ಹಾಸನ: ಚನ್ನರಾಯಪಟ್ಟಣ ತಾಲ್ಲೂಕಿನ ಹಿರೀಸಾವೆ ಬಳಿ ಶನಿವಾರ ಸಂಜೆ ಲಾರಿ ಅಡ್ಡಗಟ್ಟಿದ ದುಷ್ಕರ್ಮಿಗಳು, ₹5.10 ಲಕ್ಷ ಮೌಲ್ಯದ 15,200 ಎಳೆನೀರು ಕಾಯಿಗಳನ್ನು ದರೋಡೆ ಮಾಡಿದ್ದಾರೆ.
ಶಾಂತಮ್ಮ ಎಂಬುವವರು ಖರೀದಿಸಿದ್ದ ಕಾಯಿಗಳನ್ನು ಜಮ್ಮು ಮತ್ತು ಕಾಶ್ಮೀರದ ರಾಜೌರಿ ಜಿಲ್ಲೆಯ ರಾಜ್ಸಿಂಗ್ ಅವರ ಲಾರಿಯಲ್ಲಿ ಸಾಗಿಸಲಾಗುತ್ತಿತ್ತು. ಶ್ರವಣಬೆಳಗೊಳದಿಂದ ಜುಟ್ಟನಹಳ್ಳಿ ಬಾರೆ ಮೂಲಕ ಹಿರಿಸಾವೆಗೆ ಬಂದಿದ್ದು, ಹಿಂದಿನಿಂದ ಕಾರಿನಲ್ಲಿ ಬಂದಿದ್ದ ನಾಲ್ಕೈದು ಜನರ ತಂಡ, ಹಿರೀಸಾವೆ ರೈಲ್ವೆ ಸೇತುವೆ ಬಳಿ ಲಾರಿಯನ್ನು ಅಡ್ಡಗಟ್ಟಿದೆ.
ರಾಜ್ಸಿಂಗ್ ಅವರಿಗೆ ಚಾಕು ತೋರಿಸಿ, ಹೇಳಿದ ಕಡೆ ಲಾರಿ ತೆಗೆದುಕೊಂಡು ಹೋಗುವಂತೆ ತಿಳಿಸಿದ್ದಾರೆ. 15 ರಿಂದ 20 ಕಿ.ಮೀ. ದೂರ ಬಂದು, ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿದ್ದಾರೆ. ಅಲ್ಲಿ ಲಾರಿಯನ್ನು ನಿಲ್ಲಿಸಿ, ರಾಜ್ಸಿಂಗ್ ಬಳಿ ಇದ್ದ ₹ 40ಸಾವಿರ ಕಿತ್ತುಕೊಂಡಿದ್ದಾರೆ. ರಾಜ್ಸಿಂಗ್ ಮತ್ತು ಲಾರಿ ಕ್ಲೀನರ್ ಅಜಯ್ ಸಿಂಗ್ ಅವರನ್ನು ಕಾರಿನಲ್ಲಿ ಕೂರಿಸಿದ್ದಾರೆ.
ಈ ಮಧ್ಯೆ ಮತ್ತೊಂದು ಲಾರಿಯನ್ನು ತಂದು, ಎಲ್ಲ ಎಳನೀರು ಕಾಯಿಗಳನ್ನು ಲೋಡ್ ಮಾಡಿಕೊಂಡು ಪರಾರಿಯಾಗಿದ್ದಾರೆ. ಹಿರೀಸಾವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.