ಹಾಸನ: ‘ಕೋಲಾರ, ಚಿಕ್ಕಬಳ್ಳಾಪುರ ಸೇರಿದಂತೆ ಬಯಲು ಸೀಮೆ ಏಳು ಜಿಲ್ಲೆಗಳಿಗೆಕುಡಿಯುವ ನೀರು ಪೂರೈಸುವ ಎತ್ತಿನಹೊಳೆ ಯೋಜನೆ ಅಡೆತಡೆ ನಿವಾರಣೆಗೆ ಹದಿನೈದು ದಿನ ದೊಳಗೆ ಅಧಿಕಾರಿಗಳ ಸಭೆ ಕರೆದು ಚರ್ಚಿಸಲಾಗುವುದು’ ಎಂದು ಕೇಂದ್ರಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಖಾತೆ ರಾಜ್ಯ ಸಚಿವ ಎ.ನಾರಾಯಣ ಸ್ವಾಮಿ ತಿಳಿಸಿದರು.
ಸಕಲೇಶಪುರ ತಾಲ್ಲೂಕಿನ ಮಾರನಹಳ್ಳಿ ಬಳಿ ಸೋಮವಾರ ಎತ್ತಿನಹೊಳೆ ಯೋಜನೆ ಕಾಮಗಾರಿ ಪರಿಶೀಲಿಸಿದ ನಂತರ ಮಾತನಾಡಿದರು.
‘ನನ್ನ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಶಿರಾಗೆ 0.5 ಟಿಎಂಸಿ ಮತ್ತು ಪಾವಗಡಗೆ 0.8ಟಿಎಂಸಿ ನೀರು ಹಂಚಿಕೆ ಆಗಿದೆ. ಶೇಕಡಾ 90ರಷ್ಟು ಪೈಪ್ ಲೈನ್ ಕಾಮಗಾರಿ ನಡೆದಿದೆ.ಶಿರಾ, ಪಾವಗಡ, ಚಿಕ್ಕಬಳ್ಳಾಪುರ, ಕೋಲಾರ ಜಿಲ್ಲೆಗಳ ಕೊನೆ ಭಾಗಕ್ಕೆ ನೀರುತಲುಪಬೇಕಿದೆ. ಭೂಸ್ವಾಧೀನ ಸಂಬಂಧ ಏಳೆಂಟು ಜನರು ಕೋರ್ಟ್ಗೆ ಹೋಗಿದ್ದಾರೆ. ನಾಲ್ಕು ಕಡೆ ಅರಣ್ಯ ಇಲಾಖೆ ಅನುಮತಿ ನೀಡಬೇಕಾಗಿದೆ. ಮುಂದಿನ 15 ದಿನಗಳಲ್ಲಿಉಸ್ತುವಾರಿ ಸಚಿವರೊಂದಿಗೆ ಸಭೆ ನಡೆಸಿ ಸಮಸ್ಯೆ ಬಗೆಹರಿಸಲಾಗುವುದು’ ಎಂದುಭರವಸೆ ನೀಡಿದರು.
ಮುಂದಿನ ನಾಲ್ಕೈದು ವರ್ಷದಲ್ಲಿ ಕಾಮಗಾರಿ ಮುಗಿಯುವ ನಿರೀಕ್ಷೆ ಇದೆ. ಅಲ್ಲಿಯವರೆಗೂವಾಣಿ ವಿಲಾಸದಲ್ಲಿ ನೀರು ಸಂಗ್ರಹ ಮಾಡಬಹುದಾ ಎನ್ನುವ ಬಗ್ಗೆ ತೀರ್ಮಾನಿಸಲಾಗುವುದು ಎಂದುಹೇಳಿದರು.
ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಕೆಲವೆಡೆ ಪಕ್ಷಕ್ಕೆ ಹಿನ್ನಡೆ ಆಗಿರಬಹುದು. ಆದರೆ,ವಿಮರ್ಶೆ ಮಾಡಿದಾಗ ಕಾಂಗ್ರೆಸ್ ಗಿಂತ ಹೆಚ್ಚು ಮತ ಪಡೆದಿದ್ದೇವೆ. ಹೆಚ್ಚು ಪುರಸಭೆಸದಸ್ಯರನ್ನು ಗೆದ್ದಿದ್ದೇವೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
‘ಡಿ.ವಿ. ಸದಾನಂದಗೌಡ ಅವರುಸಿ.ಎಂ ಆಗಿದ್ದಾಗ ಆಡಳಿತಾತ್ಮಕ ಮಂಜೂರಾತಿ ನೀಡಿ ₹8 ಸಾವಿರ ಕೋಟಿಅನುದಾನ ನೀಡಿದ್ದರು. ನಂತರ ಸಿದ್ದರಾಮಯ್ಯ ಸರ್ಕಾರದಲ್ಲಿ ₹12,900 ಕೋಟಿ ನೀಡಲಾಗಿತ್ತು. ಇದರಲ್ಲಿ ಎಷ್ಟು ಹಣ ಖರ್ಚಾಗಿದೆ ಎಂಬ ಬಗ್ಗೆ ಉಸ್ತುವಾರಿ ಸಚಿವ ಕೆ.ಗೋಪಾಲಯ್ಯ ಅವರೊಂದಿಗೆ ಶೀಘ್ರ ಸಭೆ ಮಾಡಿ ಚರ್ಚಿಸಲಾಗುವುದು’ ಎಂದರು.
ಎತ್ತಿನಹೊಳೆ ಯೋಜನೆ ಕಾರ್ಯಪಾಲಕ ಎಂಜಿನಿಯರ್ ಆನಂದ್, ಮುಖ್ಯ ಎಂಜಿನಿಯರ್ಮಾಧವ್, ಸೂಪರಿಟಿಡೆಂಟ್ ಎಂಜಿನಿಯರ್ ಶಿವರಾಂ ಅವರು ಸಚಿವರಿಗೆ ಮಾಹಿತಿನೀಡಿದರು. ರೇಷ್ಮೆ ನಿಗಮದ ಅಧ್ಯಕ್ಷ ಎಸ್.ಆರ್.ಗೌಡ, ಬಿಜೆಪಿ ಮುಖಂಡಎಚ್.ಎಂ.ವಿಶ್ವನಾಥ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.