ಹೊಳೆನರಸೀಪುರ: ತಾಲ್ಲೂಕಿನ ಗಂಗೂರು ಗ್ರಾಮದಲ್ಲಿ ಬುಧವಾರ ತಡರಾತ್ರಿ 1 ಗಂಟೆ ವೇಳೆಯಲ್ಲಿ ತಂದೆ ಮತ್ತು ಅಣ್ಣನನ್ನು ತಮ್ಮನೇ ಮಚ್ಚು ಮತ್ತು ಕೊಡಲಿಯಿಂದ ಕೊಲೆ ಮಾಡಿದ್ದಾನೆ. ದೇವೇಗೌಡ ಹಾಗೂ ಮಂಜುನಾಥ ಕೊಲೆಯಾದವರು. ದೇವೇಗೌಡರ ಎರಡನೇ ಮಗ ಮೋಹನ್ ಕೊಲೆ ಮಾಡಿದ್ದು, ಆರೋಪಿಯನ್ನು ಬಂಧಿಸಲಾಗಿದೆ.
ಗ್ರಾಮದ ದೇವೇಗೌಡರು ಇತ್ತೀಚೆಗೆ 36 ಗುಂಟೆ ಜಮೀನು ಮಾರಾಟ ಮಾಡಿದ್ದು, ಈ ಹಣ ಹಂಚಿಕೊಳ್ಳುವ ವಿಚಾರದಲ್ಲಿ ಅಪ್ಪ ದೇವೇಗೌಡ ಮತ್ತು ಅಣ್ಣ ಮಂಜುನಾಥನನೊಂದಿಗೆ ತಮ್ಮ ಮೋಹನ್ ಬುಧವಾರ ಸಂಜೆ ವೇಳೆ ಗಲಾಟೆ ಮಾಡಿದ್ದ. ಈ ವೇಳೆ,‘ನನಗೆ ಹಣ ನೀಡದಿದ್ದರೆ ನಿಮ್ಮನ್ನು ಕೊಲೆ ಮಾಡುವುದಾಗಿ’ ಮೋಹನ ಬೆದರಿಕೆ ಹಾಕಿದ್ದ. ಬೆದರಿಕೆಯನ್ನು ಹಗುರವಾಗಿ ಪರಿಗಣಿಸಿದ್ದರೆಂದು ಇಬ್ಬರನ್ನೂ ಕೊಲೆ ಮಾಡಿದ್ದಾನೆ.
‘ರಾತ್ರಿ ಗಲಾಟೆ ಬಳಿಕ ತಂದೆ ದೇವೇಗೌಡರೊಂದಿಗೆ ವಾಸವಿದ್ದ ಮಂಜುನಾಥ ಮಲಗಿದ್ದಲ್ಲಿಗೆ ಬಂದಿದ್ದ ಮೊಹನ್ ಮೊದಲು ಆತನ್ನನು ಮೇಲೆ ಮಚ್ಚಿನಿಂದ ಹೊಡೆದಿದ್ದಾನೆ. ದೇವೇಗೌಡರು ಎಚ್ಚರಗೊಂಡು ಜಗಳ ಬಿಡಿಸಲು ಹೋದಾಗ ಅವರನ್ನೂ ಕಡಿದು ಹತ್ಯೆ ಮಾಡಿದ್ದಾನೆ’ ಎಂದು ದೇವೇಗೌಡರ ಪತ್ನಿ ಜಯಮ್ಮ ಗ್ರಾಮಾಂತರ ಠಾಣೆಗೆ ದೂರು ನೀಡಿದ್ದಾರೆ.
‘ದೇವೇಗೌಡರಿಗೆ ಮೂವರು ಪುತ್ರಿಯರೂ ಇದ್ದು ಅವರ ಮದುವೆ ಆಗಿದ್ದು, ಸಹೋದರರಾದ ಮಂಜುನಾಥ, ಮೋಹನ ಅವಿವಾಹಿತರು. ಸಾಲ ತೀರಿಸುವುದಕ್ಕಾಗಿ ದೇವೇಗೌಡರು ಜಮೀನು ಮಾರಾಟಮಾಡಿದ್ದರು. ಈ ಹಣ ಕೊಡಿ ಎಂದು ಮೋಹನ ಆಗಾಗ ಗಲಾಟೆ ಮಾಡುತ್ತಿದ್ದು, ಸಾಲ ತೀರಿಸಿ ಉಳಿದ ಹಣವನ್ನು ಹಂಚುವುದಾಗಿ ದೇವೇಗೌಡರು ಹೇಳಿದ್ದರು’ ಎಂಬ ಮಾಹಿತಿ ಇದೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮೊಹಮ್ಮದ್ ಸುಜೀತಾ, ಎಎಎಸ್ಪಿ ತಮ್ಮಯ್ಯ, ಡಿವೈಎಸ್ಪಿ ಶಾಲೂ, ಸರ್ಕಲ್ ಇನ್ಸ್ಪೆಕ್ಟರ್ ಪ್ರದೀಪ್ಮಾರ್, ನಗರಠಾಣೆ ಪಿಎಸ್ಐ ಅಭಿಜಿತ್, ಸಿಬ್ಬಂದಿ ಭೇಟಿ ನೀಡಿ ಪರಿಶೀಲಿಸಿದರು. ಗ್ರಾಮಾಂತರ ಠಾಣೆ ಪಿಎಸ್ಐ ರಮೇಶ್ ದೂರು ದಾಖಲಿಸಿಕೊಂಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.