ಹಳೇಬೀಡು: ಹೊಯ್ಸಳೇಶ್ವರ ದೇವಾಲಯ ಆವರಣದಲ್ಲಿ ಇರುವ ಕೇಂದ್ರ ಪುರಾತತ್ವ ಸರ್ವೇಕ್ಷಣಾ ಇಲಾಖೆಯ ಮ್ಯೂಸಿಯಂನಲ್ಲಿ ನವೀಕರಣ ಹಾಗೂ ದುರಸ್ತಿ ಕೆಲಸ ನಡೆಯುತ್ತಿದ್ದು, ಜುಲೈ 5 ರಿಂದ ಆಗಸ್ಟ್ 5 ರವರೆಗೆ ಪ್ರವಾಸಿಗರ ಸಂದರ್ಶನವನ್ನು ನಿಲ್ಲಿಸಲಾಗಿದೆ.
ವಿಶ್ವಪರಂಪರೆ ಪಟ್ಟಿಗೆ ಹಳೇಬೀಡು ನಾಮನಿರ್ದೇಶನ ಆಗಿದೆ. ಆಗಸ್ಟ್ನಲ್ಲಿ ಯುನೆಸ್ಕೊ ತಂಡದಿಂದ ಪರಿಶೀಲನೆ ನಡೆಯಲಿದೆ. ಹೀಗಾಗಿ ಕೇಂದ್ರ ಸಂಸ್ಕೃತಿ ಸಚಿವಾಲಯ ಹಾಗೂ ಕೇಂದ್ರ ಪುರಾತತ್ವ ಸರ್ವೇಕ್ಷಣ ಇಲಾಖೆಯ ಮಹಾನಿರ್ದೇಶಕರು, ಬೆಂಗಳೂರಿನ ಪ್ರಾದೇಶಿಕ ನಿರ್ದೇಶಕರು ಹಾಗೂ ಅಧೀಕ್ಷಕರ ಮಾರ್ಗದರ್ಶನದಂತೆ ಅಭಿವೃದ್ದಿ ಕೆಲಸ ಕೈಗೊಳ್ಳಲಾಗಿದೆ.
ವಿಗ್ರಹಗಳನ್ನು ಸ್ವಚ್ಛಗೊಳಿಸಿ ವಿನೂತನ ಮಾದರಿಯಲ್ಲಿ ಪ್ರವಾಸಿಗರಿಗೆ ಆಕರ್ಷಣೆ ಆಗುವಂತೆ ಜೋಡಣೆ ಮಾಡುವ ಕೆಲಸ ನಡೆಯುತ್ತಿದೆ. ವಿಗ್ರಹಗಳ ಅಂದ ಹೆಚ್ಚಿಸುವಂತೆ ಬೆಳಕು ನೀಡುವ ಎಲ್ಇಡಿ ವಿದ್ಯುತ್ ವ್ಯವಸ್ಥೆ ಕಲ್ಪಿಸಲಾಗುತ್ತಿದೆ. ಮ್ಯೂಸಿಯಂನ ಒಳಾಂಗಣ ಹಾಗೂ ಹೊರಂಗಣದಲ್ಲಿ ಹೊಸದಾಗಿ ವಿನೂತನ ರೀತಿಯ ನೆಲಹಾಸು ಹಾಕಲಾಗುತ್ತಿದೆ.
ಒಳಾಂಗಣದಲ್ಲಿ ವಿಗ್ರಹ ಸುರಕ್ಷತೆಗೆ ಹಾಕಿರುವ ಗಾಜುಗಳನ್ನು ವಿಭಿನ್ನ ರೀತಿಯಲ್ಲಿ ಅಳವಡಿಸಲಾಗುತ್ತಿದೆ. ಗೋಡೆಗಳಿಗೆ ಬಣ್ಣ ಬಳಿಯುವ ಕೆಲಸ ಕೈಗೊಳ್ಳಲಾಗಿದೆ. ಹೈಟೆಕ್ ಮಾದರಿಯಲ್ಲಿ ಕುಡಿಯುವ ನೀರಿನ ಸೌಲಭ್ಯ ಕಲ್ಪಿಸಲಾಗುತ್ತಿದೆ.
ಮ್ಯೂಸಿಯಂ ವೀಕ್ಷಣೆ ಮಾಡುವವರು ಆನ್ಲೈನ್ನಲ್ಲಿ ಒಂದು ತಿಂಗಳು ಟಿಕೆಟ್ ಬುಕ್ ಮಾಡಬಾರದು. ಹೊಯ್ಸಳೇಶ್ವರ ದೇವಾಲಯ, ಜೈನ ಬಸದಿ, ಕೇದಾರೇಶ್ವರ ದೇವಾಲಯ, ಹುಲಿಕೆರೆ ಪುಷ್ಕರಣಿ, ಬೇಲೂರು ಚನ್ನಕೇಶವ ದೇವಾಲಯ ಹಾಗೂ ಬೆಳವಾಡಿ ವೀರನಾರಾಯಣ ದೇವಾಲಯಗಳ ವೀಕ್ಷಣೆಗೆ ಅವಕಾಶ ಇರುತ್ತದೆ ಎಂದು ಮ್ಯೂಸಿಯಂನ ಸಹಾಯಕ ಪುರಾತತ್ವ ಅಧಿಕ್ಷಕರು ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.