ನುಗ್ಗೇಹಳ್ಳಿ: ಇಲ್ಲಿನ ಸದಾಶಿವಸ್ವಾಮಿ ದೇವಸ್ಥಾನದ ಆವರಣದಲ್ಲಿ ಕಲ್ಯಾಣಿ ಆಂಜನೇಯಸ್ವಾಮಿ ಸೇವಾ ಸಮಿತಿ ವತಿಯಿಂದ ಇತ್ತೀಚೆಗೆ ‘ಮಳೆಗಾಗಿ ತಿಂಗಳು ಮಾವನ ಹಬ್ಬ’ವನ್ನು ಆಚರಿಸಲಾಯಿತು.
ಗ್ರಾಮಸ್ಥರು, ಮಹಿಳೆಯರು ಪ್ರತಿದಿನ ಸಂಜೆ ತಿಂಗಳು ಮಾವನ ತೇರು ಹಾಗೂ ಆಂಜನೇಯ ಸ್ವಾಮಿಯ ಚಿತ್ರವನ್ನು ರಂಗೋಲಿಯಿಂದ ಬಿಡಿಸುತ್ತಾರೆ. ತೇರಿನ ಚಿತ್ರದ ಮೇಲೆ ಮಣೆಯನ್ನಿಟ್ಟು ಅದರ ಮೇಲೆ ಪೂಜಾ ಸಾಮಗ್ರಿಗಳನ್ನು ಇಟ್ಟು ಪೂಜಿಸುತ್ತಾರೆ. ತಿಂಗಳು ಮಾವನ ಕುರಿತು ಹಾಡುತ್ತಾರೆ. ಪೂಜೆಗೆ ಇಟ್ಟಿದ್ದ ಸಪ್ಪೆ ರೊಟ್ಟಿ ಹಾಗೂ ಬೆಲ್ಲವನ್ನು ಕದ್ದು ಹೋಗುತ್ತಾರೆ. ರೊಟ್ಟಿ ಕದ್ದವರ ಮೈಮೇಲೆ ನೀರನ್ನು ಸುರಿಯಲಾಗುತ್ತದೆ. ಹಬ್ಬದ ಕೊನೆಯ ದಿನ ಗಂಡು– ಹೆಣ್ಣು ಮಕ್ಕಳಿಬ್ಬರನ್ನು ಕೂರಿಸಿ ಆರತಕ್ಷತೆ ಮಾಡುವುದು ಸಂಪ್ರದಾಯ. ಈ ವೇಷಧಾರಿಗಳಿಗೆ ಉಡುಗೊರೆ ನೀಡುತ್ತಾರೆ.
ಗ್ರಾಮದ ಸಣ್ಣಮ್ಮ, ಚನ್ನಮ್ಮ, ರಂಗಮ್ಮ, ಕಮಲಮ್ಮ, ಸುಂದರಮ್ಮ ಮತ್ತು ಸಂಗಡಿಗರು ಸೋಬಾನೆ ಪದ ಹಾಡಿದರು.
ಎನ್.ಜೆ. ಸೋಮನಾಥ್, ಎನ್.ಬಿ. ರವೀಶಾಚಾರ್, ಎನ್.ಜಿ. ಕಲಾನಾಥ್, ಗೋಪಿ, ಎಚ್.ಆರ್. ನಾಗೇಶ್, ಅರ್ಚಕ ರಘು ದೀಕ್ಷಿತ್ ಭಾಗವಹಿಸಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.