
ಹೊಳೆನರಸೀಪುರ: ತಾಲ್ಲೂಕಿನ ಹಳೇಕೋಟೆ ಹೋಬಳಿಯ ಕೆಲವು ಭಾಗದಲ್ಲಿ ಮುಸುಕಿನ ಜೋಳಕ್ಕೆ ಬಿಳಿಕಳೆ ರೋಗ ತಗುಲಿದ್ದು ಕೃಷಿ ಇಲಾಖೆಯ ವಿಜ್ಞಾನಿಗಳು ಹಾಗೂ ತಜ್ಞರ ತಂಡ ಜಮೀನುಗಳಿಗೆ ಬೇಟಿ ನೀಡಿ ಪರಿಶೀಲಿಸಿತು. ರೋಗ ತಡೆಗೆ ತೆಗೆದುಕೊಳ್ಳಬೇಕಾದ ಕ್ರಮಗಳನ್ನು ರೈತರಿಗೆ ಮಾಹಿತಿ ನೀಡಲಾಯಿತು.
ಇದೇ ಸಂದರ್ಭದಲ್ಲಿ ಕೃಷಿ ಇಲಾಖೆಯ ತಾಲ್ಲೂಕು ಸಹಾಯಕ ನಿರ್ದೇಶಕಿ ಸವಿತಾ ಮಾತನಾಡಿ, ತಾಲ್ಲೂಕಿನಲ್ಲಿ ಪ್ರಧಾನ ಮಂತ್ರಿ ಫಸಲ್ ಬಿಮಾವಿಮಾ ಯೋಜನೆಯಡಿ ಮುಸುಕಿನ ಜೋಳಕ್ಕೆ ಬೆಳೆವಿಮೆ ಮಾಡಿಸಲು ಜುಲೈ 31ರ ಗುರುವಾರ ಕೊನೆಯ ದಿನ. ನಿಗದಿತ ದಿನಾಂಕದೊಳಗೆ ಬೆಳೆ ವಿಮೆಗೆ ನೊಂದಣಿ ಮಾಡಿಕೊಳ್ಳಿ ಎಂದು ತಿಳಿಸಿದರು.
ವಿವಿಧ ಬೆಳೆಗೆ ನಿಗದಿ ಆಗಿರುವ ವಿಮಾ ಮೊತ್ತ ಭತ್ತ (ಮಳೆಆಶ್ರಿತ) ₹516, ಮುಸುಕಿನಜೋಳ (ನೀರಾವರಿ) ₹522, ಮುಸುಕಿನಜೋಳ (ಮಳೆಆಶ್ರಿತ) ₹457 ಪಾವತಿಸಲು ತಿಳಿಸಿದ್ದಾರೆ.
ಇದೇ ರೀತಿ ಭತ್ತ (ನೀರಾವರಿ) ವಿಮಾ ಮೊತ್ತ ₹755, ರಾಗಿ (ಮಳೆ ಆಶ್ರಿತ) ₹344, ಹುರುಳಿ (ಮಳೆಆಶ್ರಿತ) ₹166 ಪಾವತಿಸಿ ಬೆಳೆ ವಿಮೆ ಮಾಡಿಸಬಹುದು. ವಿಮೆ ಮೊತ್ತ ಪಾವತಿಸಲು ಕಡೆಯ ದಿನಾಂಕ ಆಗಸ್ಟ್ 16.
ಇದೇ ಸಂದರ್ಭದಲ್ಲಿ ಮಳೆ ವಿವರ ನೀಡಿದ್ದು ತಾಲೂಕಿನಲ್ಲಿ ಜನವರಿ 2025 ರಿಂದ ಇಲ್ಲಿಯವರೆಗೆ ಒಟ್ಟು ವಾಡಿಕೆ ಮಳೆ 315 ಮಿಮೀ ಇದ್ದು, 412 ಮಿ.ಮೀ ಮಳೆ ಆಗಿ ಶೇ 28 ರಷ್ಟು ಅಧಿಕ ಮಳೆ ಆದಂತಾಗಿದೆ. ಜುಲೈ ತಿಂಗಳಿನಲ್ಲಿ ವಾಡಿಕೆ ಮಳೆ 62.7 ಮಿಮೀ ಇದ್ದು ಇದುವರೆಗೆ 37.9 ಮಿ.ಮೀ ಮಾತ್ರ ಮಳೆ ಆಗಿದ್ದು ಶೇ 40ರಷ್ಟು ಕೊರತೆ ಆಗಿದೆ ಎಂದು ತಿಳಿಸಿದರು.
ತಾಲ್ಲೂಕಿನಲ್ಲಿ ಇದುವರೆವಿಗೆ ಎಲ್ಲಾ ಬೆಳೆಗಳು ಸೇರಿ 17,530 ಹೆಕ್ಟೇರ್ಗಳಲ್ಲಿ ಬಿತ್ತನೆ ಆಗಿದೆ. 2025–26ನೇ ಸಾಲಿನ ಮುಂಗಾರು ಹಂಗಾಮಿಗೆ ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆ ಜಾರಿಯಲ್ಲಿದ್ದು ಇದ್ಕಕಾಗಿ ನೊಂದಣಿ ಪ್ರಕ್ರಿಯೆ ಪ್ರಾರಂಭವಾಗಿದೆ. ರೈತರು ಬೆಳೆ ವಿಮೆಯನ್ನು ಹತ್ತಿರದ ಬ್ಯಾಂಕ್ ಹಾಗೂ ಕರ್ನಾಟಕ ಒನ್, ಗ್ರಾಮ ಒನ್ ಹಾಗೂ ಸಾಮಾನ್ಯ ಸೇವಾ ಕೇಂದ್ರಗಳಿಗೆ ಭೇಟಿ ನೀಡಿ ವಿಮೆ ಕಂತು ಪಾವತಿ ಎಂದು ತಿಳಿಸಿದ್ದಾರೆ. ಇನ್ನೂ ಹೆಚ್ಚಿನ ವಿವರಗಳು ಬೇಕಾದವರು ಒರಿಯಂಟಲ್ ಜನರಲ್ ಇನ್ಶೂರೆನ್ಸ್ ಕಂಪನಿ, ಬೆಂಗಳೂರು, ಕೃಷಿ ಇಲಾಖೆ, ತೋಟಗಾರಿಕಾ ಇಲಾಖೆ ಮತ್ತು ಬೆಳೆ ಸಾಲ ನೀಡುವ ಬ್ಯಾಂಕ್ ಸಿಬ್ಬಂದಿಯನ್ನು ಸಂಪರ್ಕಿಸಲು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.