ಹಾಸನ: ‘ಜೆಡಿಎಸ್ ಮುಖಂಡ ಕೃಷ್ಣೇಗೌಡರ ಹತ್ಯೆ ನಂತರ ಒಂದು ವಾರ ನನ್ನ ಮೇಲೆ ಹಾಗೂ ಗುತ್ತಿಗೆದಾರ ಅಶ್ವತ್ ನಾರಾಯಣ್ ಅವರ ಮೇಲೆ ನಿಗಾ ಇಡಲಾಗಿತ್ತು; ನನ್ನ ಹತ್ಯೆಗೂ ಸಂಚು ರೂಪಿಸಲಾಗಿತ್ತು’ ಎಂದು ಶಾಸಕ ಎಚ್.ಡಿ. ರೇವಣ್ಣ ಆರೋಪಿಸಿದರು.
ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿ, ‘ಇದಕ್ಕಾಗಿ ಹೊರ ಜಿಲ್ಲೆಯ ಯಾರು ಹಣದ ನೆರವು ನೀಡುತ್ತಿದ್ದಾರೆ ಎಂಬುದನ್ನು ಬಹಿರಂಗ ಮಾಡುತ್ತೇನೆ. ಕಾಲ ಬಂದಾಗ ಎಲ್ಲವನ್ನೂ ಹೇಳುತ್ತೇನೆ’ ಎಂದರು.
‘ಕೃಷ್ಣೇಗೌಡ ಕೊಲೆ ಪ್ರಕರಣದಲ್ಲಿ ಇಬ್ಬರು ಆರೋಪಿಗಳನ್ನು ಇನ್ನೂ ಬಂಧಿಸಿಲ್ಲ. ಅವರಿಗೆ ಯಾರು ನೆರವು ನೀಡುತ್ತಿದ್ದಾರೆ ಎಂಬುದೂ ಗೊತ್ತಿದೆ. ದೇವೇಗೌಡರ ಕುಟುಂಬವನ್ನು ಮುಗಿಸಬೇಕು ಎಂದು ನಾಲ್ಕು ವರ್ಷಗಳಿಂದ ದೊಡ್ಡ ಷಡ್ಯಂತ್ರಗಳು ನಡೆಯುತ್ತಿವೆ. ಅದರಲ್ಲಿ ದೊಡ್ಡವರ ಕೈವಾಡವಿದೆ. ಯಾವುದಕ್ಕೂ ನಾನು ಜಗ್ಗುವುದಿಲ್ಲ’ ಎಂದು ಹೇಳಿದರು.
‘ದೇವೇಗೌಡರ ಕುಟುಂಬವನ್ನು ಮುಗಿಸಲು ಹೋದರೆ ಒಂದಲ್ಲ ಒಂದು ದಿನ ಆ ಕುತಂತ್ರಕ್ಕೆ ಅವರೇ ಬಲಿಯಾಗುತ್ತಾರೆ. 40 ವರ್ಷದ ರಾಜಕೀಯದಲ್ಲಿ ಇಂಥದ್ದನ್ನೆಲ್ಲ ಕಂಡಿದ್ದೇನೆ’ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.