
ಹೊಳೆನರಸೀಪುರ: ‘ಹಣಕ್ಕಿಂತ ಶಿಕ್ಷಣಕ್ಕೆ ಹೆಚ್ಚಿನ ಶಕ್ತಿ ಹಾಗೂ ಮಾನ್ಯತೆ. ಆದ್ದರಿಂದ ಶಿಕ್ಷಣಕ್ಕೆ ಮೊದಲ ಆದ್ಯತೆ ನೀಡಿ’ ಎಂದು ಎಚ್.ಡಿ. ದೇವೇಗೌಡರ ಪುತ್ರಿ, ಅನುಸೂಯ ಮಂಜುನಾಥ್ ಸಲಹೆ ನೀಡಿದರು.
ಪಟ್ಟಣದ ಕೋಟೆ ಸರ್ಕಾರಿ ಶಾಲೆಯ ಶತಮಾನೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ‘ನಾನು 1ನೇ ತರಗತಿಯಿಂದ 5ನೇ ತರಗತಿವರೆಗೆ ಇದೇ ಶಾಲೆಯಲ್ಲಿ ಓದಿದ್ದು. ಆ ದಿನದಲ್ಲಿ ಗಣಿತ ಕಲಿಸಿದ ಶಿಕ್ಷಕಿ ಶಾಂತಲಕ್ಷ್ಮೀ, ಕಮಲಮ್ಮ ಅವರನ್ನು ಇಂದಿಗೂ ನೆನಪಿಸಿಕೊಳ್ಳುತ್ತೇನೆ. ಅವರು ಕಲಿಸಿದ ರೀತಿ ನಾನು ಪಿಎಚ್.ಡಿ ಪಡೆಯುವಲ್ಲಿಂದ ಹಿಡಿದು ಇಂದಿಗೂ ಸಹಕಾರಿ ಆಗುತ್ತಿದೆ. ಸರ್ಕಾರಗಳು ಶಿಕ್ಷಣ, ಆರೋಗ್ಯ, ಕೃಷಿ ಹಾಗೂ ಪರಿಸರ ರಕ್ಷಣೆಗೆ ಹೆಚ್ಚಿನ ಆದ್ಯತೆ ನೀಡಿದರೆ ದೇಶ ಸಮೃದ್ಧಿ ಹಾಗೂ ಸುಭದ್ರವಾಗಿರುತ್ತದೆ’ ಎಂದರು.
‘ನಾನು ಶಾಲೆಗೆ ಹೋಗುವಾಗ ತಂದೆ ದೇವೇಗೌಡರು ಈ ಕ್ಷೇತ್ರದ ಶಾಸಕರಾಗಿದ್ದರು. ಮನೆಗೆ ಬಂದುಹೋಗುವವರು ಹೆಚ್ಚು. ಅಮ್ಮ ಮಾತ್ರ ಸಂಜೆ 6 ಗಂಟೆಯಿಂದ ರಾತ್ರಿ 8 ಗಂಟೆವೆರೆಗೆ ಓದಲೇ ಬೇಕು ಎಂದು ಕಟ್ಟಪ್ಪಣೆ ವಿಧಿಸಿ ನಮ್ಮನ್ನ ಬಿಡದೆ ಓದಿಸುತ್ತಿದ್ದರು. ನಮ್ಮ ತಾಯಿ ಕಟ್ಟುನಿಟ್ಟಾಗಿ ಓದಿಸುತ್ತಿದ್ದರಿಂದ ನಾವು ವಿದ್ಯಾವಂತರಾಗಲು ಸಾಧ್ಯವಾಯಿತು’ ಎಂದರು.
‘ಶತಮಾನ ಆಚರಿಸಿಕೊಳ್ಳುವ ಈ ಶಾಲೆಯಲ್ಲಿ ಅಂದಿನಿಂದ ಇಂದಿನವರೆಗೂ ಈ ಶಾಲೆಯಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸಿದ ಎಲ್ಲರೂ ಅಭಿನಂದನಾರ್ಹರು. ಇಂದಿನ ದಿನದಲ್ಲಿ ಶಾಲೆಗಳಲ್ಲಿ ಮಕ್ಕಳಿಗೆ ವಿದ್ಯಾಭ್ಯಾಸದ ಜೊತೆಗೆ ಕ್ರೀಡೆ, ಕರಾಟೆ, ಯೋಗ ಕಲಿಸುತ್ತಿದ್ದಾರೆ. ಬಿಸಿಯೂಟ, ಸಮವಸ್ತ್ರ, ಪ್ರವಾಸ ಎಲ್ಲವೂ ಇದೆ. ಶಿಕ್ಷಣದ ಜೊತೆಗೆ ಸಂಸ್ಕಾರವನ್ನೂ ಕಲಿಸುವ ಅಗತ್ಯ ಇದೆ. ಮನೆಯಲ್ಲಿ ಪೋಷಕರು ಮಕ್ಕಳ ಉತ್ತಮ ವಿದ್ಯಾಭ್ಯಾಸಕ್ಕೆ ಒಂದೆಡಡು ಗಂಟೆ ಮೀಸಲಿಟ್ಟು ಕಲಿಸಿ’ ಎಂದು ವಿನಂತಿಸಿದರು.
ಸಂಸದ ಶ್ರೇಯಶ್ ಪಟೇಲ್ ಮಾತನಾಡಿ, ‘ಸರ್ಕಾರಿ ಶಾಲೆ ನೂರುವರ್ಷ ಆಚರಿಸಿಕೊಳ್ಳುವುದು ಸಾಮಾನ್ಯ ಸಂಗತಿಯಲ್ಲ. ಈ ಶಾಲೆಗೆ ಸೇವೆ ಸಲ್ಲಿಸಿದ ಎಲ್ಲ ಶಿಕ್ಷಕರಿಗೂ ವಂದಿಸುತ್ತೇನೆ’ ಎಂದರು.
ಕ್ಷೇತ್ರಶಿಕ್ಷಣಾಧಿಕಾರಿ ಸೋಮಲಿಂಗೇಗೌಡ, ಮುಖ್ಯಶಿಕ್ಷಕ ರಾಜು, ಶಿಕ್ಷಣ ಸಂಯೋಜಕ ಚಂದ್ರಶೇಖರ್ ಶಾಲೆಯ ಶಿಕ್ಷಕಿಯರು ಪಾಲ್ಗೊಂಡಿದ್ದರು.
ಇದೇ ಸಂದರ್ಭದಲ್ಲಿ ಅನುಸೂಯ ಅವರು ಶಾಲೆಗೆ ಒಂದು ಅತ್ಯುತ್ತಮ ಕಂಪ್ಯೂಟರ್ ನೀಡಿದರು. ಉದ್ಯಮಿ ಮಾಯಣ್ಣ 1 ಲಕ್ಷಕ್ಕೂ ಹೆಚ್ಚು ಬೆಲೆಬಾಳುವ ಶುದ್ಧ ಕುಡಿಯುವ ನೀರಿನ ಘಟಕವನ್ನು ನೀಡುವುದಾಗಿ ತಿಳಿಸಿದರು. ಶಾಲೆಯ ವಿದ್ಯಾರ್ಥಿಗಳು ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.