ADVERTISEMENT

ದುಮ್ಮೇನಹಳ್ಳಿಯಲ್ಲಿ ಬೆಂಕಿ ಅವಘಡ | ಮೂರು ಗುಡಿಸಲು ಭಸ್ಮ, ನಾಲ್ಕು ಹಸು ಸಜೀವ ದಹನ

​ಪ್ರಜಾವಾಣಿ ವಾರ್ತೆ
Published 21 ಸೆಪ್ಟೆಂಬರ್ 2019, 13:43 IST
Last Updated 21 ಸೆಪ್ಟೆಂಬರ್ 2019, 13:43 IST
ಅರಸೀಕೆರೆ ತಾಲ್ಲೂಕು ದುಮ್ಮೇನಹಳ್ಳಿ ಗ್ರಾಮದಲ್ಲಿ ದಲಿತ ಕಾಲೊನಿಯಲ್ಲಿ ಗುಡಿಸಲುಗಳು ಬೆಂಕಿ ಹತ್ತಿರುವುದು
ಅರಸೀಕೆರೆ ತಾಲ್ಲೂಕು ದುಮ್ಮೇನಹಳ್ಳಿ ಗ್ರಾಮದಲ್ಲಿ ದಲಿತ ಕಾಲೊನಿಯಲ್ಲಿ ಗುಡಿಸಲುಗಳು ಬೆಂಕಿ ಹತ್ತಿರುವುದು   

ಅರಸೀಕೆರೆ: ಸೀಮೆಎಣ್ಣೆಯ ಲಾಟಿನ್ ಉರುಳಿ ತಾಲ್ಲೂಕಿನ ದುಮ್ಮೇನಹಳ್ಳಿ ಗ್ರಾಮದ ದಲಿತರ ಕಾಲೊನಿಯಲ್ಲಿ ಶುಕ್ರವಾರ ರಾತ್ರಿ ಮೂರು ಗುಡಿಸಲು ಭಸ್ಮವಾಗಿದ್ದು, ನಾಲ್ಕು ಹಸುಗಳು ಸಜೀವ ದಹನವಾಗಿವೆ.

ಮಲ್ಲಪ್ಪ, ಗಂಗಾಧರ್ ಹಾಗೂ ಶಿವಲಿಂಗಪ್ಪ ಅವರ ಗುಡಿಸಲು ಭಸ್ಮವಾಗಿದ್ದು, ಮಲ್ಲಪ್ಪ ಅವರ ಗುಡಿಸಲಿನಲ್ಲಿದ್ದ ನಾಲ್ಕು ಹಸುಗಳು ಸತ್ತಿವೆ.

ಮಲ್ಲಪ್ಪ ಮನೆಯ ಪಕ್ಕದ ಗುಡಿಸಲಿನ ದೊಡ್ಡಿಯಲ್ಲಿ ಹಸುಗಳನ್ನು ಕಟ್ಟಿದ್ದರು. ರಾತ್ರಿ ವಿದ್ಯುತ್ ಇಲ್ಲದ ಕಾರಣ ಸೀಮೆಎಣ್ಣೆ ದೀಪದ ಲಾಟಿನ್‌ ಅನ್ನು ಹಚ್ಚಿಟ್ಟು ಹೊರ ಹೋಗಿದ್ದರು. ಆಗ ಲಾಟಿನ್‌ ಉರುಳಿರಬಹುದು. ಅಥವಾ ದೀಪದ ಸಮೀಪವಿದ್ದ ಹಸು ಒದ್ದಿದ್ದರಿಂದ ದೀಪ ಉರುಳಿ ಬೆಂಕಿ ಹೊತ್ತಿಕೊಂಡಿರಬಹುದು ಎಂದು ಗ್ರಾಮಸ್ಥರು ಶಂಕೆ ವ್ಯಕ್ತಪಡಿಸಿದ್ದಾರೆ.

ADVERTISEMENT

ಮಲ್ಲಪ್ಪ ಅವರ ಗುಡಿಸಲಿಗೆ ತಾಗಿದ ಬೆಂಕಿಯ ಜ್ವಾಲೆ ನೋಡ ನೋಡುತ್ತಿದ್ದಂತೆ ಪಕ್ಕದ ಮನೆಯ ಶಿವಲಿಂಗಪ್ಪ ಹಾಗೂ ಗಂಗಾಧರ್ ಅವರ ಗುಡಿಸಲುಗಳಿಗೂ ತಾಗಿದೆ. ಇದರಿಂದ ಲಕ್ಷಾಂತರ ರೂಪಾಯಿ ನಷ್ಟ ಸಂಭವಿಸಿದೆ.

ಘಟನಾ ಸ್ಥಳಕ್ಕೆ ಅರಸೀಕೆರೆ ತಹಶೀಲ್ದಾರ್ ಸಂತೋಷ್ ಕುಮಾರ್ ಭೇಟಿ ನೀಡಿ ಪರಿಶೀಲಿಸಿದರು. ನಂತರ ಮಾತನಾಡಿ,‘ಈ ಅವಘಡ ತುಂಬಾ ನೋವು ತಂದಿದೆ. ಶೀಘ್ರವೇ ಪರಿಹಾರ ನೀಡಲು ಕ್ರಮ ಕೈಗೊಳ್ಳಲಾಗುವುದು ಜತೆಗೆ ಸುಟ್ಟು ಹೋಗಿರುವ ಗುಡಿಸಲುಗಳ ಜಾಗದಲ್ಲಿ ಆಶ್ರಯ ಯೋಜನೆ ಅಡಿಯಲ್ಲಿ ಮನೆಗಳನ್ನು ನಿರ್ಮಿಸಿಕೊಡಲಾಗುವುದು‘ ಎಂದು ಭರವಸೆ ನೀಡಿದರು.

ಸ್ಥಳಕ್ಕೆ ಬಂದ ಅಗ್ಗುಂದ ಪಶು ವೈದ್ಯ ಹನುಮಂತಪ್ಪ ಸ್ಥಳ ಪರಿಶೀಲಿಸಿ, ಸರ್ಕಾರಕ್ಕೆ ಮಾಹಿತಿ ನೀಡುವುದಾಗಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.