ಹಾಸನ: ವರ್ಷಕ್ಕೊಮ್ಮೆ ದರ್ಶನ ಭಾಗ್ಯ ಕರುಣಿಸುವ ಅಧಿದೇವತೆ ಹಾಸನಾಂಬೆ ದೇವಾಲಯದ ಗರ್ಭಗುಡಿ ಬಾಗಿಲನ್ನು ಮಂಗಳವಾರ ಧಾರ್ಮಿಕ ವಿಧಿವಿಧಾನಗಳ ಮೂಲಕ ಮುಚ್ಚಲಾಯಿತು.
ಅ.17ರಿಂದ 29ರವರೆಗೆ ದೇವಿ ಬಾಗಿಲು ತೆರೆದಿದ್ದ ಸಮಯದಲ್ಲಿ ನಾಲ್ಕು ಲಕ್ಷಕ್ಕೂ ಹೆಚ್ಚು ಭಕ್ತರು ದೇವರ ದರ್ಶನ ಪಡೆದರು. ಬಲಿಪಾಡ್ಯಮಿಯಂದು ಮಧ್ಯಾಹ್ನ 1.15ಕ್ಕೆ ಗರ್ಭಗುಡಿ ಬಾಗಿಲು ಮುಚ್ಚುತ್ತಿದ್ದಂತೆ ‘ಹಾಸನಾಂಬೆಗೆ ಜೈ’ ಎಂಬ ಜಯಘೋಷ ಭಕ್ತರಿಂದ ಮೊಳಗಿತು.
ಸಂಪ್ರದಾಯದ ಪ್ರಕಾರ ದೇವಿಯ ಸನ್ನಿಧಿಯಲ್ಲಿ ಹೂ, ನೈವೇದ್ಯ ಇಟ್ಟು, ದೀಪ ಹಚ್ಚಲಾಯಿತು. ಮುಂದಿನ ವರ್ಷ ನ.5ರಿಂದ 17ರವರೆಗೆ ಹಾಸನಾಂಬೆ ದರ್ಶನೋತ್ಸವ ನಿಗದಿಯಾಗಿದೆ.
ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ, ಜಿಲ್ಲಾಧಿಕಾರಿ ಆರ್.ಗಿರೀಶ್, ತಹಶೀಲ್ದಾರ್ ಮೇಘನಾ, ಉಪವಿಬಾಗಾಧಿಕಾರಿ ನವೀನ್ ಭಟ್, ದೇವಾಲಯದ ಆಡಳಿತಾಧಿಕಾರಿ ಎಚ್.ಎಲ್.ನಾಗರಾಜ್ ಬಾಗಿಲು ಹಾಕುವಾಗ ಹಾಜರಿದ್ದರು. ಮುಜರಾಯಿ ಇಲಾಖೆ ಅಧಿಕಾರಿಗಳಿಂದ ಬೀಗ ಹಾಕಿ ಸೀಲ್ ಒತ್ತಲಾಯಿತು. ಕಡೆ ದಿನ ಸಾರ್ವಜನಿಕರಿಗೆ ದೇವಿ ದರ್ಶನಕ್ಕೆ ಅವಕಾಶ ಇಲ್ಲದಿದ್ದರೂ ಅಪಾರ ಸಂಖ್ಯೆಯಲ್ಲಿ ಭಕ್ತರು ಬಂದಿದ್ದರು. ದೇವಿ ದರ್ಶನಕ್ಕೆ ಆಗ್ರಹಿಸಿದ ಕಾರಣ ಅವರಿಗೂ ಅವಕಾಶ ಕಲ್ಪಿಸಲಾಯಿತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.