ADVERTISEMENT

ಗ್ರಾನೈಟ್ ಮಾಲೀಕನ ಬರ್ಬರ ಹತ್ಯೆ

ಮನೆಗೆ ನುಗ್ಗಿ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿರುವ ಹಂತಕರು

​ಪ್ರಜಾವಾಣಿ ವಾರ್ತೆ
Published 16 ಮೇ 2019, 13:47 IST
Last Updated 16 ಮೇ 2019, 13:47 IST
 ಅಪ್ಪಣ್ಣಗೌಡನ ಮೃತದೇಹ ಎದುರು ರೋಧಿಸುತ್ತಿರುವ ಕುಟುಂಬ ಸದಸ್ಯರು
 ಅಪ್ಪಣ್ಣಗೌಡನ ಮೃತದೇಹ ಎದುರು ರೋಧಿಸುತ್ತಿರುವ ಕುಟುಂಬ ಸದಸ್ಯರು   

ಹಾಸನದ: ಬೇಲೂರು ರಸ್ತೆಯ ತಣ್ಣೀರು ಹಳ್ಳದ ಸುಭಾಶ್ ನಗರ ಬಡಾವಣೆಯಲ್ಲಿ ಬುಧವಾರ ರಾತ್ರಿ ಗ್ರಾನೈಟ್ ಮಾಲೀಕ ಅಪ್ಪಣ್ಣಗೌಡ (48)ರನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ.

ಸಂಬಂಧಿಕರ ಮನೆಗೆ ಹೋಗಿ ನಂತರ ಮನೆಗೆ ಬಂದು ಅಪ್ಪಣ್ಣಗೌಡ ಮಲಗಿದ್ದರು. ಬೃಹತ್ ಮನೆಯ ಮುಂಬಾಗಿಲು ತೆರೆಯದೇ ಒಳ ನುಗ್ಗಿರುವ ಹಂತಕರು, ತಲೆಗೆ ಮಾರಕಾಸ್ತ್ರಗಳಿಂದ ಹೊಡೆದು ಕೊಂದು ಪರಾರಿಯಾಗಿದ್ದಾರೆ. ಕೊಠಡಿಯ ಅನೇಕ ಕಡೆ ರಕ್ತದ ಕಲೆಗಳಾಗಿವೆ.

ಘಟನೆ ನಡೆದಾಗ ಮನೆಯಲ್ಲಿ ಯಾರು ಇರಲಿಲ್ಲ ಎನ್ನಲಾಗಿದೆ. ಮನೆ ಮುಂದೆ ಅಳವಡಿಸಿದ್ದ ಸಿಸಿಟಿವಿ ಕ್ಯಾಮೆರಾ ತಿಂಗಳ ಹಿಂದಷ್ಟೇ ಕೆಟ್ಟು ಹೋಗಿದ್ದವು ಎನ್ನಲಾಗಿದೆ.


ಅಪ್ಪಣ್ಣರಿಗೆ ಇಬ್ಬರು ಪತ್ನಿಯರು ಹಾಗೂ ನಾಲ್ವರು ಮಕ್ಕಳಿದ್ದರು. ಯಾವ ಕಾರಣಕ್ಕೆ ಹತ್ಯೆ ನಡೆದಿದೆ ಎಂಬುದರ ಬಗ್ಗೆ ಪೊಲೀಸರು ತನಿಖೆ ಚುರುಕು ಗೊಳಿಸಿದ್ದಾರೆ.
ಘಟನೆ ನೆರೆ ಹೊರೆಯವರನ್ನು ಬೆಚ್ಚಿ ಬೀಳಿಸಿದ್ದರೆ, ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿತು.

ADVERTISEMENT

ನಗರ ಠಾಣೆ ಪೊಲೀಸರು ಹಾಗೂ ಮೇಲಧಿಕಾರಿಗಳು ಸ್ಥಳಕ್ಕೆ ದೌಡಾಯಿಸಿ ಪರಿಶೀಲನೆ ನಡೆಸಿದರು. ಹಾಗೆಯೇ ಶ್ವಾನದಳದಿಂದಲೂ ತಪಾಸಣೆ ನಡೆಸಲಾಯಿತು.

ರಂಗನಾಥ ಗ್ರಾನೈಟ್ಸ್ ನಡೆಸುತ್ತಿದ್ದ ಅಪ್ಪಣ್ಣಗೌಡ, ಆರ್ಥಿಕವಾಗಿ ಸ್ಥಿತಿವಂತನಾಗಿದ್ದೂ, ಯಾರ ತಂಟೆ, ತಕರಾರಿಗೂ ಹೋಗುತ್ತಿರಲಿಲ್ಲ. ತಮ್ಮ ಕೆಲಸ ಮಾಡಿಕೊಂಡಿದ್ದರು.

ಮೃತ ಸಹೋದರ ಲೋಕೇಶ್‌ ದೂರು ಆಧರಿಸಿ ಪೊಲೀಸರು ಎಲ್ಲಾ ದೃಷ್ಟಿಕೋನಗಳಿಂದಲೂ ತನಿಖೆ ತೀವ್ರಗೊಳಿಸಿದ್ದಾರೆ.

‘ಆಸ್ತಿ ವೈಷ್ಯಮ್ಯದಿಂದ ಅಥವಾ ಕೌಟುಂಬಿಕ ಕಲಹದಿಂದ ಈ ಕೃತ್ಯ ನಡೆದಿದೆ ಎಂಬುದರ ಬಗ್ಗೆ ಶಂಕೆ ವ್ಯಕ್ತವಾಗಿದೆ. ಪಕ್ಕಾ ಪ್ಲಾನ್ ಮಾಡಿ ಕೃತ್ಯ ಎಸಗಿ ಪರಾರಿಯಾಗಿದ್ದು, ಶೀಘ್ರ ಹಂತಕರನ್ನು ಪತ್ತೆ ಮಾಡಲಾಗುವುದು’ ಎಂದು ಪೊಲೀಸ್‌ ವರಿಷ್ಠಾಧಿಕಾರಿ ಚೇತನ್ ಸಿಂಗ್ ರಾಥೋಡ್ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.