ADVERTISEMENT

ಅಂತ್ಯಕ್ರಿಯೆ ಕಾರ್ಯದಲ್ಲಿ ಸ್ನೇಕ್‍ ಬಾಬು ತಂಡ

ಕೋವಿಡ್‌ನಿಂದ ಮೃತಪಟ್ಟವರ ಅಂತ್ಯಸಂಸ್ಕಾರ

​ಪ್ರಜಾವಾಣಿ ವಾರ್ತೆ
Published 8 ಮೇ 2021, 5:06 IST
Last Updated 8 ಮೇ 2021, 5:06 IST
ವ್ಯಕ್ತಿಯ ಅಂತ್ಯಕ್ರಿಯೆ ನಡೆಸಿದ ಸ್ನೇಕ್ ಬಾಬು, ಮುಕ್ತಿಯಾರ್, ಅಯೂಬ್, ಮುಮ್ತಾಜ್
ವ್ಯಕ್ತಿಯ ಅಂತ್ಯಕ್ರಿಯೆ ನಡೆಸಿದ ಸ್ನೇಕ್ ಬಾಬು, ಮುಕ್ತಿಯಾರ್, ಅಯೂಬ್, ಮುಮ್ತಾಜ್   

ಆಲೂರು: ಕೋವಿಡ್‌ನಿಂದ ಮೃತಪಟ್ಟವರ ಅಂತ್ಯಸಂಸ್ಕಾರ ಮಾಡುವ ಕಾರ್ಯದಲ್ಲಿ ಆಲೂರು ಪಟ್ಟಣ ಪಂಚಾಯಿತಿ ಸದಸ್ಯ ಸ್ನೇಕ್ ಬಾಬು (ಅಬ್ದುಲ್ ಖುದ್ದೂಸ್) ಹಾಗೂ ಅವರ ತಂಡವು ತೊಡಗಿಸಿಕೊಂಡಿದೆ.

ಕೆಂಚಮ್ಮನ ಹೊಸಕೋಟೆಯ ವ್ಯಕ್ತಿಯೊಬ್ಬರು ಕೋವಿಡ್‌ನಿಂದ ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಮೃತ ಪಟ್ಟಿದ್ದರು. ಅವರ ಅಂತ್ಯಕ್ರಿಯೆ ನಡೆಸಲು ಸಂಬಂಧಿಕರು ಮುಂದೆ ಬಂದಿರಲಿಲ್ಲ. ಹೀಗಾಗಿ, ಅಂತ್ಯಸಂಸ್ಕಾರ ಮಾಡಲು ಸಹಾಯ ಕೋರಿ ತಾಲ್ಲೂಕು ಆಡಳಿತಕ್ಕೆ ಮನವಿ ಮಾಡಿದ್ದರು. ತಾಲ್ಲೂಕು ಆಡಳಿತದ ಸೂಚನೆ ಮೇರೆಗೆ ಸ್ನೇಕ್ ಬಾಬು ಹಾಗೂ ಅವರ ಸ್ನೇಹಿತರು ಅಂತ್ಯಸಂಸ್ಕಾರ ಮಾಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.

ಮೃತಪಟ್ಟ ವ್ಯಕ್ತಿ ಕುಟುಂಬದವರು ಶವವನ್ನು ಮುಟ್ಟುವುದಿಲ್ಲ. ಯಾರಾದರೂ ಅಂತ್ಯಕ್ರಿಯೆ ಮಾಡುವ ವರಿದ್ದರೆ ಕಳುಹಿಸಿ ಎಂದು ಕೋರಿದ್ದರು. ಆಗ ಸ್ನೇಕ್‍ಬಾಬು ತಂಡದವರನ್ನು ಕಳುಹಿಸಿಕೊಟ್ಟೆವು. ಮೃತರ ಪತ್ನಿ, ಕುಟುಂಬದವರು ದೂರದಲ್ಲಿ ನಿಂತು ಇದನ್ನು ವೀಕ್ಷಿಸಿದರು ಎಂದು ತಹಶೀಲ್ದಾರ್‌ ಶಿರೀನ್‌ ತಾಜ್‌ ತಿಳಿಸಿದರು.

ADVERTISEMENT

ಸೈಕಲ್ ಶಾಪ್‌ ಇಟ್ಟುಕೊಂಡಿರುವ ಸ್ನೇಕ್ ಬಾಬು 20 ವರ್ಷಗಳಿಂದ ಹಾವುಗಳನ್ನು ಹಿಡಿದು ಕಾಡಿಗೆ ಬಿಡುವ ಕಾರ್ಯದಲ್ಲೂ ತೊಡಗಿಕೊಂಡಿದ್ದರು. ಹೀಗಾಗಿ, ಇವರು ಸ್ನೇಕ್ ಬಾಬು ಎಂದೇ ಹೆಸರಾಗಿದ್ದಾರೆ.

ಸ್ನೇಕ್‍ ಬಾಬು ಅವರು ಸ್ನೇಹಿತರಾದ ಮುಕ್ತಿಯಾರ್, ಅಯೂಬ್, ಮುಮ್ತಾಜ್ ಅವರನ್ನೊಳಗೊಂಡ ತಂಡವನ್ನು ರಚಿಸಿಕೊಂಡಿದ್ದಾರೆ. ದಾರಿಹೋಕರು, ಮಾನಸಿಕ ಅಸ್ವಸ್ಥರನ್ನು ಗುರುತಿಸಿ, ಅವರನ್ನು ಶುಚಿಗೊಳಿಸುತ್ತಾರೆ. ಬಳಿಕ, ಅಧಿಕಾರಿಗಳ ಗಮನಕ್ಕೆ ತಂದು, ಪುನರ್ವಸತಿ ಕಲ್ಪಿಸುವ ಕೆಲಸದಲ್ಲಿ ತೊಡಗಿದ್ದಾರೆ. ಯಾವುದೇ ಪ್ರತಿಫಲಾ ಪೇಕ್ಷೆ ಇಲ್ಲದೆ ಕೆಲಸ ಮಾಡುತ್ತಿದ್ದಾರೆ.

ಪಟ್ಟಣ ಪಂಚಾಯಿತಿ ಚುನಾವಣೆಗೆ ಸ್ಪರ್ಧಿಸಿದ್ದ ಸ್ನೇಕ್‌ ಬಾಬು ಅವರಿಗೆ ಮತದಾರರು ಮತ ನೀಡಿ ಗೆಲ್ಲಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.