ಕೊಣನೂರು: ‘ಲಾಕ್ಡೌನ್ ಸಂಕಷ್ಟದ ನಡುವೆಯೂ ಸಾಲ ಮರುಪಾವತಿಗೆ ವಿವಿಧ ಸಂಘ- ಸಂಸ್ಥೆಗಳು ಒತ್ತಡ ಹಾಕುತ್ತಿರುವ ಪರಿಣಾಮ ಜೀವನ ನಿರ್ವಹಣೆ ಸಾಧ್ಯವಾಗದೆ ತ್ರಿಶಂಕು ಸ್ಥಿತಿಗೆ ತಲುಪಿದ್ದು ಸರ್ಕಾರ ನೆರವಿಗೆ ಧಾವಿಸಬೇಕು’ ಎಂದು ಮಹಿಳಾ ಸದಸ್ಯರು ಒತ್ತಾಯಿಸಿದ್ದಾರೆ.
ರಾಮನಾಥಪುರ ಹೋಬಳಿಯ ಶಿರದನಹಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ವಿವಿಧ ಮಹಿಳಾ ಸಂಘಗಳ ಸದಸ್ಯರು, ‘ಮೈಕ್ರೊ ಫೈನಾನ್ಸ್ಗಳಾದ ಗ್ರಾಮೀಣ ಕೂಟ, ಮುತ್ತೂಟ್ ಫೈನಾನ್ಸ್, ಸಮಸ್ತ ಸಂಘ, ಗ್ರಾಮಶಕ್ತಿ, ಆರ್.ಬಿ.ಎಲ್. ಹಾಗೂ ಬಿ.ಎಸ್.ಎಸ್. ಮತ್ತು ಎಲ್.ಇ.ಟಿ., ಧರ್ಮಸ್ಥಳ ಸಂಘ ಹಾಗೂ ಐಸಿಐಸಿ ಸಂಘಗಳು ನೀಡಿರುವ ಸಾಲ ಮರುಪಾವತಿಸಲು ಮಹಿಳೆಯರಿಗೆ ಕಷ್ಟಕರವಾಗಿದೆ. ಮಹಿಳೆಯರು ತಮ್ಮ ಸಂಕಷ್ಟವನ್ನು ತೋಡಿಕೊಂಡರು ಸಾಲ ಮರುಪಾವತಿಸಲು ಕಾಲಾವಕಾಶ ನೀಡದೆ ಕಿರುಕುಳ ನೀಡಲಾಗುತ್ತಿದೆ’ ಎಂದು ಸಂಘದ ಸದಸ್ಯೆ ಶಿರದನಹಳ್ಳಿ ಹರಿಣಿ ಕಣ್ಣೀರು ಹಾಕಿದರು.
ಸದಸ್ಯೆ ಮೀನಾಕ್ಷಿ ಮಾತನಾಡಿ, ‘ಹಣ ಕಟ್ಟುವಂತೆ ತೊಂದರೆ ನೀಡಿ ಭಯ ಹುಟ್ಟಿಸುತ್ತಿದ್ದು ದಿಕ್ಕು ತೋಚದಾಗಿದೆ’ ಎಂದು ಅಳಲು ತೋಡಿಕೊಂಡರು.
‘ಪ್ರಧಾನಿ ನರೇಂದ್ರ ಮೋದಿ ಅವರು ಬಿಡುಗಡೆ ಮಾಡಿರುವ ಪ್ಯಾಕೇಜ್ನಲ್ಲಿ ಶೇ 2 ರಷ್ಟನ್ನು ಮಹಿಳಾ ಸಂಘ ಸಂಸ್ಥೆಗಳಿಗೆ ನೀಡಿದ್ದರೆ ಅನುಕೂಲವಾಗುತ್ತಿತ್ತು. ಜನಪ್ರತಿನಿಧಿಗಳು ಸಮಸ್ಯೆಗೆ ಸ್ಪಂದಿಸುತ್ತಿಲ್ಲ. ನಮ್ಮ ಬಳಿ ಈಗ ಬಿಡಿಗಾಸು ಇಲ್ಲ. ಇಂಥ ಸಂಕಷ್ಟದಲ್ಲಿ ಹಣ ಕಟ್ಟಲು ತೊಂದರೆಯಾಗಿದೆ’ ಎಂದು ಸದಸ್ಯೆ ಅಭಿಲಾಷಾ ನೋವು ತೋಡಿಕೊಂಡರು.
ರೈತ ಸಂಘದ ಮುಖಂಡ ಜಗದೀಶ್ ಮಾತನಾಡಿ, ‘ಸರ್ಕಾರ ಬಡ ವರ್ಗದ ಜನರ ನೋವಿಗೆ ಧ್ವನಿಯಾಗುತ್ತಿಲ್ಲ. ಸಂಘ– ಸಂಸ್ಥೆಗಳು ಮಹಿಳೆಯರನ್ನು ಹಣ ಕಟ್ಟುವಂತೆ ಪೀಡಿಸುತ್ತಿರುವುದು ಸರಿಯಲ್ಲ. ಈ ರೀತಿ ಸದಸ್ಯರಿಗೆ ತೊಂದರೆ ನೀಡಿದರೆ ಮುಂದಿನ ದಿನಗಳಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು’ ಎಂದು ಎಚ್ಚರಿಸಿದರು.
ವಿವಿಧ ಸಂಘಗಳ 15ಕ್ಕೂ ಹೆಚ್ಚು ಜನ ಸದಸ್ಯರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.