ಶ್ರವಣಬೆಳಗೊಳ: ಇಲ್ಲಿನ ದಿಗಂಬರ ಜೈನಮಠದ ಸಮೀಪದ ಭಂಡಾರ ಬಸದಿಯ ಚವ್ವೀಸ ತೀರ್ಥಂಕರರ ಸನ್ನಿಧಿಯ ಪ್ರಾಂಗಣದಲ್ಲಿ ವಿರಾಜಮಾನರಾಗಿರುವ ಚಿಕ್ಕ ಬಾಹುಬಲಿಯ ಮಹಾಮಸ್ತಕಾಭಿಷೇಕ ಮಹೋತ್ಸವದ ಅಂಗವಾಗಿ ಫೆ. 14ರಿಂದ 16ರ ವರೆಗೆ 3 ದಿನಗಳ ಕಾಲ ಧಾರ್ಮಿಕ ಲಘು ಪಂಚಕಲ್ಯಾಣ ಕಾರ್ಯಕ್ರಮಗಳು ಆಯೋಜನೆಗೊಂಡಿವೆ.
ವೈರಾಗ್ಯ ಮೂರ್ತಿ ಗೊಮ್ಮಟೇಶ್ವರನ ತಂದೆ ವೃಷಭನಾಥ ಸ್ವಾಮಿಯ ಲಘು ಪಂಚಕಲ್ಯಾಣದ ಮಹೋತ್ಸವದ ಪೂರ್ವಭಾವಿಯಾಗಿ ಮೊದಲ ಸಲ ಹಲವು ಧಾರ್ಮಿಕ ವಿಧಿಗಳು ಪ್ರಾರಂಭವಾಗುತ್ತವೆ. ಗುರು ಪೀಠದ ಈಗಿನ ಪೀಠಾಧಿಪತಿ ಸ್ವಸ್ತಿಶ್ರೀ ಅಭಿನವ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಮಾರ್ಗದರ್ಶನ ಮತ್ತು ಆಚಾರ್ಯ ಕುಂಥುಸಾಗರ ಮಹಾರಾಜರು ಹಾಗೂ ತ್ಯಾಗಿಗಳ, ಭಟ್ಟಾರಕರ ಸಾನಿಧ್ಯದಲ್ಲಿ ವೈಭವದಿಂದ ನೆರವೇರಲಿವೆ.
ಬಾಹುಬಲಿ ಸ್ವಾಮಿಯ 11.5 ಅಡಿಯ ನೂತನ ಬಿಂಬ ಪ್ರತಿಷ್ಠಾಪನೆ ಮತ್ತು ಪ್ರಥಮ ಮಹಾಮಸ್ತಕಾಭಿಷೇಕವು ಫೆ.16ರಂದು ಮಧ್ಯಾಹ್ನ 2 ಗಂಟೆಗೆ ಕರ್ಮಯೋಗಿ ನೆರವೇರಲಿದೆ. ಏಕ ಶಿಲೆಯಲ್ಲಿ ಕೆತ್ತಲಾಗಿರುವ ವಿಸ್ಮಯಕಾರಿ ಬಾಹುಬಲಿ ಮೂರ್ತಿಯು, ಗಂಗರಸರ ದಂಡನಾಯಕ ಚಾವುಂಡರಾಯನ ಅದ್ವಿತೀಯ ಕೊಡುಗೆ. ವಿಂಧ್ಯಗಿರಿಯ ಪರ್ವತದಲ್ಲಿ ಸೌಂದರ್ಯದ ಖನಿಯಾಗಿ ವಿಶ್ವಕ್ಕೆ ಅಹಿಂಸಾ ಸಂದೇಶ ಸಾರುತ್ತ ಶಾಂತಿದೂತನಾಗಿ ನಿಂತಿದ್ದಾನೆ.
ಭಗವಾನ್ ಬಾಹುಬಲಿಯು ಪ್ರಥಮ ಮೋಕ್ಷಗಾಮಿಯಾದರೂ ತೀರ್ಥಂಕರನಲ್ಲ. ಪ್ರಥಮ ತೀರ್ಥಂಕರ ವೃಷಭನಾಥರಿಂದ ಹಿಡಿದು ಮಹಾವೀರರವರೆಗೆ 24 ತೀರ್ಥಂಕರರು ಮಾತ್ರವಿದ್ದು, ಪಂಚಕಲ್ಯಾಣ ಮಹೋತ್ಸವ ತೀರ್ಥಂಕರರಿಗೆ ಮಾತ್ರ ನೆರವೇರಿಸುವ ಧಾರ್ಮಿಕ ಆಚರಣೆಯಾಗಿದೆ.
ವೃಷಭನಾಥರು ಮನುಕುಲಕ್ಕೆ ದಾರಿ ತೋರಿದವರು. ಈ ಭೋಗ ಭೂಮಿಯ ಮೇಲೆ ಕಲ್ಪವೃಕ್ಷದ ಕಾಲ ಮುಗಿದ ಮೇಲೆ, ಜನರಿಗೆ ಈ ಕರ್ಮ ಭೂಮಿಯಲ್ಲಿ ಹೇಗೆ ತಮ್ಮ ಜೀವನ ನಡೆಸಬೇಕೆಂದು ದಾರಿ ಕಾಣದಾದಾಗ, ಅಸಿ, ಮಸಿ, ಕೃಷಿ, ವಾಣಿಜ್ಯ, ಶಿಲ್ಪ ಮತ್ತು ವಿದ್ಯೆಗಳೆಂಬ 6 ವೃತ್ತಿ ತಿಳಿಸಿಕೊಟ್ಟು ಜೀವನೋಪಾಯದ ಮಾರ್ಗ ತೋರಿದರು.
ಶ್ರಾವಕರಿಗೆ ದೇವಪೂಜೆ, ಗುರುಗಳ ಸೇವೆ, ಸ್ವಧ್ಯಾಯ, ಸಂಯಮ, ತಪ, ದಾನಗಳೆಂಬ 6 ಕ್ರಿಯೆಗಳನ್ನು ತಪ್ಪದೇ ಪಾಲಿಸುತ್ತ, ಅಹಿಂಸಾ ಪರಮೋ ಧರ್ಮ ಮಾರ್ಗದಲ್ಲಿ ನಡೆಯಲು ಮಾರ್ಗ ತೋರಿಸಿದರು. ಅವರ ಸ್ಮರಣೆಗಾಗಿಯೇ ಮಹಾ ಮಸ್ತಕಾಭಿಷೇಕದ ಸಂದರ್ಭದಲ್ಲಿ ಪೂರ್ವಭಾವಿಯಾಗಿ ಶ್ರದ್ಧಾ ಭಕ್ತಿ ಪೂರ್ವಕವಾಗಿ ವೃಷಭನಾಥ ತೀರ್ಥಂಕರರ ಲಘು ಪಂಚಕಲ್ಯಾಣದ ಪೂಜೆ ಮತ್ತು ತೀರ್ಥಂಕರರಿಗಾಗುವ 5 ಕಲ್ಯಾಣಗಳನ್ನು ಶಾಸ್ತ್ರೋಕ್ತವಾಗಿ ನಡೆಸಲಾಗುತ್ತದೆ.
ವೃಷಭನಾಥರು, ನಾಭಿರಾಜ– ಮರುದೇವಿ ಪುತ್ರರಾಗಿ ಅಯೋಧ್ಯೆಯ ಬಳಿ ಇರುವ ಸಾಕೇತ ಪಟ್ಟಣದಲ್ಲಿ ಜನಿಸಿ, ಕೈಲಾಸದಲ್ಲಿ ಮೋಕ್ಷ ಪಡೆದರು. ಗರ್ಭ ಕಲ್ಯಾಣ, ಜನ್ಮ ಕಲ್ಯಾಣ, ದೀಕ್ಷಾ ಕಲ್ಯಾಣ, ಕೇವಲಜ್ಞಾನ ಕಲ್ಯಾಣ, ಮೋಕ್ಷ ಕಲ್ಯಾಣಗಳೆಂಬ ಒಟ್ಟು 5 ಕಲ್ಯಾಣಗಳಿದ್ದು, ಅವುಗಳ ವಿಧಿ ವಿಧಾನಗಳನ್ನು ಪಂಚಕಲ್ಯಾಣದ ಸಮಯದಲ್ಲಿ ನೆರವೇರಿಸಲಾಗುತ್ತದೆ.
ಮೆಟ್ಟಿಲು ಹತ್ತಲಾಗದೇ ಭಕ್ತರು ನಿರಾಸೆಯಿಂದ ಹಿಂದಿರುಗಬಾರದು ಎಂದು ಹಿಂದಿನ ಶ್ರೀಗಳು ಮೂರ್ತಿ ಕೆತ್ತಿಸಿದ್ದರು. ಅದರ ಪ್ರಥಮ ಮಸ್ತಕಾಭಿಷೇಕ ನೆರವೇರಲಿದೆ.ಸ್ವಸ್ತಿಶ್ರೀ ಅಭಿನವ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಕ್ಷೇತ್ರದ ಪೀಠಾಧಿಪತಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.