ಸಕಲೇಶಪುರ: ಶಿರಾಡಿ ಘಾಟ್ನ ಬೆಂಗಳೂರು– ಮಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಗುರುವಾರ ಸಂಜೆ ಕಾಡಾನೆಯೊಂದು ಕಾಣಿಸಿಕೊಂಡಿದ್ದರಿಂದ, ಸುಮಾರು 10 ನಿಮಿಷಗಳವರೆಗೆ ಈ ಮಾರ್ಗದಲ್ಲಿ ವಾಹನಗಳ ಸಂಚಾರ ಸ್ಥಗಿತಗೊಂಡಿತ್ತು.
ಘಾಟ್ನ ಡಬಲ್ ಟರ್ನ್ ಬಳಿ, ಭಾರಿ ಎತ್ತರದ ಒಂಟಿ ಸಲಗವು ರಸ್ತೆಯ ಒಂದು ಬದಿಯಿಂದ ಮತ್ತೊಂದು ಬದಿಗೆ ಹೊರಟಿತ್ತು. ರಸ್ತೆಯ ಬದಿಯಲ್ಲಿ ಇಳಿಜಾರು ಪ್ರದೇಶವಿದ್ದ ಕಾರಣ ರಸ್ತೆ ಬದಿಯಲ್ಲಿಯೇ ನಿಂತಿದೆ. ಆನೆ ಎಲ್ಲಿ ದಾಳಿ ಮಾಡುತ್ತದೆಯೋ ಎಂಬ ಭಯದಿಂದ ಚಾಲಕರು ತಮ್ಮ ವಾಹನಗಳನ್ನು ರಸ್ತೆಯಲ್ಲೇ ಕೆಲ ನಿಮಿಷಗಳವರೆಗೆ ನಿಲ್ಲಿಸಿದ್ದಾರೆ.
ರಸ್ತೆ ಬದಿ ನಿಂತಿದ್ದ ಕಾಡಾನೆಯನ್ನು ಪ್ರಯಾಣಿಕರು ಮೊಬೈಲ್ ಕ್ಯಾಮೆರಾಗಳಲ್ಲಿ ಸೆರೆ ಹಿಡಿದು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.
ವಾರದ ಹಿಂದೆ, ಇದೇ ಪ್ರದೇಶದಲ್ಲಿ ರಾಜಸ್ಥಾನ ಮೂಲದ ಕಂಟೇನರ್ ಚಾಲಕ ವಾಖಿಲ್ ಅವರನ್ನು ತುಳಿದು ಕೊಂದು ಹಾಕಿದ ಆನೆ ಇದೇ ಇರಬೇಕು ಎಂದು ಸ್ಥಳೀಯರು ಅನುಮಾನ ವ್ಯಕ್ತಪಡಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.