ADVERTISEMENT

ಹಳೇಬೀಡು: ಅಪಾಯದ ಸೂರಿನಲ್ಲಿ ಮಹಿಳೆ

ನೆರವಿನ ಆಸರೆಗೆ ಕಾಯುತ್ತಿರುವ ನಂಜುಂಡಮ್ಮ: ಸಹಾಯ ಮಾಡಲಾಗದ ಸ್ಥಿತಿಯಲ್ಲಿ ನೆರೆಯವರು

ಎಚ್.ಎಸ್.ಅನಿಲ್ ಕುಮಾರ್
Published 15 ಡಿಸೆಂಬರ್ 2025, 2:46 IST
Last Updated 15 ಡಿಸೆಂಬರ್ 2025, 2:46 IST
ಹಳೇಬೀಡಿನ ಕುಂಬಳೇಶ್ವರ ದೇವಾಲಯ ಬೀದಿಯಲ್ಲಿ ನಂಜುಂಡಮ್ಮ ವಾಸವಾಗಿರುವ ಮನೆ ಶಿಥಿಲವಾಗಿದೆ
ಹಳೇಬೀಡಿನ ಕುಂಬಳೇಶ್ವರ ದೇವಾಲಯ ಬೀದಿಯಲ್ಲಿ ನಂಜುಂಡಮ್ಮ ವಾಸವಾಗಿರುವ ಮನೆ ಶಿಥಿಲವಾಗಿದೆ   

ಹಳೇಬೀಡು: ವಾಸ ಮಾಡುತ್ತಿರುವ ಹಳೆಯ ಕಾಲದ ನಾಡ ಹೆಂಚಿನ ಮನೆ ಶಿಥಿಲಾವಸ್ಥೆ ತಲುಪಿದ್ದು, ಯಾವ ಸಂದರ್ಭದಲ್ಲಾದರೂ ಬೀಳುವ ಸ್ಥಿತಿಯಲ್ಲಿದೆ. ಬಾಡಿಗೆ ಮನೆಯಲ್ಲಿ ಇರೋಣವೆಂದರೆ ಬಾಡಿಗೆ ಕಟ್ಟುವಷ್ಟು ವರಮಾನ ಇಲ್ಲ. ಹಳೆಯ ಮನೆ ತೆರವು ಮಾಡಿ ಆಶ್ರಯ ಮನೆ ಮಾಡಿಕೊಳ್ಳಲು ಮನೆ ಪೂರ್ವಿಕರು ಹೆಸರಿನಲ್ಲಿದೆ.

ಸುಮಾರು 65ರ ವರ್ಷದ ಮಾತು ಬಾರದ ಇಲ್ಲಿನ ಕುಂಬಳೇಶ್ವರ ದೇವಾಲಯ ಬೀದಿ ನಿವಾಸಿ, ನಂಜುಂಡಮ್ಮ ಅವರ ಮೂಕ ಭಾಷೆಯ ಅಳಲು.

ಮಾತನಾಡಲು ಬಾರದ ನಂಜುಂಡಮ್ಮ ಬಾಲ್ಯದಿಂದಲೂ ಬಡತನ ಅನುಭವಿಸಿದ್ದಾರೆ. ತಂದೆ, ತಾಯಿ, ಒಬ್ಬ ಸಹೋದರ ಹಾಗೂ 5 ಮಂದಿ ಸಹೋದರಿಯರ ಜೊತೆ ಬೆಳೆದ ನಂಜುಂಡಮ್ಮ, ಬಡತನ ಇದ್ದರೂ ಹೊಟ್ಟೆ ಪಾಡಿಗೆ ತೊಂದರೆ ಇಲ್ಲದಂತೆ ಬದುಕಿದ್ದರು. ತಂದೆ, ತಾಯಿ ಹಾಗೂ ಸಹೋದರ ಇಹಲೋಕ ತ್ಯಜಿಸಿ ಹಲವು ವರ್ಷ ಕಳೆದಿವೆ. ಸಹೋದರಿಯರು ಗಂಡನ ಮನೆ ಸೇರಿದ್ದಾರೆ. ಸಹೋದರಿಯರ ಕುಟುಂಬದಲ್ಲಿಯೂ ಕಷ್ಟದ ಬದುಕು ಸಾಗುತ್ತಿದೆ.  ಹೀಗಾಗಿ ನಂಜುಂಡಮ್ಮ ಒಂಟಿಯಾಗಿದ್ದು, ಶಿಥಿಲ ಮನೆಯಲ್ಲಿ ವಾಸಿಸುತ್ತಿದ್ದಾರೆ.  

ADVERTISEMENT

ನಂಜುಂಡಮ್ಮ ಅವರಿಗೆ ₹1ಸಾವಿರ ವೃದ್ಧಾಪ್ಯ ವೇತನ ಹೊರತುಪಡಿಸಿ, ಬೇರೆ ಯಾವುದೇ ಆದಾಯ ಇಲ್ಲ. ವೃದ್ಧಾಪ್ಯದಲ್ಲಿ ಇರುವುದರಿಂದ ಕೂಲಿ ಕೆಲಸ ಮಾಡುವ ಚೈತನ್ಯ ಇಲ್ಲದಂತಾಗಿದೆ. ಇರುವುದರಲ್ಲಿಯೇ ಹೇಗೋ ಜೀವನ ಸಾಗಿಸುವುದು ಅವರಿಗೆ ಅಭ್ಯಾಸವಾಗಿದೆ. 

ನೂರಾರು ವರ್ಷಗಳ ಹಿಂದಿನ ವಾಸದ ಮನೆ ಬಿದ್ದು ಹೋದರೆ, ವಾಸ ಮಾಡುವುದಕ್ಕೆ ಎಲ್ಲಿ ಹೋಗುವುದು ಎಂಬ ಚಿಂತೆ ಮಾತ್ರ ಅವರನ್ನು ಸದಾ ಕಾಡುತ್ತಿದೆ. 

ಸುತ್ತಲಿನ ನಿವಾಸಿಗಳು ನಂಜುಂಡಮ್ಮ ಅವರ ಮೂಕ ಭಾಷೆ ಅರ್ಥ ಮಾಡಿಕೊಂಡು ಧೈರ್ಯ ತುಂಬುತ್ತಾರೆ. ನೆರೆಹೊರೆಯವರಿಗೆ ಕಷ್ಟ ಗೊತ್ತಿದ್ದರೂ ಸಹಾಯ ಮಾಡುವ ಶಕ್ತಿ ಇಲ್ಲದಂತಾಗಿದೆ. ನಂಜುಂಡಮ್ಮ ಅವರ ಮನೆಯ ಗೋಡೆಗಳು ಹಾಗೂ ಚಾವಣಿ ದುರಸ್ತಿ ಮಾಡಲು ಸಾಧ್ಯವಿಲ್ಲದಂತೆ ಸೊರಗಿವೆ.

ಮನೆಯಲ್ಲಿ ಮಲಗಿದ್ದಾಗ ಕುಸಿದರೆ ಏನು ಗತಿ ಎಂಬ ಆತಂಕ ಸ್ಥಳೀಯರನ್ನು ಕಾಡುತ್ತಿದೆ. ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ತಕ್ಷಣ ಜಾಗೃತರಾಗಿ ನಂಜುಂಡಮ್ಮ ಅವರ ನೆರವಿಗೆ ನಿಲ್ಲಬೇಕು ಎನ್ನುತ್ತಾರೆ ನೆರೆಹೊರೆಯವರು.

ವೃದ್ದಾಪ್ಯ ವೇತನ ₹ಸಾವಿರ ಬಿಟ್ಟರೆ ಬೇರೆ ಆದಾಯ ಇಲ್ಲ ಯಾವ ಕ್ಷಣದಲ್ಲಾದರೂ ಮನೆ ಬೀಳು ಆತಂಕ ಇಹಲೋಕ ತ್ಯಜಿಸಿರುವ ತಂದೆ, ತಾಯಿ, ಸಹೋದರ

ಆಶ್ರಯ ಯೋಜನೆ ಅಡಿ ಬಡವರಿಗೆ ಮನೆ ನಿರ್ಮಾಣಕ್ಕೆ ಸರ್ಕಾರದಿಂದ ಹಣ ಬಂದಿಲ್ಲ. ಹಳೆಯ ಮಂಜೂರಾತಿಯ ನಡೆಯುತ್ತಿವೆ. ಅನುದಾನ ಬಂದರೆ ನಂಜುಂಡಮ್ಮ ಅವರಿಗೆ ಆದ್ಯತೆ ಕೊಡುತ್ತೇವೆ
ಎಚ್.ಆರ್.ಮಧು ಗ್ರಾಮ ಪಂಚಾಯಿತಿ ಅಧ್ಯಕ್ಷ
ಮೂಕರಾಗಿರುವ ನಂಜುಂಡಮ್ಮ ಅವರ ನೆರವಿಗೆ ಸಂಘ– ಸಂಸ್ಥೆಗಳು ಮುಂದಾಗಬೇಕು. ಅವರ ಜೀವಿತದವರೆಗೂ ಸೂರಿನ ವ್ಯವಸ್ಥೆ ಆಗಬೇಕು
ಗಂಗಾಧರ ಸ್ಥಳೀಯ ನಿವಾಸಿ

ಸರ್ಕಾರದ ನೆರವು ಬೇಕು ಪೂರ್ವಿಕರ ಹೆಸರಿನಲ್ಲಿರುವ ಮನೆ ಅವರ ಕುಟುಂಬದವರ ಈಗಿನ ಪೀಳಿಗೆಯ ಹೆಸರಿಗೆ ಬಂದಿಲ್ಲ. ಮನೆ ತೆರವು ಮಾಡಿ ಆಶ್ರಯ ವಸತಿ ಯೋಜನೆಯಡಿ ಮನೆ ನಿರ್ಮಾಣ ಮಾಡುವುದಕ್ಕೂ ತೊಡಕಾಗಿದೆ. ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ವಾತ್ಸಲ್ಯ ಮನೆ ನಿರ್ಮಿಸಿ ಕೊಡಲು ಮನಸ್ಸು ಮಾಡಿದ್ದರು. ಅವರದ್ದೇ ಆದ ಸ್ವಂತ ಜಾಗ ಇಲ್ಲದೇ ಅದೂ ಕೈಗೂಡಲಿಲ್ಲ ಎಂದು ಸ್ಥಳೀಯರಾದ ಗಂಗಾಧರ ತಿಳಿಸಿದರು. ವೃದ್ಧ ಮಹಿಳೆ ಕಷ್ಟದಲ್ಲಿರುವುದರ ಜೊತೆಗೆ ಮಾತು ಬಾರದವರಾಗಿದ್ದಾರೆ. ವೃದ್ಧಾಪ್ಯದಲ್ಲಿ ಇರುವ ಮಹಿಳೆಯ ನೆರವಿಗೆ ಮಹಿಳಾ ಮಕ್ಕಳ ಕಲ್ಯಾಣ ಇಲಾಖೆ ಧಾವಿಸಬೇಕು. ಸರ್ಕಾರದಿಂದ ಅವರಿಗೆ ಪುಟ್ಟದೊಂದು ಮನೆ ನಿರ್ಮಾಣ ಮಾಡಿಕೊಡಬೇಕು ಎಂಬುದು ಸುತ್ತಲಿನ ನಿವಾಸಿಗಳ ಒತ್ತಾಯ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.