ಹಾಸನ: ಗ್ರಾಮೀಣ ಭಾಗದಲ್ಲಿ ಕೊರೊನಾ ಸೋಂಕು ಹೆಚ್ಚಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ
ಆರ್.ಗಿರೀಶ್ ಕೊರೊನಾ ಸೋಂಕಿತರ ಮನೆಗಳಿಗೆ ಗುರುವಾರ ಭೇಟಿ ನೀಡಿ, ಐಸೋಲೇಷನ್ ಪ್ರಕ್ರಿಯೆ
ಬಗ್ಗೆ ಪರಿಶೀಲಿಸಿದರು.
ಶಾಂತಿಗ್ರಾಮ ಹೋಬಳಿಯ ಹೊಂಗೆರೆ ಗ್ರಾಮಕ್ಕೆ ಭೇಟಿ ನೀಡಿದ ಅವರು, ಕೊರೊನಾ ಸೋಂಕಿತರಿಗೆ
ಸಕಾಲದಲ್ಲಿ ಸೂಕ್ತ ಔಷಧಿ ನೀಡಲಾಗುತ್ತಿದೆಯೇ ಎಂಬ ಬಗ್ಗೆ ವೈಯಕ್ತಿಕವಾಗಿ ಮಾಹಿತಿ ಪಡೆದರು.
ಎಲ್ಲಾ ಸೋಂಕಿತರ ಮನೆ ಮನೆ ಭೇಟಿ ಕಾರ್ಯ ನಡೆದಿದೆಯೇ ಎಂಬುದನ್ನು ಪರಿಶೀಲಿಸಿದ ಡಿ.ಸಿ, ಮನೆಯ ಮುಂದೆಯೇ ನಿಂತು ಸೋಂಕಿತ ವ್ಯಕ್ತಿಗಳ ಜೊತೆಗೆ ಸಮಾಲೋಚನೆ ನಡೆಸಿದರು.
ಕೆಲವು ರೋಗ ಲಕ್ಷಣ ಇರುವವರಿಗೆ ಜಿಂಕ್, ವಿಟಮಿನ್ ಸಿ, ಐವರ್ಮೆಕ್ಟೀನ್ ಸೇರಿದಂತೆ ಕೆಲವು ಮಾತ್ರೆಗಳನ್ನು ಆದಷ್ಟು ಬೇಗ ತಲುಪಿಸಿ ಸೋಂಕಿತರ ಆರೋಗ್ಯದ ಬಗ್ಗೆ ಪ್ರತಿದಿನ ಮಾಹಿತಿ ಪಡೆಯಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಇದೇ ವೇಳೆ ಮನೆಯಲ್ಲಿ ಸೂಕ್ತ ಸೌಲಭ್ಯಗಳಿಲ್ಲದ ಸೋಂಕಿತರಿಗೆ ಕೋವಿಡ್ ಆರೈಕೆ ಕೇಂದ್ರಕ್ಕೆ ಸ್ಥಳಾಂತರ
ಮಾಡುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದ ಅವರು, ಶಾಲೆಗಳನ್ನು ಐಸೋಲೇಷನ್ ಕೇಂದ್ರಗಳನ್ನಾಗಿ ಪರಿವರ್ತಿಸುವಂತೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಹಾಗೂ ಸ್ಥಳೀಯರಿಗೆ ಸಲಹೆ ನೀಡಿದರು.
ತಹಶೀಲ್ದಾರ್ ಶಿವಶಂಕರಪ್ಪ, ತಾಲ್ಲೂಕು ವೈಧ್ಯಾಧಿಕಾರಿ ಡಾ.ವಿಜಯ್, ಶಾಂತಿಗ್ರಾಮ ಗ್ರಾಮ ಪಂಚಾಯಿತಿ ಪಿಡಿಒ ಕೆ.ಡಿ. ರಮೇಶ್, ಪೊಲೀಸ್ ಸಬ್ ಇನ್ಸ್ಪೆಕ್ಟರ್ ಕಾವ್ಯ, ಡಾ.ಕಿರಣ್ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.