ADVERTISEMENT

ಬಗೆಹರಿಯದ ಕಸ ವಿಲೇವಾರಿ ಸಮಸ್ಯೆ

ನಗರದ ಎಲ್ಲೆಲ್ಲೂ ತ್ಯಾಜ್ಯದ ರಾಶಿ, ನಗರಸಭೆ ವತಿಯಿಂದ ಜಾಗೃತಿ ಮೂಡಿಸಿದರೂ ಪ್ರಯೋಜನವಿಲ್ಲ

ಕೆ.ಎಸ್.ಸುನಿಲ್
Published 21 ಜನವರಿ 2020, 9:21 IST
Last Updated 21 ಜನವರಿ 2020, 9:21 IST
ಹಾಸನದ ರಸ್ತೆ ಬದಿ ಬಿಸಾಡಿರುವ ಕಸ
ಹಾಸನದ ರಸ್ತೆ ಬದಿ ಬಿಸಾಡಿರುವ ಕಸ   

ಹಾಸನ: ತ್ಯಾಜ್ಯ ವಿಲೇವಾರಿಗೆ ಶಾಶ್ವತ ಪರಿಹಾರ ಕಲ್ಪಿಸಲು ನಗರಸಭೆ ಪ್ರಯತ್ನಿಸುತ್ತಿದ್ದರೆ, ಇತ್ತ ನಗರದಲ್ಲಿ ಎಲ್ಲೆಂದರೆಲ್ಲಿ ಬಿಸಾಡುವ ಕಸದಿಂದ ನಿತ್ಯ ಜನರು ತೊಂದರೆ ಪಡುವಂತಾಗಿದೆ.

ಖಾಲಿ ನಿವೇಶನಗಳಲ್ಲೂ ಹೆಚ್ಚಾಗಿ ಕಸ ತಂದು ಸುರಿಯಲಾಗುತ್ತಿದೆ. ಇದರಿಂದ ಸುತ್ತಮುತ್ತಲ ನಿವಾಸಿಗಳು ತೊಂದರೆ ಅನುಭವಿಸುವುದು ತಪ್ಪಿಲ್ಲ. ದುರ್ವಾಸನೆಯಿಂದ ಮೂಗು ಮುಚ್ಚಿಕೊಂಡು ಓಡಾಡಬೇಕಾಗಿದೆ. ಕಸದಿಂದಾಗಿ ಸೊಳ್ಳೆಗಳು, ಕ್ರಿಮಿಕೀಟ ಗಳು ಉತ್ಪತ್ತಿಯಾಗುತ್ತಿದ್ದು, ಸಾಂಕ್ರಾಮಿಕ ರೋಗ ಹರಡುವ ಭೀತಿಯುಂಟಾಗಿದೆ. ದನಕರುಗಳು ಕಸದ ರಾಶಿಯಲ್ಲಿ ಸಿಗುವ ಪ್ಲಾಸ್ಟಿಕ್ ತಿಂದು ಮೃತಪಡುತ್ತಿವೆ.

ನಗರದಲ್ಲಿ ಪ್ಲಾಸ್ಟಿಕ್‌ ಬಳಕೆ ನಿಷೇಧಿಸಿದರೂ ಹಲವು ಹೋಟೆಲ್‌, ಅಂಗಡಿ, ರೆಸ್ಟೋರೆಂಟ್‌ಗಳಲ್ಲಿ ಆಹಾರ ಪದಾರ್ಥ ಪಾರ್ಸಲ್‌ಗಳಿಗೆ ಈಗಲೂ ಬಳಸಲಾಗುತ್ತಿದೆ. ರಸ್ತೆ ಬದಿ, ಖಾಲಿ ನಿವೇಶನ, ಎಲ್ಲೆಂದರಲ್ಲಿ ಕಸ ಬಿಸಾಡದಂತೆ ನಗರಸಭೆ ಅರಿವು ಮೂಡಿ ಸುತ್ತಿದ್ದರೂ ನಾಗರಿಕರು ತಮಗೂ ಅದಕ್ಕೂ ಯಾವುದೇ ಸಂಬಂಧ ಇಲ್ಲವೆಂಬಂತೆ ವರ್ತಿಸುತ್ತಿದ್ದಾರೆ.

ADVERTISEMENT

ನಗರದಲ್ಲಿ ನಿತ್ಯ 72 ಟನ್‌ ತ್ಯಾಜ್ಯ ಸಂಗ್ರಹವಾಗುತ್ತಿದೆ. ಮನೆ, ಹೋಟೆಲ್‌ಗಳಲ್ಲಿ ಸಂಗ್ರಹವಾಗುವ ಕಸವನ್ನು ಅಗಿಲೆ ಘನ ತ್ಯಾಜ್ಯ ವಿಲೇವಾರಿ ಘಟಕಕ್ಕೆ ತಂದು ಹಾಕಲಾಗುತ್ತಿದೆ. ಹಾಸನ ನಗರದ ತ್ಯಾಜ್ಯದ ಜತೆಗೆ ಸಕಲೇಶಪುರ ಪಟ್ಟಣದ ಕಸವನ್ನು ಈ ಘಟಕಕ್ಕೆ ಸಾಗಿಸಲಾಗುತ್ತಿದೆ. ಮೂರು ವರ್ಷಗಳ ತ್ಯಾಜ್ಯ ವಿಲೇವಾರಿ ಕಾರ್ಯ ಪ್ರಗತಿಯಲ್ಲಿದೆ.

ನಗರದ ಕೆಲ ಬಡಾವಣೆಗಳಿಗೆ ಕಸ ಸಂಗ್ರಹ ಆಟೊ, ಟಿಪ್ಪರ್‌ಗಳು ನಿಯಮಿತವಾಗಿ ಹೋಗುವುದಿಲ್ಲ. ಹಸಿ ಹಾಗೂ ಒಣ ಕಸವನ್ನು ಪ್ರತ್ಯೇಕವಾಗಿ ಸಂಗ್ರಹಿಸುವ ವ್ಯವಸ್ಥೆ ರೂಪಿಸಿಲ್ಲ. ಎಲ್ಲವೂ ಒಂದೇ ಸ್ಥಳಕ್ಕೆ ಹೋಗಿ ರಾಶಿ ಬೀಳುತ್ತಿದೆ. ವೈಜ್ಞಾನಿಕ ಕಸ ವಿಲೇವಾರಿ ವಿಧಾನ ಅಳವಡಿಸಿಕೊಳ್ಳದಿದ್ದರೆ ನಗರಸಭೆ ಎನ್‌ಜಿಟಿ ಕೆಂಗಣ್ಣಿಗೆ ಗುರಿಯಾಗಬೇಕಾಗುತ್ತದೆ.

ಘನತ್ಯಾಜ್ಯ ವಸ್ತುಗಳಲ್ಲಿನ ರಾಸಾಯನಿಕಗಳು ಭೂಮಿ ಒಡಲು ಸೇರಿ ಅಂತರ್ಜಲ ಕಲುಷಿಗೊಳ್ಳುತ್ತಿದೆ. ಇದರಿಂದ ಹಸಿ, ಒಣ ಹಾಗೂ ಅಪಾಯ ಕಾರಿ ತ್ಯಾಜ್ಯವನ್ನು ಕಡ್ಡಾಯವಾಗಿ ಮನೆಗಳಲ್ಲೇ ವಿಂಗಡನೆ ಮಾಡಿ ಸಂಗ್ರಹಿಸಬೇಕು. ಸಾಧ್ಯವಾಗದಿದ್ದಲ್ಲಿ ಸಮುದಾಯ ಗೊಬ್ಬರ ತಯಾರಿಕಾ ಘಟಕಗಳನ್ನು ಸ್ಥಾಪಿಸಿ ಗೊಬ್ಬರವನ್ನು ರೈತರಿಗೆ ಕಡಿಮೆ ದರದಲ್ಲಿ ನೀಡಲು ಯೋಜನೆ ರೂಪಿಸಬೇಕು ಎನ್ನುವುದು ರಾಷ್ಟ್ರೀಯ ಹಸಿರು ನ್ಯಾಯಾಧಿಕರಣದ (ಎನ್‌ಜಿಟಿ) ನಿರ್ದೇಶನವಾಗಿದೆ.

ಶೂನ್ಯ ತ್ಯಾಜ್ಯ ನಗರವಾಗಿಸಲು ಎನ್‌ಜಿಟಿ ಕೆಲ ಮಾರ್ಗಸೂಚಿಗಳನ್ನು ನೀಡಿದೆ. ಅದರಂತೆ ನಿತ್ಯವೂ ಮನೆಗಳಿಂದ ಹಸಿ ಕಸವನ್ನು ಮಾತ್ರವೇ ಸಂಗ್ರಹಿಸಬೇಕು. ವಾರಕ್ಕೆ 2 ದಿನ ಒಣ ಕಸವನ್ನು ಪ್ರತ್ಯೇಕವಾಗಿ ಪಡೆಯಬೇಕು. ಪ್ರತಿ ಮನೆಯಲ್ಲಿಯೂ ಉತ್ಪತ್ತಿಯಾಗುವ ಕಸವನ್ನು ಆಯಾ ಸ್ಥಳೀಯ ಸಂಸ್ಥೆಯ ತ್ಯಾಜ್ಯ ಸಂಗ್ರಹ ವಾಹನಕ್ಕೆ ನೀಡಬೇಕು. ಆ ರೀತಿ ಮಾಡದಿದ್ದರೆ ದಂಡ ವಿಧಿಸಬಹುದಾಗಿದೆ.

‘ಕಸ ಸಂಗ್ರಹ ವಾಹನಕ್ಕೆ ಸಾರ್ವಜನಿಕರು ಕಸ ಹಾಕುವುದೇ ದೊಡ್ಡ ಶಿಕ್ಷೆ ಎಂದು ಭಾವಿಸುತ್ತಾರೆ. ಇನ್ನು ಹಸಿ, ಒಣ ಕಸವನ್ನು ಪ್ರತ್ಯೇಕಿಸಿ ಕೊಡುವುದು ಅಸಾಧ್ಯದ ಮಾತು. ಅಗಿಲೆಯಲ್ಲಿ ತ್ಯಾಜ್ಯ ವಿಲೇವಾರಿಯನ್ನು ನಗರಸಭೆಯಿಂದಲೇ ಮಾಡಲಾಗುತ್ತಿದೆ. ಇ ವೇಸ್ಟ್‌ ಕೇಂದ್ರ ಸ್ಥಾಪನೆಗೆ ಸ್ಥಳ ಅಥವಾ ಹಣಕಾಸಿನ ಅಭಾವ ಇಲ್ಲ. ಆದರೆ, ಅದರ ನಿರ್ವಹಣೆ ಆಗುವಷ್ಟು ವಿದ್ಯುನ್ಮಾನ ಸಾಮಗ್ರಿ ದೊರೆಯುವುದು ಕಷ್ಟ’ ಎಂದು ನಗರಸಭೆ ಆಯುಕ್ತ ಆರ್‌.ಕೃಷ್ಣಮೂರ್ತಿ ಹೇಳಿದರು.

ಕಸ ಸುರಿದು ಸ್ವಚ್ಛತೆ ಪಾಠ

ಸಾಕಷ್ಟು ಎಚ್ಚರಿಕೆ ನೀಡಿದರೂ ನಿರ್ಲಕ್ಷಿಸಿ ರಸ್ತೆಗೆ ಕಸ ಸುರಿಯುತ್ತಿದ್ದ ನಗರದ ಹಳೇ ಮುನ್ಸಿಪಲ್‌ ರಸ್ತೆಯಲ್ಲಿರುವ ರಜತ ಕಾಂಪ್ಲೆಕ್ಸ್‌ ವರ್ತಕರಿಗೆ ನಗರಸಭೆ ಅಧಿಕಾರಿಗಳು ಹೊಸ ರೀತಿ ಪಾಠ ಕಲಿಸಿದ್ದಾರೆ. ರಸ್ತೆಗೆ ಹಾಕಿದ ಕಸವನ್ನು ಕಾಂಪ್ಲೆಕ್ಸ್‌ ಒಳಗೆ ಸುರಿದ ಸ್ವಚ್ಛತೆಯ ಅರಿವು ಮೂಡಿಸಿದ್ದಾರೆ. ವರ್ತಕರು ನಿತ್ಯವೂ ಬೆಳಿಗ್ಗೆ ತ್ಯಾಜ್ಯ ವಸ್ತುಗಳನ್ನು ಎದುರಿನ ರಸ್ತೆಗೆ ಸುರಿಯುತ್ತಿದ್ದರು. ಹೀಗೆ ಮಾಡದಂತೆ ಹಲವು ಬಾರಿ ಎಚ್ಚರಿಕೆ ನೀಡಿದ್ದರು. ಡ್ರಮ್ ಬಳಸಿ ತ್ಯಾಜ್ಯ ಸಂಗ್ರಹಿಸುವಂತೆ ಸೂಚಿಸಲಾಗಿತ್ತು. ಸ್ಥಳಕ್ಕೆ ಭೇಟಿ ನೀಡಿದ ಆರೋಗ್ಯ ಅಧಿಕಾರಿ ಆದೀಶ್‌ ಕುಮಾರ್, ಎಲ್ಲ ಕಸವನ್ನು ಕಾಂಪ್ಲೆಕ್ಸ್‌ ಒಳಗೆ ಸುರಿಯವಂತೆ ಪೌರಕಾರ್ಮಿಕರಿಗೆ ನಿರ್ದೇಶನ ನೀಡಿದರು.

‘ಕಸ ಸಂಗ್ರಹ ಆಟೊ ಬಂದರೂ ಅದಕ್ಕೆ ಕಸ ಹಾಕುವುದಿಲ್ಲ. ಕಾಂಪ್ಲೆಕ್ಸ್ ವರ್ತಕರಿಗೆ ಸ್ವಚ್ಛತೆ ಕರಿತು ತಿಳಿವಳಿಕೆ ನೀಡಲಾಗಿದೆ. ಸಾರ್ವಜನಿಕರು ನೈರ್ಮಲ್ಯಕ್ಕೆ ಆದ್ಯತೆ ನೀಡದಿದ್ದರೆ ದಂಡ ವಿಧಿಸಲಾಗುವುದು’ ಎಂದು ಆದೀಶ್‌ ಕುಮಾರ್ ಎಚ್ಚರಿಕೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.