ಹಿರೀಸಾವೆ: ಮಳೆಯಿಂದ ಹಾನಿಯಾಗಿರುವ ಮನೆಗಳ ಸಂತ್ರಸ್ತರಿಗೆ ಶೀಘ್ರ ಪರಿಹಾರ ಹಣ ಬಿಡುಗಡೆ ಮಾಡವಂತೆ ಜಿಲ್ಲಾಧಿಕಾರಿಗಳು ಮತ್ತು ತಹಶೀಲ್ದಾರ್ ಅವರಿಗೆ ತಿಳಿಸಿರುವುದಾಗಿ ಶಾಸಕ ಬಾಲಕೃಷ್ಣ ಮಂಗಳವಾರ ಹಿರೀಸಾವೆಯಲ್ಲಿ ಹೇಳಿದರು.
ಭಾನುವಾರ ರಾತ್ರಿಯ ಮಳೆಗೆ ಮನೆಗೋಡೆ ಕುಸಿದಿರುವ ಇಲ್ಲಿನ ಎಂ.ಜಿ.ರಸ್ತೆ ರಫೀಕ್ ಎಂಬುವವರ ಮನೆಗೆ ಭೇಟಿ ನೀಡಿ, ನಂತರ ಮಾತನಾಡಿದರು.
‘ಸ್ಥಳೀಯ ಅಧಿಕಾರಿಗಳ ಮೂಲಕ ಮಾಹಿತಿ ಪಡೆದು ತಹಶೀಲ್ದಾರ್ ಅವರು ಆನ್ಲೈನ್ ಮೂಲಕ ಸರ್ಕಾರಕ್ಕೆ ಮಾಹಿತಿ ತಲುಪಿಸಬೇಕು. ಈ ಬಗ್ಗೆ ಜಿಲ್ಲೆಯ ಎಲ್ಲಾ ತಹಶೀಲ್ದಾರ್ ಮತ್ತು ಆರ್ಐಗಳಿಗೆ ಜಿಲ್ಲಾಧಿಕಾರಿ ಸೂಚನೆ ನೀಡಬೇಕು. ಸರ್ಕಾರದ ಆದೇಶದಂತೆ ಮಳೆಯಿಂದ ಹಾನಿಯಾದ ಮನೆ ಸಂತ್ರಸ್ತರಿಗೆ ಪರಿಹಾರವಾಗಿ ₹1.25 ಲಕ್ಷ ಜರೂರಾಗಿ ವಿತರಣೆ ಮಾಡಬೇಕು’ ಎಂದರು. ತಾತ್ಕಾಲಿಕ ಪರಿಹಾರವಾಗಿ ₹10 ಸಾವಿರವನ್ನು ಪಂಚಾಯಿತಿಯವರು ನೀಡುವಂತೆ ಶಾಸಕರು ಸೂಚಿಸಿದರು.
ಮಳೆ ಬರುವ ಸಮಯದಲ್ಲಿ ಜನರು ಹೆಚ್ಚು ಜಾಗೃತರಾಗಿ ಇರುಬೇಕು, ತೇವಾಂಶದಿಂದ ಅಲ್ಲಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಉಂಟಾಗುವ ಸಂಭವ ಹೆಚ್ಚು ಇದೆ. ರಾಜ್ಯದ ಕೆಲವು ಕಡೆ ಎರಡು ದಿನದಿಂದ ವಿದ್ಯುತ್ ಶಾಕ್ನಿಂದ ಮೃತಪಟ್ಟಿರುವ ವರದಿಗಳು ಬಂದಿವೆ. ರೈತರು ಜಾನುವಾರುಗಳನ್ನು ವಿದ್ಯುತ್ ಕಂಬ ಹಾಗೂ ತಂತಿಯಿಂದ ದೂರದಲ್ಲಿ ಕಟ್ಟವಂತೆ ತಿಳಿಸಿದರು.
ಹಿರೀಸಾವೆ, ಜಿನ್ನೇನಹಳ್ಳಿ ಸೇರಿ ಮಳೆಯಿಂದ ಹಾನಿಯಾಗಿರುವ ಮನೆಗಳಿಗೆ ಶಾಸಕರು ಭೇಟಿ ನೀಡಿದ್ದರು. ಪಿಎಸಿಸಿಬಿ ಅಧ್ಯಕ್ಷ ಮಹೇಶ್, ಗ್ರಾಮ ಪಂಚಾಯಿತಿ ಸದಸ್ಯ ಸಂತೋಷ್, ಜೆಡಿಎಸ್ ಮುಖಂಡರಾದ ರವಿಕುಮಾರ್, ಜೆಸಿಬಿ ರಾಮೇಗೌಡ, ವೆಂಕಟೇಶ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.