ಚನ್ನರಾಯಪಟ್ಟಣ: ‘ಮಹಾತ್ಮ ಗಾಂಧೀಜಿ ಅವರು ಗ್ರಾಮ ಸ್ವರಾಜ್ಯದ ಪರಿಕಲ್ಪನೆಯನ್ನು ಸಾಕಾರಗೊಳಿಸಿದರು’ ಎಂದು ಶಾಸಕ ಸಿ.ಎನ್. ಬಾಲಕೃಷ್ಣ ಹೇಳಿದರು.
ತಾಲ್ಲೂಕು ಆಡಳಿತದಿಂದ ತಾಲ್ಲೂಕು ಕಚೇರಿ ಆವರಣದಲ್ಲಿ ಸೋಮವಾರ ಏರ್ಪಡಿಸಿದ್ದ ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಹಳ್ಳಿಗಳು ಅಭಿವೃದ್ಧಿ ಹೊಂದಿದರೆ ದೇಶದ ಪ್ರಗತಿ ಎಂದು ಅಚಲವಾಗಿ ನಂಬಿದ್ದರು. ಅವರ ಹೆಸರಿನಲ್ಲಿ ಎಂಜಿಎನ್ಆರ್ಇಜಿಎ ಯೋಜನೆಯನ್ನು ಜಾರಿಗೊಳಿಸುವ ಮೂಲಕ ಗ್ರಾಮೀಣ ಪ್ರದೇಶದ ಜನರಿಗೆ ಕೆಲಸ ನೀಡಲಾಗುತ್ತಿದೆ. ದೇಶಕ್ಕಾಗಿ ಹೋರಾಡಿದ್ದ ಗಾಂಧೀಜಿ, ಸ್ವಾತಂತ್ರ್ಯಾನಂತರ ಯಾವುದೇ ಅಧಿಕಾರ ಬಯಸಲಿಲ್ಲ. ನನ್ನ ಜೀವನವೇ ನನ್ನ ಸಂದೇಶ ಎಂಬ ತತ್ವ ಸಾರಿದರು’ ಎಂದು ಹೇಳಿದರು.
‘ಭಾರತದ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ, ಜೈಜವಾನ್ ಜೈಕಿಸಾನ್ ಘೋಷಣೆ ಮೂಲಕ ಸೈನಿಕ ಮತ್ತು ರೈತಾಪಿ ವರ್ಗಕ್ಕೆ ಒತ್ತು ನೀಡಿದರು. ದೇಶ ಸಂಕಷ್ಟದಲ್ಲಿದ್ದಾಗ ಪ್ರತಿ ಸೋಮವಾರ ಒಂದು ಹೊತ್ತು ಉಪವಾಸ ಇರುವಂತೆ ಜನರಿಗೆ ಕರೆ ಕೊಟ್ಟರು. ಸ್ವತಃ ತಾವು ಉಪವಾಸ ಇರುತ್ತಿದ್ದರು. ಗಾಂಧೀಜಿ ಅವರ ಕರೆಗೆ ಓಗೊಟ್ಟು ವಿದ್ಯಾರ್ಥಿ ದೆಸೆಯಲ್ಲಿಯೇ ಸ್ವಾತಂತ್ರ್ಯ ಚಳವಳಿಗೆ ಧುಮುಕಿದರು ಎಂದ ಅವರು, ಇಬ್ಬರು ಮಹಾನ್ ನಾಯಕರು ಸರಳ ಜೀವನ ನಡೆಸಿದರು. ಅವರ ಚಿಂತನೆಗಳು ನಮ್ಮ ಬದುಕಿಗೆ ದಾರಿದೀಪ’ ಎಂದು ಹೇಳಿದರು.
ಫಾದ್ರಿ ಜೆರ್ಮ್, ಬಾಲಕೃಷ್ಣ ಭಟ್, ಶಂಷುಉಲ್ಲಾ ಮಾತನಾಡಿದರು. ತಹಶೀಲ್ದಾರ್ ಸಿ.ಜಿ. ಗೀತಾ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಅಧಿಕಾರಿ ಎ.ಎಸ್. ಇಂದ್ರಾ, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಜಿ.ಆರ್. ಹರೀಶ್, ಗ್ರೇಡ್-2 ತಹಶೀಲ್ದಾರ್ ನಾಗರಾಜು, ಬಿಸಿಎಂ ಇಲಾಖೆಯ ವಿಸ್ತರಣಾಧಿಕಾರಿ ಅನಂತ್, ಅಕ್ಷರ ದಾಸೋಹ ಅಧಿಕಾರಿ ಚೆಲುವನಾರಾಯಣಸ್ವಾಮಿ, ಅಧಿಕಾರಿ ಸತೀಶ್, ನಿವೃತ್ತ ಗ್ರೇಡ್ -2 ತಹಶೀಲ್ದಾರ್ ಮರಿಯಯ್ಯ ಇದ್ದರು. ನಂತರ ತಾಲ್ಲೂಕು ಕಚೇರಿ ಆವರಣದಲ್ಲಿ ಸ್ವಚ್ಛತೆ ಕೈಗೊಳ್ಳಲಾಯಿತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.