ಚನ್ನರಾಯಪಟ್ಟಣ: ತಾಲ್ಲೂಕಿನ ದಿಂಡಗೂರು ಗ್ರಾಮದಲ್ಲಿನ ದೇವಾಲಯಕ್ಕೆ ಪರಿಶಿಷ್ಟರು ಮಂಗಳವಾರ ತಹಶೀಲ್ದಾರ್ ಸಮ್ಮುಖದಲ್ಲಿ ಪ್ರವೇಶ ಮಾಡಿದರು.
ಗ್ರಾಮದಲ್ಲಿ 45 ಪರಿಶಿಷ್ಟ ಕುಟುಂಬಗಳಿಗೆ, ಮುಜರಾಯಿ ಇಲಾಖೆ ಸೇರಿದ ಚನ್ನಕೇಶವ ದೇವಾಲಯಕ್ಕೆ ಪ್ರವೇಶ ಕಲ್ಪಿಸುವಂತೆ ಕೆಲವು ದಿನಗಳ ಹಿಂದೆ ಗ್ರಾಮದ ಯುವಕರು ತಾಲ್ಲೂಕು ಆಡಳಿತಕ್ಕೆ ಮನವಿ ಮಾಡಿದ್ದರು. ತಹಶೀಲ್ದಾರ್ ಜೆ.ಬಿ.ಮಾರುತಿ ಅವರು ಗ್ರಾಮದಲ್ಲಿ ಇಂದು ಎರಡು ಸಮು ದಾಯದವರ ಶಾಂತಿ ಸಭೆ ನಡೆಸಿದರು.
ಗ್ರಾಮದ ಸಂತೋಷ್ ಮಾತನಾಡಿ, ‘ದೇವಾಲಯದ ವಿಚಾರವಾಗಿ ಊರಿ ನವ ರೊಂದಿಗೆ ನಮಗೆ ಯಾವುದೇ ಭಿನ್ನಾಭಿಪ್ರಾಯಗಳಿಲ್ಲ, ಚನ್ನಕೇಶವ ದೇವಾಲಯಕ್ಕೆ ಹೊಂದಿ ಕೊಂಡಿರುವ ಹೋಟೆಲ್ ಮಾಲೀಕ ಪರಿಶಿಷ್ಟರನ್ನು ಹೋಟೆಲ್ಗೆ ಸೇರಿ ಸುವುದಿಲ್ಲ, ಇದರಿಂದ ನೊಂದ ನಾವು ಗ್ರಾಮದಲ್ಲಿರುವ ಮುಜರಾಯಿ ದೇವಾಲಯಗಳ ಪ್ರವೇಶಕ್ಕೆ ಅಧಿಕಾರಿಗಳಿಗೆ ಮನವಿ ಮಾಡಿರುವುದಾಗಿ’ ಹೇಳಿದರು.
ತಹಶೀಲ್ದಾರ್ ಗ್ರಾಮಸ್ಥರ ಅಭಿಪ್ರಾಯ ಕೇಳಲಾಗಿ, ‘ಪರಿಶಿಷ್ಟರು ದೇವಾಲಯ ಪ್ರವೇಶ ಮಾಡುವುದಕ್ಕೆ, ನಮ್ಮ ಅಭ್ಯಂತರವಿಲ್ಲ. ತಾಲ್ಲೂಕು ಆಡಳಿತದ ತೀರ್ಮಾನಕ್ಕೆ ಬದ್ಧರಾಗುವು ದಾಗಿ’ ಗ್ರಾಮಸ್ಥರು ಹೇಳಿದರು.
‘ಸ್ಥಳೀಯರ ವಿರೋಧವೇ ಇಲ್ಲವೆಂದ ಮೇಲೆ ಸಮಸ್ಯೆಯೇ ಇರುವುದಿಲ್ಲ. ಇನ್ನು ಮುಂದೆ ಗ್ರಾಮದಲ್ಲಿರುವ ದೇವಾಲಯಗಳಿಗೆ ಪರಿಶಿಷ್ಟರಿಗೆ ಪ್ರವೇಶವಿರುತ್ತದೆ. ಗ್ರಾಮಸ್ಥರು ಸೌಹಾರ್ದಯುತವಾಗಿ ನಡೆದುಕೊಂಡು ಹೋಗುವಂತೆ’ ತಹಶೀಲ್ದಾರ್ ಜೆ.ಬಿ. ಮಾರುತಿ ತಿಳಿಸಿದರು.
ಗ್ರಾಮದಲ್ಲಿರುವ ಹೋಟೆಲ್ ತೆರವುಗೊಳಿಸುವಂತೆ ಪಿಡಿಒಗೆ ತಹಶೀಲ್ದಾರ್ ಸೂಚಿಸಿದರು.
ಗ್ರಾಮದೇವತೆ ಸತ್ಯಮ್ಮ, ಸೇರಿ ಗ್ರಾಮದಲ್ಲಿನ 6 ದೇವಾಲಯಗಳಿಗೆ ದಲಿತರು ಪ್ರವೇಶಿಸಿ, ಪೂಜೆ ಸಲ್ಲಿಸಿದರು.
ಸಭೆಯಲ್ಲಿ ಡಿವೈಎಸ್ಪಿ ಲಕ್ಷ್ಮೇಗೌಡ, ಸಿಪಿಐ ಜಿ.ಕೆ.ಸುಬ್ರಹ್ಮಣ್ಯ, ಸಿಡಿಪಿಒ ವಿಜಯ್ಕುಮಾರ್, ಸಮಾಜಕಲ್ಯಾಣಾಧಿಕಾರಿ ನಾಗರಾಜು ಮತ್ತು ಪಿಡಿಒ ನಂಜುಂಡೇಗೌಡ ಸೇರಿದಂತೆ ಗ್ರಾಮದ ಮುಖಂಡರು ಹಾಜರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.