ಹಾಸನ: ಆಪತ್ತಿನಲ್ಲಿರುವ ವ್ಯಕ್ತಿಯ ಜೀವವನ್ನು ಉಳಿಸಲು ಸಿ.ಪಿ.ಆರ್. ಹಾಗೂ ಪ್ರಥಮ ಚಿಕಿತ್ಸೆ ಸಹಕಾರಿ ಆಗಲಿದೆ ಎಂದು ಜಿಲ್ಲಾಧಿಕಾರಿ, ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಜಿಲ್ಲಾ ಶಾಖೆಯ ಅಧ್ಯಕ್ಷೆ ಕೆ.ಎಸ್. ಲತಾಕುಮಾರಿ ಹೇಳಿದರು.
ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಹಾಸನ ಘಟಕದ ವತಿಯಿಂದ ಶನಿವಾರ ಕಾಲೇಜು ವಿದ್ಯಾರ್ಥಿಗಳಿಗೆ ಏರ್ಪಡಿಸಿದ್ದ ಹೃದಯಾಘಾತ ಮುನ್ನೆಚ್ಚರಿಕೆ, ಪ್ರಥಮ ಚಿಕಿತ್ಸೆ ಹಾಗೂ ಸಿ.ಪಿ.ಆರ್. ವಿಧಾನಗಳ ಬಗ್ಗೆ ಉಚಿತ ತರಬೇತಿ ಉದ್ಘಾಟಿಸಿ ಅವರು ಮಾತನಾಡಿದರು.
ಬದಲಾದ ಕಾಲಘಟ್ಟದಲ್ಲಿ ಪ್ರಥಮ ಚಿಕಿತ್ಸೆ ಹಾಗೂ ಸಿ.ಪಿ.ಆರ್.ಗಳ ಮಹತ್ವ ಹಾಗೂ ಅಗತ್ಯತೆಯನ್ನು ಒತ್ತಿ ಹೇಳಿದ ಅವರು, ಯಾವುದೇ ಕ್ಲಿಷ್ಟ ಸಂದರ್ಭಗಳು ಎದುರಾದಾಗ ಎಲ್ಲರೂ ಸ್ವಯಂ ಸೇವಕರಾಗಿ ನಿಲ್ಲುವ ಅಗತ್ಯವಿದೆ ಎಂದು ತಿಳಿಸಿದರು.
ವಿದ್ಯಾರ್ಥಿಗಳು ಸೇವಾ ಮನೋಭಾವ ಬೆಳೆಸಿಕೊಂಡು ಸ್ವಯಂ-ಸೇವಾ ಸಂಸ್ಥೆಗಳೊಂದಿಗೆ ಗುರುತಿಸಿಕೊಂಡು ಪರಿಸರ ರಕ್ಷಣೆ-ನಮ್ಮ ಹೊಣೆ ಎಂಬ ಘೋಷ ವಾಕ್ಯದೊಂದಿಗೆ ಸಾಗುತ್ತ ಸಮಯದ ಮಹತ್ವ ಅರಿತು ಸತ್ಪ್ರಜೆಗಳಾಗಿ ಬಾಳುವ ಅನಿವಾರ್ಯತೆ ಇದೆ ಎಂದರು.
ಜಿಲ್ಲಾ ರೆಡ್ ಕ್ರಾಸ್ ಶಾಖೆಯ ಸ್ವಂತ ಕಟ್ಟಡ ಹಾಗೂ ಅಲ್ಲಿರುವ ಮೂಲ ಸೌಕರ್ಯಗಳನ್ನು ವೀಕ್ಷಿಸಿ, ಸಭಾಪತಿ ಹೆಮ್ಮಿಗೆ ಮೋಹನ್ ಅವರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಜಿಲ್ಲಾ ಕುಷ್ಠರೋಗ ನಿಯಂತ್ರಣಾಧಿಕಾರಿ ಡಾ.ನಾಗೇಶ್ ಆರಾಧ್ಯ, ರೆಡ್ ಕ್ರಾಸ್ ಸಂಸ್ಥೆಯ ಸಭಾಪತಿ ಹೆಮ್ಮಿಗೆ ಮೋಹನ್, ಖಜಾಂಚಿ ಜಯೇಂದ್ರ ಕುಮಾರ್ ಎಚ್.ಡಿ., ನಿರ್ದೇಶಕರಾದ ಡಾ.ಸಾವಿತ್ರಿ ಮತ್ತು ಅಮ್ಜದ್ಖಾನ್ ಮಾತನಾಡಿದರು.
ಜಿಲ್ಲಾ ರೆಡ್ ಕ್ರಾಸ್ ಕಾರ್ಯದರ್ಶಿ ಶಬ್ಬೀರ್ ಅಹ್ಮದ್ ಸ್ವಾಗತಿಸಿದರು. ಸಂಸ್ಥೆಯ ನಿರ್ದೇಶಕರಾದ ಬಿ.ಆರ್. ಉದಯ ಕುಮಾರ್, ಡಾ.ರಂಗಲಕ್ಷ್ಮಿ, ಎಸ್.ಎಸ್. ಪಾಷ, ಕೆ.ಟಿ. ಜಯಶ್ರೀ, ಜಯಪ್ರಕಾಶ್, ಗಿರೀಶ್, ಭೀಮರಾಜ್, ಮಮತಾ ಪಾಟೀಲ್ ಮತ್ತು ನಿಶ್ಚಿತ ಕುಮಾರಿ ಉಪಸ್ಥಿತರಿದ್ದರು.
ಕಾಲೇಜು ವಿದ್ಯಾರ್ಥಿಗಳು ಹಾಗೂ ಯುವಕರು ದುರ್ಗುಣಗಳ ಕಡೆ ವಾಲುತ್ತಿರುವ ಕಳವಳಕಾರಿ. ಕೆಟ್ಟ ಚಟಗಳಿದ್ದರೆ ಅವುಗಳನ್ನು ತ್ಯಜಿಸುವ ಪಣ ತೊಡಬೇಕುಕೆ.ಎಸ್. ಲತಾಕುಮಾರಿ ಜಿಲ್ಲಾಧಿಕಾರಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.