ಬೇಲೂರು: ‘ಕಾಂಗ್ರೆಸ್ನವರು ದೇಶದೊಳಗೆ ಆಂತರಿಕ ಭಯೋತ್ಪಾದಕರು’ ಎಂದು ವಿಧಾನಪರಿಷತ್ತಿನ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಹೇಳಿದರು.
ಇಲ್ಲಿನ ಚನ್ನಕೇಶವಸ್ವಾಮಿ ದೇಗುಲಕ್ಕೆ ಶನಿವಾರ ಆಗಮಿಸಿ ಸುದ್ದಿಗಾರರೊಂದಿಗೆ ಮಾತನಾಡಿ,‘ದೇಶ ವಿಭಜನೆಯಾದಾಗ ಭಯೋತ್ಪಾದಕರು ಪಾಕಿಸ್ತಾನಕ್ಕೆ ಹೋದರು. ಆದರೆ, ಅವರನ್ನು ಬೆಂಬಲಿಸುವ ಕಾಂಗ್ರೆಸ್ನವರು ಇಲ್ಲಿಯೇ ಉಳಿದರು. ಪಾಕಿಸ್ತಾನ ಮೊದಲಿನಿಂದಲೂ ಭಾರತವನ್ನು ವಿರೋಧಿಸುತ್ತಾ ಬರುತ್ತಿದೆ. ಕಾರಣ ಕೇಳಿದರೆ ನೀವು ಸುಖವಾಗಿದ್ದೀರ, ಕಾಶ್ಮೀರಾ ಮತ್ತು ಪಿಒಕೆಯನ್ನು ನಮಗೆ ಬಿಟ್ಟುಕೊಡಿ ಅಂತಾರೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.
‘ರಾಜ್ಯ ಸರ್ಕಾರ ಗ್ಯಾರಂಟಿಗಳ ಹೆಸರಿನಲ್ಲಿ ಸಾಗುತ್ತಿದೆ. ಯಾವುದೇ ಅಭಿವೃದ್ದಿ ಮಾಡದೇ ವ್ಯವಸ್ಥೆಯನ್ನು ನಿರ್ವಹಿಸುವಲ್ಲಿ ಸೋತಿದೆ. ಭ್ರಷ್ಟಾಚಾರದಲ್ಲಿ ಮುಂದಿದ್ದು, ಮರೆಮಾಚಲು ಜಾತಿಗಣತಿ, ಒಳಮಿಸಲಾತಿ ಎಂದು ಏನಾದರು ವಿಷಯಗಳನ್ನು ತಂದು ಸರ್ಕಾರ ಮುಂದುವರೆಯುತ್ತಿದೆ’ ಎಂದರು.
‘ರಾಜ್ಯ ಸರ್ಕಾರ ಜನಮನ್ನಣೆ ಕಳೆದುಕೊಂಡಿದ್ದು ಇಂದೇ ವಿಧಾನಸಭೆ ಚುನಾವಣೆ ನಡೆದರೂ ಹೀನಾಯವಾಗಿ ಸೋಲುತ್ತದೆ. ಹಾಲಿನಿಂದ ಆಲ್ಕೋಹಾಲ್ವರೆಗೆ ಎಲ್ಲಾ ಬೆಲೆ ಏರಿಸಿ, ಅಗತ್ಯ ವಸ್ತುಗಳ ಮೇಲೆ ಹೆಚ್ಚಿನ ಶುಲ್ಕ ವಿಧಿಸಿದೆ’ಎಂದರು.
ಈ ಸಂದರ್ಭದಲ್ಲಿ ಶಾಸಕ ಎಚ್.ಕೆ.ಸುರೇಶ್, ರಾಷ್ಟ್ರೀಯ ತೆಂಗು ಅಭಿವೃದ್ದಿ ಮಂಡಳಿ ಉಪಾಧ್ಯಕ್ಷ ಬೆಣ್ಣೂರು ರೇಣುಕುಮಾರ್, ಮೂಡಿಗೆರೆ ಬಿಜೆಪಿ ಮುಖಂಡ ದೀಪಕ್ ದೊಡ್ಡಯ್ಯ, ಬಿಜೆಪಿ ತಾಲ್ಲೂಕು ಘಟಕದ ಅಧ್ಯಕ್ಷ ಕೌರಿ ಸಂಜಯ್, ಬಿಜೆಪಿ ರಾಜ್ಯ ಎಸ್.ಸಿ.ಮೋರ್ಚಾ ಕಾರ್ಯದರ್ಶಿ ಪರ್ವತಯ್ಯ, ಬಿಜೆಪಿ ಮುಖಂಡರಾದ ಮಂಜುನಾಥ್, ಮಲ್ಲಿಕಾರ್ಜುನ್ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.