ಹಾಸನ: ಕೋವಿಡ್ ಲಸಿಕಾ ಅಭಿಯಾನದಲ್ಲಿ ಜಿಲ್ಲೆಯಲ್ಲಿ ಗುರುತಿಸಿರುವ 18,659 ಫಲಾನುಭವಿಗಳ
ಪೈಕಿ ಈವರೆಗೂ 11,267 ಮಂದಿಗೆ ಲಸಿಕೆ ಹಾಕಿಸಿಕೊಂಡಿದ್ದಾರೆ.
ಶುಕ್ರವಾರದವರೆಗೂ ತಾಲ್ಲೂಕು ಆಸ್ಪತ್ರೆ, ಜಿಲ್ಲಾಸ್ಪತ್ರೆಯಲ್ಲಿ ಲಸಿಕೆ ನೀಡಲಾಗುತ್ತದೆ. ಎರಡನೇ ಹಂತದ
ಅಭಿಯಾನದಲ್ಲಿ ಪೊಲೀಸ್ ವರಿಷ್ಠಾಧಿಕಾರಿ ಆರ್.ಶ್ರೀನಿವಾಸ್ ಗೌಡ, ಜಿಲ್ಲಾ ಪಂಚಾಯಿತಿ ಮುಖ್ಯ
ಕಾರ್ಯನಿರ್ವಾಹಕ ಅಧಿಕಾರಿ ಭಾರತಿ, ಹಿಮ್ಸ್ ನಿರ್ದೇಶಕ ಡಾ.ರವಿಕುಮಾರ್, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಕೃಷ್ಣಮೂರ್ತಿ ಅವರು ಕೋವಿಡ್ ಲಸಿಕೆ ಪಡೆದರು.
‘ಕೋವಿಡ್ ಲಸಿಕೆ ಅಡ್ಡ ಪರಿಣಾಮ ಬೀರುವುದಿಲ್ಲ. ಇದರಿಂದ ಕೊರೊನಾ ನಿಯಂತ್ರಣ ಸಾಧ್ಯ. ಈ ಬಗ್ಗೆ
ಸಾರ್ವಜನಿಕರು ಆತಂಕ ಪಡುವ ಅಗತ್ಯವಿಲ್ಲ. ಲಸಿಕೆ ತೆಗೆದುಕೊಂಡ ಬಳಿಕ ಯಾವುದೇ ಸಮಸ್ಯೆ
ಆಗುವುದಿಲ್ಲ’ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಸತೀಶ್ ತಿಳಿಸಿದರು.
‘ಈವರೆಗೂ ಶೇಕಡಾ 60ರಷ್ಟು ಗುರಿ ಸಾಧಿಸಲಾಗಿದೆ. ಒಂದು ವೇಳೆ ನಿಗದಿತ ಗುರಿ ತಲುಪದಿದ್ದರೆ
ದಿನಾಂಕ ವಿಸ್ತರಿಸುವ ಸಾಧ್ಯತೆ ಇದೆ. ಇದಾದ ಬಳಿಕ 50 ವರ್ಷ ಮೇಲ್ಪಟ್ಟವರಿಗೆ (ಜ.1, 1971
ಜನನ) ಲಸಿಕೆ ನೀಡಲಾಗುತ್ತದೆ. ಹಾಗಾಗಿ ಅಂತಹವರ ಮಾಹಿತಿ ಕಲೆ ಹಾಕುವ ಕಾರ್ಯ ನಡೆದಿದೆ. ಈಗಾಗಲೇ ಅರಸೀಕೆರೆ,ಬೇಲೂರು ಸೇರಿ ನಾಲ್ಕು ತಾಲ್ಲೂಕುಗಳ ಮಾಹಿತಿ ಕಲೆ ಹಾಕಲಾಗಿದೆ’ ಎಂದು ಕೋವಿಡ್ ಲಸಿಕಾ
ನೋಡಲ್ ಅಧಿಕಾರಿ ಕಾಂತರಾಜ್ ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.