ADVERTISEMENT

ಬಸ್‌ ಹತ್ತಿದ ಪದವಿ ವಿದ್ಯಾರ್ಥಿಗಳಿಗೆ ಟಿಕೆಟ್

ಆದೇಶ ನಮಗೆ ಬಂದಿಲ್ಲ: ನಿರ್ವಾಹಕ

​ಪ್ರಜಾವಾಣಿ ವಾರ್ತೆ
Published 12 ಡಿಸೆಂಬರ್ 2020, 5:00 IST
Last Updated 12 ಡಿಸೆಂಬರ್ 2020, 5:00 IST
ಪದವಿ ವಿದ್ಯಾರ್ಥಿಗಳಿಗೆ ಬಸ್ ಪಾಸ್ ವಿಸ್ತರಿಸಿರುವ ಸರ್ಕಾರದ ಆದೇಶ ಮತ್ತು ವಿದ್ಯಾರ್ಥಿಗೆ ನೀಡಿದ ಟಿಕೆಟ್
ಪದವಿ ವಿದ್ಯಾರ್ಥಿಗಳಿಗೆ ಬಸ್ ಪಾಸ್ ವಿಸ್ತರಿಸಿರುವ ಸರ್ಕಾರದ ಆದೇಶ ಮತ್ತು ವಿದ್ಯಾರ್ಥಿಗೆ ನೀಡಿದ ಟಿಕೆಟ್   

ಬೇಲೂರು: ಸಾರಿಗೆ ಸಂಸ್ಥೆ ಬಸ್‌ಗಳಲ್ಲಿ ಪದವಿ ವಿದ್ಯಾರ್ಥಿಗಳಿಗೆ ಪ್ರಯಾಣಿಸಲು ಸರ್ಕಾರ ಡಿ 31ರವರಗೆ ವಿಸ್ತರಿಸಿದ್ದರೂ ಕೂಡಾ ನಿರ್ವಾಹಕ ಒತ್ತಾಯಪೂರ್ವಕವಾಗಿ ಟಿಕೆಟ್ ನೀಡಿರುವ ಘಟನೆ ಇಲ್ಲಿನ ರಸ್ತೆ ಸಾರಿಗೆ ಬಸ್ ನಿಲ್ದಾಣದಲ್ಲಿ ಶುಕ್ರವಾರ ನಡೆದಿದೆ.

ಬೆಳಿಗ್ಗೆ 8 ಗಂಟೆ ಸಮಯದಲ್ಲಿ ಹಾಸನದ ಪದವಿ ಕಾಲೇಜಿಗೆ ತೆರಳಲು ಐವರು ವಿದ್ಯಾರ್ಥಿಗಳು ಹಾಸನಕ್ಕೆ ತೆರಳುವ ಬಸ್ ಹತ್ತಿದ್ದಾರೆ. ನಿರ್ವಾಹಕ ಟಿಕೆಟ್ ಪಡೆಯುವಂತೆ ತಿಳಿಸಿದ್ದಾರೆ. ಟಿಕೆಟ್ ಪಡೆಯಲು ನಿರಾಕರಿಸಿದ ವಿದ್ಯಾರ್ಥಿಗಳು ನಿರ್ವಾಹಕನ ಒತ್ತಾಯಕ್ಕೆ ಮಣಿದು ಟಿಕೆಟ್ ಪಡೆದಿದ್ದಾರೆ.

ವಿದ್ಯಾರ್ಥಿ ಶಶಾಂಕ್ ಮಾತನಾಡಿ, ‘ಹಿಂದಿನ ವರ್ಷದ ಪಾಸ್ ಹಾಗೂ ಕಾಲೇಜು ಶುಲ್ಕದ ರಶೀದಿ ತೋರಿಸಿ ಬಸ್‌ನಲ್ಲಿ ಸಂಚರಿಸಬಹುದು ಎಂದು ಸರ್ಕಾರ ತಿಳಿಸಿದ್ದರೂ ಸಹ ಪಿರಿಯಾಪಟ್ಟಣ ಡಿಪೊಗೆ ಸೇರಿದ ಬಸ್ ನಿರ್ವಾಹಕರು ನಮಗೆ ಪ್ರತ್ಯೇಕವಾಗಿ ಯಾವುದೇ ಆದೇಶ ಬಂದಿಲ್ಲ. ಮೇಲಧಿಕಾರಿಗಳು ಸಹ ತಿಳಿಸಿಲ್ಲ ಆದಕಾರಣ ಟಿಕೆಟ್ ಪಡೆಯಲೇಬೇಕು ಎಂದು ಪಟ್ಟು ಹಿಡಿದು, ಹಾಸನಕ್ಕೆ ಹೋಗುತ್ತಿದ್ದ ಐವರು ವಿದ್ಯಾರ್ಥಿಗಳಿಂದ ಹಣ ಪಡೆದು ಟಿಕೆಟ್ ನೀಡಿದ್ದಾರೆ. ಇದರಿಂದ ನಮಗೆ ಬೇಸರವಾಗಿದ್ದು ಟಿಕೆಟ್ ಹಣವನ್ನು ಹಿಂದಿರುಗಿಸಲು ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು’ ಎಂದು ಕೋರಿದ್ದಾರೆ.

ADVERTISEMENT

ಕೆಎಸ್ಆರ್‌ಟಿಸಿ ಬೇಲೂರು ಘಟಕದ ವ್ಯವಸ್ಥಾಪಕ ಬೈರೇಗೌಡ ಮಾತನಾಡಿ, ‘ಹಳೆಯ ಪಾಸ್ ಅನ್ನು ನೀಡಿ ಡಿ. 31 ರವರೆಗೆ ವಿದ್ಯಾರ್ಥಿಗಳು ಪ್ರಯಾಣಿಸಲು ಸರ್ಕಾರ ಆದೇಶ ನೀಡಿದೆ. ಬೇಲೂರು ಡಿಪೊ ಬಸ್ ಆಗಿದ್ದರೆ ವಿದ್ಯಾರ್ಥಿಗಳಿಗೆ ಹಣವನ್ನು ಹಿಂದಿರುಗಿಸಲು ಕ್ರಮ ಕೈಗೊಳ್ಳುತ್ತಿದ್ದೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.