ಹೆತ್ತೂರು: ಅರಣ್ಯಾಧಿಕಾರಿಗಳು ಹಾಗೂ ಸಿಬ್ಬಂದಿ ಯಸಳೂರು ಅರಣ್ಯ ವಲಯದ ವ್ಯಾಪ್ತಿಯಲ್ಲಿ ಒತ್ತುವರಿ ತೆರವು ಮಾಡಿದ್ದು, ಮಲೆನಾಡಿಗರಲ್ಲಿ ಆತಂಕ ಮೂಡಿಸಿದೆ.
ತಾಲ್ಲೂಕಿನ ಸಹಾಯಕ ಅರಣ್ಯಾಧಿಕಾರಿ ಮಧುಸೂದನ್ ಮಾರ್ಗದರ್ಶನ ಹಾಗೂ ಯಸಳೂರು ವಲಯ ಅರಣ್ಯಾಧಿಕಾರಿ ಎಸ್.ಆರ್. ಕೃಷ್ಣ ನೇತೃತ್ವದಲ್ಲಿ ಯಸಳೂರು ಹೋಬಳಿಯ ಕೊತ್ತನಹಳ್ಳಿ ಅಕೇಷಿಯಾ ನಡುತೋಪಿನಲ್ಲಿ ಯಡಕೇರಿ ಗ್ರಾಮದ ವೈ.ಟಿ, ಪಾರ್ವತಮ್ಮ ಮತ್ತು ವೈ.ಎಂ. ನಾಗರಾಜು ಎಂಬುವವರು 30 ಎಕರೆ ಅರಣ್ಯ ಪ್ರದೇಶದಲ್ಲಿ 12 ಎಕರೆಗೂ ಹೆಚ್ಚು ಜಾಗದಲ್ಲಿ ಹಾಕಿದ್ದ ಬೇಲಿ ತೆರವು ಮಾಡಿದರು.
ಒತ್ತುವರಿ ಮಾಡಿರುವ ಆರೋಪದ ಹಿನ್ನೆಲೆಯಲ್ಲಿ ಶುಕ್ರವಾರ ಬೆಳಿಗ್ಗೆ 11 ಗಂಟೆಯ ವೇಳೆಗ ಅರಣ್ಯ ಇಲಾಖೆಯ ಸಿಬ್ಬಂದಿ ಸ್ಥಳಕ್ಕೆ ಬಂದು ಒತ್ತುವರಿ ತೆರವುಗೊಳಿಸಿದ್ದಾರೆ. ಕೆಲವು ವಾರಗಳ ಹಿಂದೆ ಯಸಳೂರು ವಲಯ ಅರಣ್ಯಾಧಿಕಾರಿ ಕೃಷ್ಣ ಅವರು ಮರಡಿಕೆರೆ ಗ್ರಾಮದ ಪ್ರಿಯಾ ಎಂಬ ಮಹಿಳೆ ಅರಣ್ಯ ಪ್ರದೇಶದಲ್ಲಿ ಮನೆಯನ್ನು ಕಟ್ಟಿದ್ದಾರೆ ಎಂಬ ಆರೋಪದ ಮೇಲೆ ಮನೆ ತೆರವುಗೊಳಿಸಿದ್ದರು.
ಇದು ವ್ಯಾಪಕ ವಿರೋಧಕ್ಕೆ ಕಾರಣವಾಗಿತ್ತು. ದಲಿತ ಸಂಘಟನೆಗಳು ವಲಯ ಅರಣ್ಯಾಧಿಕಾರಿ ಕೃಷ್ಣ ವಿರುದ್ದ ಕ್ರಮಕ್ಕೆ ಆಗ್ರಹಿಸಿ ಪ್ರತಿಭಟನೆ ಮಾಡಿದ್ದರು. ಶಾಸಕ ಸಿಮೆಂಟ್ ಮಂಜು ಸಹ ಆಕ್ರೋಶ ವ್ಯಕ್ತಪಡಿಸಿದ್ದರು. ಇದೀಗ ತೆರವು ಕಾರ್ಯಾಚರಣೆ ಮುಂದುವರಿದಿದ್ದು, ಮಲೆನಾಡಿಗರ ಆಕ್ರೋಶಕ್ಕೆ ಕಾರಣವಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.