ADVERTISEMENT

ರಾಜಕೀಯ ವೈಷಮ್ಯದಿಂದ ಕೊಲೆ: ಕಲ್ಲು, ಹಗ್ಗದಿಂದ ಕಟ್ಟಿದ ಶವ ಬಾವಿಯಲ್ಲಿ ಪತ್ತೆ

ದೂರು ದಾಖಲು

​ಪ್ರಜಾವಾಣಿ ವಾರ್ತೆ
Published 19 ಜನವರಿ 2021, 2:48 IST
Last Updated 19 ಜನವರಿ 2021, 2:48 IST

ಹೊಳೆನರಸೀಪುರ: ತಾಲ್ಲೂಕಿನ ಮಾರಗೌಡನಹಳ್ಳಿ ಗ್ರಾಮದ ಬಾವಿಯಲ್ಲಿ ಹಗ್ಗ ಕಟ್ಟಿದ ಸ್ಥಿತಿಯಲ್ಲಿ ಶವ ಪತ್ತೆಯಾಗಿದೆ.

ಅದೇ ಗ್ರಾಮದ ಎಂ.ಎನ್. ಮೂರ್ತಿ (50) ಅವರ ಶವ ಎಂದು ಗುರುತಿಸಲಾಗಿದೆ. ಮೃತದೇಹದ ಕುತ್ತಿಗೆ, ಕಾಲು ಮತ್ತು ಸೊಂಟಕ್ಕೆ ಹಗ್ಗ ಬಿಗಿದು, ಕಲ್ಲು ಕಟ್ಟಿ ಬಾವಿಯಲ್ಲಿ ಹಾಕಿದ್ದಾರೆ. ಇದು ಕೊಲೆ ಎಂದು ಮೃತರ ಸಹೋದರ ಎಂ.ಎನ್. ನೀಲಕಂಠ ದೂರು ದಾಖಲಿಸಿದ್ದಾರೆ.

ಭಾನುವಾರ ಮಧ್ಯಾಹ್ನ 1.30 ರ ಸಮಯದಲ್ಲಿ ಅಣ್ಣನಿಗೆ ಯಾರೋ ಕರೆ ಮಾಡಿದ್ದರು. ಜಮೀನಿನಲ್ಲಿ ಇರುವುದಾಗಿ ತಿಳಿಸಿದ್ದರು. ಆದರೆ, ರಾತ್ರಿಯಾದರೂ ಮನೆಗೆ ಬರಲಿಲ್ಲ, ಹುಡುಕಾಡಿದರೂ ಸಿಕ್ಕಿರಲಿಲ್ಲ. ಸೋಮವಾರ ಬೆಳಿಗ್ಗೆ ಗ್ರಾಮದ ಕೆರೆ ಪಕ್ಕದ ಬಾವಿಯಲ್ಲಿ ಮೃತದೇಹವಿದೆ ಎಂದು ಗ್ರಾಮಸ್ಥರು ತಿಳಿಸಿದರು. ನಾವೆಲ್ಲಾ ಹೋಗಿ ನೋಡಿದಾಗ ಅದು ನನ್ನ ಅಣ್ಣನದ್ದೇ ಎಂದು ಗೊತ್ತಾಯಿತು ಎಂದು ತಿಳಿಸಿದ್ದಾರೆ.

ADVERTISEMENT

ಇತ್ತೀಚೆಗೆ ನಡೆದ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿ ಎಂ.ಎ. ರಾಘವೇಂದ್ರ ಅವರೊಂದಿಗೆ ಮೂರ್ತಿಯ ಸಹೋದರ ಗುರುತಿಸಿಕೊಂಡು ಪ್ರಚಾರ ಮಾಡಿದ್ದರು. ಗೆದ್ದ ನಂತರ ರಾಘವೇಂದ್ರ ಪಟಾಕಿ ಹೊಡೆಯುವ ಸಂದರ್ಭದಲ್ಲಿ ಜೆಡಿಎಸ್ ಬೆಂಬಲಿಗರ ನಡುವೆ ಗಲಾಟೆ ನಡೆದು, ಎರಡೂ ಪಕ್ಷದವರೂ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ರಾಜಕೀಯ ವೈಷಮ್ಯದ ಹಿನ್ನೆಲೆಯಲ್ಲಿ ಕೊಲೆ ನಡೆದಿರಬಹುದು ಎಂದು ಶಂಕಿಸಿದ್ದಾರೆ.

ಮೃತ ಮೂರ್ತಿ ಹಾಗೂ ಕುಟುಂಬದವರು ಬೆಂಗಳೂರಿನಲ್ಲಿ ವಾಸ ಇದ್ದು ಆಗಾಗ ಊರಿಗೆ ಬಂದು ಹೋಗುತ್ತಿದ್ದರು. ಮೃತರಿಗೆ ಪತ್ನಿ, ಪುತ್ರ, ಪುತ್ರಿ ಇದ್ದಾರೆ.

ಗ್ರಾಮಾಂತರ ಠಾಣೆ ಎಸ್.ಐ. ವಿನಯ್‍ಕುಮಾರ್ ಕೊಲೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.