ADVERTISEMENT

ದೂರ ಶಿಕ್ಷಣ: ಯಾವುದೇ ಆತಂಕ ಬೇಡ

ಮುಕ್ತ ವಿಶ್ವವಿದ್ಯಾಲದಯ ಕುಲಪತಿ ವಿದ್ಯಾಶಂಕರ್‌ ಅಭಯ

​ಪ್ರಜಾವಾಣಿ ವಾರ್ತೆ
Published 2 ಜುಲೈ 2019, 15:30 IST
Last Updated 2 ಜುಲೈ 2019, 15:30 IST
‌‌ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಕುಲಪತಿ ವಿದ್ಯಾಶಂಕರ್‌ ಅವರು ಹಾಸನದ ಪ್ರಾದೇಶಿಕ ಕೇಂದ್ರದ ಆವರಣದಲ್ಲಿ ಸಸಿ ನೆಟ್ಟರು.
‌‌ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಕುಲಪತಿ ವಿದ್ಯಾಶಂಕರ್‌ ಅವರು ಹಾಸನದ ಪ್ರಾದೇಶಿಕ ಕೇಂದ್ರದ ಆವರಣದಲ್ಲಿ ಸಸಿ ನೆಟ್ಟರು.   

ಹಾಸನ: ದೂರ ಶಿಕ್ಷಣ ಪಡೆಯಲು ಇಚ್ಛಿಸುವ ವಿದ್ಯಾರ್ಥಿಗಳು ಯಾವುದೇ ಆತಂಕವಿಲ್ಲದೆ ಪ್ರವೇಶ ಪಡೆಯಬಹುದು ಎಂದು ರಾಜ್ಯ ಮುಕ್ತ ವಿಶ್ವವಿದ್ಯಾಲಯ (ಕೆಎಸ್‌ಒಯು) ಕುಲಪತಿ ವಿದ್ಯಾಶಂಕರ್ ತಿಳಿಸಿದರು.

ಕೆಎಸ್‍ಒಯುಗೆ 2018-19 ರಿಂದ 2023ರ ವರೆಗೆ ಯುಜಿಸಿ ಮಾನ್ಯತೆ ದೊರೆತಿದೆ. ಹೀಗಾಗಿ ಇಲ್ಲಿ ಪದವಿ ಪಡೆಯಲು ವಿದ್ಯಾರ್ಥಿಗಳಿಗೆ ಯಾವುದೇ ರೀತಿಯ ಹಿಂಜರಿಕೆ ಬೇಡ. ಮಾನ್ಯತೆ ರದ್ದತಿಯಿಂದಾಗಿ ವಿಶ್ವವಿದ್ಯಾಲಯ ಕುರಿತು ಸಾರ್ವಜನಿಕರಲ್ಲಿ ಕೆಟ್ಟ ಅಭಿಪ್ರಾಯ ಮೂಡಿದೆ. ಆದರೆ, ಮುಂದಿನ ದಿನಗಳಲ್ಲಿ ಈ ರೀತಿಯ ಪ್ರಮಾದ ಮರುಕಳಿಸದಂತೆ ಎಚ್ಚರ ವಹಿಸಲಾಗುವುದು ಎಂದು ಸುದ್ದಿಗೋಷ್ಠಿಯಲ್ಲಿ ಭರವಸೆ ನೀಡಿದರು.

ಕೆಎಸ್‍ಒಯುನಿಂದ ನೂತನ ವೆಬ್‍ಸೈಟ್‌ ತೆರೆಯಲಾಗಿದ್ದು ಈ ಮೂಲಕ ಆಸಕ್ತ ಅಭ್ಯರ್ಥಿಗಳು ಪದವಿ ಪ್ರವೇಶ ಪಡೆಯಬಹುದು. ವೆಬ್‍ಸೈಟ್‍ನಲ್ಲಿ ಪ್ರವೇಶಾತಿಗೆ ಬೇಕಾದ ಎಲ್ಲ ಮಾಹಿತಿ ಒದಗಿಸಲಾಗಿದೆ. ಬಿಎ, ಬಿಕಾಂ, ಎಂಎ ಉರ್ದು, ಎಂಎ ಪತ್ರಿಕೋದ್ಯಮ, ರಸಾಯನ ವಿಜ್ಞಾನ, ಜಿಯೋಗ್ರಫಿ ಸೇರಿದಂತೆ 31 ಕೋರ್ಸ್ ಗಳಿಗೆ ಪ್ರವೇಶ ನೀಡಲಾಗುತ್ತಿದೆ ಎಂದರು.

ADVERTISEMENT

ರಾಜ್ಯದ ವಿವಿಧ ಜಿಲ್ಲೆಗಳಲ್ಲಿ 17 ಪ್ರಾದೇಶಿಕ ಕೇಂದ್ರ ತೆರೆಯಲಾಗಿದೆ. ಹಿಂದಿನಂತೆ ಮೈಸೂರಿನ ಕೇಂದ್ರ ಕಚೇರಿಗೆ ಬಂದು ಪ್ರವೇಶಾತಿ ಪಡೆಯಬೇಕು ಎಂಬ ನಿಯಮವಿಲ್ಲ. ಬೆಂಗಳೂರು, ಮಂಡ್ಯ, ಹಾಸನ, ತುಮಕೂರು ಸೇರಿದಂತೆ ಬೇರೆ ಜಿಲ್ಲೆಯಲ್ಲಿಯೂ ಪ್ರಾದೇಶಿಕ ಕೇಂದ್ರ ತೆರೆದಿದ್ದು, ಮುಂದಿನ ದಿನದಲ್ಲಿ ಉಳಿದ ಜಿಲ್ಲೆಗಳಿಗೂ ವಿಸ್ತರಿಸಲಾಗುವುದು ಎಂದು ತಿಳಿಸಿದರು.

ಬಿಪಿಎಲ್‌ ಕಾರ್ಡ್ ಹೊಂದಿರುವ ಮಹಿಳಾ ಅಭ್ಯರ್ಥಿಗಳಿಗೆ ಶೇಕಡಾ 25 ರಷ್ಟು ಬೋಧನಾ ಶುಲ್ಕದಲ್ಲಿ ವಿನಾಯಿತಿ ಮತ್ತು ಎಸ್‌ಸಿ ಹಾಗೂ ಎಸ್‌ಟಿ ವಿದ್ಯಾರ್ಥಿಗಳು ಪ್ರವೇಶಾತಿಯಲ್ಲಿ ರಿಯಾಯತಿ ಪಡೆಯಬಹುದಾಗಿದ್ದು, ಸಂಬಂಧಿಸಿದ ಇಲಾಖೆಯಲ್ಲಿ ನೋಂದಣಿ ಮಾಡಿಕೊಳ್ಳಬೇಕು ಎಂದು ಮಾಹಿತಿ ನೀಡಿದರು.

ಗೋಷ್ಠಿಯಲ್ಲಿ ಹಾಸನ ಪ್ರಾದೇಶಿಕ ಕೇಂದ್ರ ಮುಖ್ಯಸ್ಥ ಹರೀಶ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.