ADVERTISEMENT

ಗ್ಯಾರಂಟಿ ಯೋಜನೆ ಫಲಾನುಭವಿಗಳಿಗೆ ತಲುಪಲಿ: ಪೃಥ್ವಿ ಜಯರಾಮ್

ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ತಾಲ್ಲೂಕು ಅಧ್ಯಕ್ಷ ಪೃಥ್ವಿ ಜಯರಾಮ್

​ಪ್ರಜಾವಾಣಿ ವಾರ್ತೆ
Published 22 ಸೆಪ್ಟೆಂಬರ್ 2025, 5:54 IST
Last Updated 22 ಸೆಪ್ಟೆಂಬರ್ 2025, 5:54 IST
ಆಲೂರು ತಾಲ್ಲೂಕು ಪಾಳ್ಯ ಗ್ರಾಮ ಪಂಚಾಯಿತಿಯಲ್ಲಿ ನಡೆದ ಹೋಬಳಿ ಮಟ್ಟದ ಪಂಚ ಗ್ಯಾರಂಟಿ ಯೋಜನೆಗಳ ಪ್ರಗತಿ ಪರಿಶೀಲನೆ ಸಭೆಯಲ್ಲಿ ಗ್ಯಾರಂಟಿ ಯೋಜನೆ ತಾಲ್ಲೂಕು ಅಧ್ಯಕ್ಷ ಪೃಥ್ವಿಜಯರಾಂ ಮಾತನಾಡಿದರು 
ಆಲೂರು ತಾಲ್ಲೂಕು ಪಾಳ್ಯ ಗ್ರಾಮ ಪಂಚಾಯಿತಿಯಲ್ಲಿ ನಡೆದ ಹೋಬಳಿ ಮಟ್ಟದ ಪಂಚ ಗ್ಯಾರಂಟಿ ಯೋಜನೆಗಳ ಪ್ರಗತಿ ಪರಿಶೀಲನೆ ಸಭೆಯಲ್ಲಿ ಗ್ಯಾರಂಟಿ ಯೋಜನೆ ತಾಲ್ಲೂಕು ಅಧ್ಯಕ್ಷ ಪೃಥ್ವಿಜಯರಾಂ ಮಾತನಾಡಿದರು    

ಆಲೂರು: ಗ್ಯಾರಂಟಿ ಯೋಜನೆ ತಲುಪದಿರುವ ಕುಟುಂಬಗಳನ್ನು ಗುರುತಿಸಿ ಕ್ರಮ ವಹಿಸಬೇಕು ಎಂದು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ತಾಲ್ಲೂಕು ಅಧ್ಯಕ್ಷ ಪೃಥ್ವಿ ಜಯರಾಮ್ ಅಧಿಕಾರಿಗಳಿಗೆ ಸೂಚಿಸಿದರು.

ಪಾಳ್ಯ ಗ್ರಾಮ ಪಂಚಾಯಿತಿ ಹೊಯ್ಸಳ ಸಭಾಂಗಣದಲ್ಲಿ ಹೋಬಳಿ ಮಟ್ಟದ ಪಂಚ ಗ್ಯಾರಂಟಿ ಯೋಜನೆಗಳ ಪ್ರಗತಿ ಪರಿಶೀಲನೆ ಸಭೆಯಲ್ಲಿ ಅವರು ಮಾತನಾಡಿದರು.

‘ಬಡವರ, ದೀನ ದಲಿತರ ರಕ್ಷಣೆ ಮತ್ತು ಬಡತನ ಹಸಿವು ನಿವಾರಣೆ ಮಾಡುವ ಉದ್ದೇಶದಿಂದ ಮುಖ್ಯಮಂತ್ರಿ ಸಿದ್ದರಾಮಯ್ಯನವರ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದ ಕೂಡಲೆ ಪಂಚ ಗ್ಯಾರಂಟಿ ಯೋಜನೆಗಳನ್ನು ಅನುಷ್ಠಾನಗೊಳಿಸಿದೆ. ಗ್ಯಾರಂಟಿ ಯೋಜನೆಯಿಂದ ಸರ್ಕಾರದ ಬೊಕ್ಕಸಕ್ಕೆ ಯಾವುದೇ ಹೊರೆ ಬೀಳದೆ ಹಣಕಾಸು ವ್ಯವಸ್ಥೆಯಲ್ಲಿ ಬದಲಾವಣೆ ತರುವ ಮೂಲಕ ರಾಜ್ಯ ಸರ್ಕಾರ ಜನತೆಯ ಬೆನ್ನೆಲುಬಾಗಿ ಕೆಲಸ ಮಾಡುತ್ತಿದೆ. ಮುಂದಿನ ದಿನಗಳಲ್ಲಿ ಹೋಬಳಿ ಮಟ್ಟದಲ್ಲಿ ಗ್ಯಾರಂಟಿ ಯೋಜನೆಗಳ ಫಲಾನುಭವಿಗಳ ಶಿಬಿರಗಳನ್ನು ನಡೆಸಲಾಗುವುದು’ ಎಂದರು.

ADVERTISEMENT

ತಾಲೂಕು ಪಂಚಾಯಿತಿ ಇಒ ಸುಬ್ರಹ್ಮಣ್ಯಶರ್ಮ ಮಾತನಾಡಿ, ‘ತಾಲ್ಲೂಕಿನ ಗಂಜಿಗೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ 70 ಅಲೆಮಾರಿ ಹಾಗೂ ಮೀನುಗಾರರ ಕುಟುಂಬ ವಾಸಿಸುತ್ತಿವೆ. ಅವರಿಗೆ ನಿಯಮನುಸಾರ ಪಡಿತರ ವಿತರಿಸಬೇಕು. ತಾಲೂಕಿನಲ್ಲಿ ಯುವ ನಿಧಿ ಯೋಜನೆಗೆ ಸಂಬಂಧಿಸಿದಂತೆ ಕಾಲೇಜುಗಳಲ್ಲಿ ಹೆಚ್ಚಿನ ಅರಿವು ಕಾರ್ಯಕ್ರಮವನ್ನು ಮಾಡಲಾಗುವುದು’ ಎಂದರು.

ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರದ ಅಧಿಕಾರಿ ವಿಜಯಲಕ್ಷ್ಮಿ ಮಾತನಾಡಿ, ‘ತಾಲೂಕಿನಲ್ಲಿ ಒಟ್ಟು 340 ಫಲಾನುಭವಿಗಳು ಯುವನಿಧಿ ಯೋಜನೆಯಲ್ಲಿ ನೋಂದಣಿಯಾಗಿದ್ದು, 271 ಫಲಾನುಭವಿಗಳು ಯೋಜನೆ ಲಾಭವನ್ನು ಪಡೆದಿದ್ದಾರೆ’ ಎಂದರು.

ತಾಲ್ಲೂಕು ಆಹಾರ ನಿರೀಕ್ಷಕ ಮೋಹನ್ ಮಾತನಾಡಿ, ‘ಅನ್ನಭಾಗ್ಯ ಯೋಜನೆಯಡಿ ತಾಲ್ಲೂಕಿನ 23,400 ಕುಟುಂಬಗಳ 75,000 ಫಲಾನುಭವಿಗಳು ಯೋಜನೆಯ ಲಾಭವನ್ನು ಪಡೆಯುತ್ತಿದ್ದಾರೆ’ ಎಂದರು.

ಗೃಹಜೋತಿ ಯೋಜನೆಯಡಿ ಆಗಸ್ಟ್ ತಿಂಗಳಲ್ಲಿ ತಾಲ್ಲೂಕಿನಲ್ಲಿ 24,636 ಮನೆಗಳಿಗೆ ಒಟ್ಟು ₹93 ಲಕ್ಷವನ್ನು ವಿನಿಯೋಗಿಸಲಾಗಿದೆ ಎಂದು ಇಲಾಖಾಧಿಕಾರಿ ಶಶಿಕುಮಾರ್ ತಿಳಿಸಿದರು.

‘ಗೃಹಲಕ್ಷ್ಮಿ’ ಯೋಜನೆಯಡಿ ತಾಲ್ಲೂಕಿನಲ್ಲಿ ಒಟ್ಟು 22 ಸಾವಿರ ಅರ್ಹ ಫಲಾನುಭವಿಗಳಿಗೆ ಜೂನ್ ತಿಂಗಳವರೆಗೂ ಡಿಬಿಟಿ ಮುಖಾಂತರ ಹಣ ಪಾವತಿಯಾಗಿದ್ದು, ಶೀಘ್ರದಲ್ಲೇ ಉಳಿದ ಹಣ ಬಿಡುಗಡೆ ಮಾಡಲಿದೆ’ ಎಂದು ಶಿಶು ಅಭಿವೃದ್ಧಿ ಇಲಾಖೆ ಅಧಿಕಾರಿ ತಿಳಿಸಿದರು.

ಸಭೆಯಲ್ಲಿ ಗ್ಯಾರಂಟಿ ಸಮಿತಿ ಸದಸ್ಯರಾದ ಯೋಗೀಶ್ ಭರತವಳ್ಳಿ, ಶ್ರೀಧರ್ ಹಳೆ ಆಲೂರು, ಮಧು ಅಬ್ಬನ, ರುದ್ರಕುಮಾರ್, ಅಶೋಕ್, ಪಾಳ್ಯ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ದರ್ಶನ್ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.