ಹೊಳೆನರಸೀಪುರ: ಪಟ್ಟಣದಲ್ಲಿ 68ನೇ ವರ್ಷದ ಗಣೇಶೋತ್ಸವ ಆಗಸ್ಟ್ 27ರಿಂದ ಪ್ರಾರಂಭವಾಗುತ್ತಿದ್ದು ಮಹಾಗಣಪತಿ ಸೇವಾ ಸಮಿತಿಯ ಪದಾಧಿಕಾರಿಗಳು ಭರದ ಸಿದ್ದತೆ ನಡೆಸಿದ್ದಾರೆ. ಈ ವರ್ಷ 1 ತಿಂಗಳು ಗಣೇಶೋತ್ಸವ ನಡೆಸಿ ಸೆಪ್ಟಂಬರ್ 28ರಂದು ಹೇಮಾವತಿ ನದಿಯಲ್ಲಿ ತೆಪ್ಪೋತ್ಸವ ನಡೆಸಿ ವಿಸರ್ಜಿಸಲಾಗುವುದು.
ಸೆಪ್ಟಂಬರ್ 28ರಂದು ರಾತ್ರಿ ಪಟ್ಟಣದ ಪ್ರಮುಖ ಬೀದಿಗಳಲ್ಲಿ ವಿವಿಧ ಬಗೆಯ ಕಲಾತಂಡಗಳ ಜೊತೆಯಲ್ಲಿ ಮೆರವಣಿಗೆ ನಡೆಸಿ ವಿಸರ್ಜಿಸಲಾಗುವುದು ಎಂದು ಸಮಿತಿಯ ಕಾರ್ಯಾಧ್ಯಕ್ಷ ಎಚ್.ಎಸ್. ಪುಟ್ಟಸೋಮಪ್ಪ ತಿಳಿಸಿದ್ದಾರೆ.
ತಿಂಗಳು ಪೂರ್ತಿ ವಿವಿಧ ಬಗೆಯ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದ್ದು ಈ ಬಾರಿ ಸ್ಥಳೀಯ ಕಲಾವಿದರಿಗೆ ಹೆಚ್ಚಿನ ಅವಕಾಶ ನೀಡಲಾಗಿದೆ. ಪ್ರತಿದಿನ ಬೆಳಿಗ್ಗೆ ಗಣೇಶನಿಗೆ ವಿಶೇಷ ಅಲಂಕಾರ ಮಾಡಿ ಪೂಜಿಸಿ 12 ಗಂಟೆಗೆ ಮಹಾಮಂಗಳಾರ ಮಾಡಿ ನಂತರ ಸಾರ್ವಜನಿಕರಿಗೆ ಪ್ರಸಾದ ನೀಡಲಾಗವುದು ಎಂದು ತಿಳಿಸಿದ್ದಾರೆ.
ಲೋಕ ಕಲ್ಯಾಣಾರ್ಥ ಮಹಾಗಣಪತಿ ಹೋಮ, ಸಾರ್ವಜನಿಕರಿಗೆ ಅನ್ನಸಂತರ್ಪಣೆಯೂ ನಡೆಯಲಿದೆ. ಮಹಾಗಣಪತಿ ಪೆಂಡಾಲ್ ವೇದಿಕೆಯಲ್ಲಿ ಪ್ರತಿದಿನ ಸಂಜೆ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದ್ದು ಸಂಗೀತ, ದೇವರನಾಮ, ನಾಟಕ, ನೃತ್ಯ, ಆರ್ಕೆಸ್ಟ್ರಾ, ರಂಗಗೀತೆ, ಜನಪದಗೀತೆ ಕಾರ್ಯಕ್ರಮ, ಹಾಸ್ಯ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಗಣೇಶೋತ್ಸವ ಆಚರಣೆ ಸಿದ್ದತೆಯನ್ನು ಪರಿಶೀಲಿಸಿ ಹೆಚ್ಚಿನ ಸಹಕಾರ ನೀಡುವ ಭರವಸೆ ನೀಡಿದ್ದಾರೆ ಎಂದರು.
ಕಲಾವಿದ ಚಂದ್ರು ಮಣ್ಣಿನ ಗಣೇಶನನ್ನು ಮಾಡುತ್ತಿದ್ದು ಅಂತಿಮ ರೂಪ ನೀಡುತ್ತಿದ್ದಾರೆ. ಪುರಸಭಾಧ್ಯಕ್ಷ ಎಚ್.ಕೆ. ಪ್ರಸನ್ನ ಸಮಿತಿಯ ಅಧ್ಯಕ್ಷರಾಗಿ ಸಹಕಾರ ನೀಡುತ್ತಿದ್ದಾರೆ. ಪಟ್ಟಣದಲ್ಲಿ ಕಲಾವಿದ ಸತೀಶ್ ನೂರಾರು ಪರಿಸರಪ್ರೇಮಿ ಗಣೇಶನನ್ನು ಮಾರಾಟಕ್ಕೆ ಸಿದ್ದಪಡಿಸಿದ್ದು, ಇಲ್ಲಿನ ಬಯಲು ರಂಗಮಂದಿರದ ಮೈದಾನದಲ್ಲಿ ಹತ್ತಾರು ಅಂಗಡಿಗಳಿದ್ದು ಈ ಅಂಗಡಿಗಳಲ್ಲಿ ವಿವಿಧ ಬಗೆಯ ಗಣೇಶ ಮೂರ್ತಿಗಳನ್ನು ಮಾರಾಟಕ್ಕೆ ಇಟ್ಟಿದ್ದಾರೆ. 500 ರಿಂದ 15 ಸಾವಿರದ ವರೆಗಿನ ಗಣೇಶನನ್ನೂ ಮಾರಾಟಕ್ಕೆ ಇಟ್ಟಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.