದ್ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.