ಬೇಲೂರು: ಇತ್ತೀಚಿನ ದಿನಗಳಲ್ಲಿ ರೈತರು ಕೃತಕ ರಸಗೊಬ್ಬರ ಅತಿಯಾಗಿ ಬಳಸುತ್ತಿರುವುದರಿಂದ ಕೃಷಿ ಉತ್ಪಾದನೆ ಮತ್ತು ಪರಿಸರದ ಮೇಲೆ ದುಷ್ಪರಿಣಾಮ ಉಂಟಾಗುತ್ತಿವೆ ಎಂದು ಸಹಾಯಕ ಕೃಷಿ ನಿರ್ದೇಶಕ ಪರಮೇಶ್ ಹೇಳಿದರು.
ಇಲ್ಲಿನ ಸಹಾಯಕ ಕೃಷಿ ನಿರ್ದೇಶಕರ ಕಚೇರಿಯಲ್ಲಿ ಮಾತನಾಡಿದ ಅವರು, ಯೂರಿಯ ರಸಗೊಬ್ಬರವನ್ನು ಅತಿಯಾಗಿ ಬಳಸು ವುದರಿಂದ ಮಣ್ಣಿನ ಫಲವತ್ತತೆ ಹೆಚ್ಚಿಸುವ ಸೂಕ್ಷ್ಮಾಣು ಜೀವಿಗಳು ನಾಶವಾಗುತ್ತವೆ. ಅಂತರ್ಜಲ ಕಲುಷಿ ತವಾಗುತ್ತದೆ. ಆದ್ದ ರಿಂದ ಕೊಟ್ಟಿಗೆ ಗೊಬ್ಬರ, ಕಾಂಪೋಸ್ಟ್ ಗೊಬ್ಬರ, ಹಸಿರೆಲೆ ಗೊಬ್ಬರ ಹೆಚ್ಚು ಬಳಸಬೇಕು ಎಂದರು.
ಅಮೆರಿಕ, ಕೆನಡಾ, ಬ್ರಿಟನ್, ನ್ಯೂಜಿಲ್ಯಾಂಡ್, ಜಪಾನ್, ಯೂರೋಪ್ ದೇಶಗಳಲ್ಲಿ ಅನಾಮಧೇಯ ವ್ಯಕ್ತಿಗಳು ರೈತರ ಮನೆ ಬಾಗಿಲಿಗೆ ವಿವಿಧ ತಳಿಗಳ ಬಿತ್ತನೆ ಬೀಜದ ಪೊಟ್ಟಣ ಕಳುಹಿಸುತ್ತಿದ್ದು, ಈ ಬಿತ್ತನೆ ಬೀಜಗಳಿಂದ ಭೂಮಿ ಬಂಜರಾಗುತ್ತಿದೆ. ಈ ರೀತಿಯ ಪೊಟ್ಟಣ ಸ್ವೀಕರಿಸದಂತೆ ಕೇಂದ್ರ ಸಚಿವಾಲಯ ರಾಜ್ಯದ ರೈತರಿಗೆ ಸೂಚನೆ ನೀಡಿದೆ ಎಂದರು.
2020-21ನೇ ಸಾಲಿನಲ್ಲಿ ಇಲಾಖೆಯಿಂದ ಲಘು ನೀರಾವರಿ ಯೋಜನೆಯಡಿಯಲ್ಲಿ 177 ಉಪಕರಣಗಳು, 10 ಸಂಸ್ಕರಣಾ ಘಟಕಗಳು, 760 ತುಂತುರು ನೀರಾವರಿ ಘಟಕಗಳನ್ನು ವಿತರಿಸಲು ಕಾರ್ಯಕ್ರಮ ರೂಪಿಸಲಾಗಿದೆ. ಲಘು ನೀರಾವರಿ ಯೋಜನೆಯಡಿ ಶೇ 90ರಷ್ಟು ಸಹಾಯಧನದಲ್ಲಿ 63ಎಂ.ಎಂ.ನ 20 ಅಡಿಯ 30 ಸ್ಪ್ರಿಂಕ್ಲರ್ ಪೈಪ್ಗಳು, 5 ಜೆಟ್ಗಳನ್ನು ಸಾಮಾನ್ಯ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ರೈತರಿಗೆ ವಿತರಿಸಲಾಗುವುದು ಎಂದು ಅವರು ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.