ಹಾಸನ: ಲಾಕ್ಡೌನ್ ಹಿನ್ನೆಲೆಯಲ್ಲಿ ಜಿಲ್ಲೆಯಾದ್ಯಂತ ಮುಸ್ಲಿಮರು ತಮ್ಮ ಮನೆಗಳಲ್ಲಿ ಈದ್ ಉಲ್ ಫಿತ್ರ್ ಅನ್ನು ಸರಳವಾಗಿ ಆಚರಿಸಿದರು.
ಕುಟುಂಬದವರೆಲ್ಲ ಒಟ್ಟು ಸೇರಿ ಮನೆಯಲ್ಲಿಯೇ ಹಬ್ಬದ ವಿಶೇಷ ಪ್ರಾರ್ಥನೆ ಸಲ್ಲಿಸಿ, ಬಳಿಕ ಪರಸ್ಪರ ಶುಭಾಶಯ ಕೋರಿದರು. ಸಂಕಷ್ಟದಲ್ಲಿರುವ ಬಡವರು ಮತ್ತು ವಲಸೆ ಕಾರ್ಮಿಕರಿಗೆ ಆಹಾರ ಕಿಟ್ ವಿತರಿಸಲಾಯಿತು.
ಮಸೀದಿ ಅಥವಾ ಸಾಮೂಹಿಕವಾಗಿ ಈದ್ ನಮಾಜ್ ನಿರ್ವಹಿಸಲು ಅವಕಾಶ ಇರಲಿಲ್ಲ. ಇದರಿಂದ ಹೊಸ ಲೈನ್ ಹಾಗೂ ಈದ್ಗಾ ಮೈದಾನಗಳಲ್ಲಿ ಹಬ್ಬದ ರಂಗು ಇರಲಿಲ್ಲ. ಮಸೀದಿ ರಸ್ತೆಗಳೂ ಬಿಕೋ ಎನ್ನುತ್ತಿದ್ದವು.
ಸರಳ ಈದ್ ಆಚರಿಸುವಂತೆ ಖಾಜಿ ಸಂದೇಶ ನೀಡಿದ್ದ ಹಿನ್ನೆಲೆಯಲ್ಲಿ ಈದ್ ಹಿಂದಿನ ದಿನಗಳಲ್ಲಿ ಬಟ್ಟೆ ಇತ್ಯಾದಿ ಖರೀದಿಯ ಅಬ್ಬರವೂ ಇರಲಿಲ್ಲ. ಹಬ್ಬ ಹಿನ್ನೆಲೆಯಲ್ಲಿ ಜಿಲ್ಲೆಯಾದ್ಯಂತ ಬಿಗಿ ಪೊಲೀಸ್ ಭದ್ರತೆ ಕಲ್ಪಿಸಲಾಗಿತ್ತು.
ಮುಸ್ಲಿಮರು ಪ್ರತಿವರ್ಷ ಮಸೀದಿಗಳಲ್ಲಿ ವಿಶೇಷ ಸಾಮೂಹಿಕ ಪ್ರಾರ್ಥನೆ ಮತ್ತು ಇಫ್ತಾರ್ ಕೂಟಗಳಲ್ಲಿ ಭಾಗವಹಿಸುತ್ತಿದ್ದರು. ಆದರೆ, ಈ ವರ್ಷ ಕೊರೊನಾ ಸೋಂಕಿನಿಂದ ಸಾಮೂಹಿಕ ಪ್ರಾರ್ಥನೆ ಮತ್ತು ಇಫ್ತಾರ್ ಕೂಟಗಳಿಗೆ ಜಿಲ್ಲಾಡಳಿತ ನಿರ್ಬಂಧ ಹೇರಿತ್ತು.
ಪ್ರತಿವರ್ಷ ಈದ್ ಅಂಗವಾಗಿ ಹೊಸ ಬಟ್ಟೆ ಖರೀದಿಸಲು ಮುಸ್ಲಿಮರು ನಗರದ ಕಸ್ತೂರ ಬಾ ರಸ್ತೆಯ ಬಟ್ಟೆ ಅಂಗಡಿಗಳಿಗೆ ಮುಗಿಬೀಳುತ್ತಿದ್ದರು. ಟೋಪಿ, ಸುರ್ಮಾ, ಸುಗಂಧ ದ್ರವ್ಯದ ಅಂಗಡಿಗಳು ತುಂಬಿ ತುಳುಕುತ್ತಿದ್ದವು. ಬಾದಾಮಿ, ಖರ್ಜೂರ, ಗೋಡಂಬಿ, ಒಣದ್ರಾಕ್ಷಿ, ಮುಂತಾದ ಸಾಮಗ್ರಿಗಳಿಗೆ ಇನ್ನಿಲ್ಲದ ಬೇಡಿಕೆ ಬರುತ್ತಿತ್ತು. ಆದರೆ, ಈ ಬಾರಿ ಎಲ್ಲ ಅಂಗಡಿಗಳು ಮುಚ್ಚಿದ್ದು, ರಸ್ತೆಗಳು ಬಿಕೋ ಎನ್ನುತ್ತಿವೆ. ಹಬ್ಬದ ಸಂಭ್ರಮ ಕಾಣಲಿಲ್ಲ.
‘ಕೊರೊನಾ ಸೋಂಕು ಹಿನ್ನೆಲೆಯಲ್ಲಿ ಸರಳವಾಗಿ ಮನೆಯಲ್ಲೇ ಹಬ್ಬ ಆಚರಿಸಿದೆವು. ಮಸೀದಿಗಳಲ್ಲಿ 5 ಜನರು ಮಾತ್ರ ಅಂತರ ಕಾಯ್ದುಕೊಂಡು ಪ್ರಾರ್ಥನೆ ಮಾಡಿದೆವು.’ ಎಂದು ಅತಿಖ್ ರೆಹಮಾನ್, ಎಸ್.ಎಸ್.ಪಾಷಾ ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.