ಹಾಸನ: ನಗರದ ಬಿ.ಎಂ. ರಸ್ತೆಯ ಎನ್.ಆರ್. ವೃತ್ತದಿಂದ ತಣ್ಣೀರುಹಳ್ಳ ವೃತ್ತದವರೆಗೆ ಭಾನುವಾರ ಬೆಳಿಗ್ಗೆಯಿಂದ ಮಧ್ಯಾಹ್ನದವರೆಗೆ ಹಸಿರುಭೂಮಿಪ್ರತಿಷ್ಠಾನ ಹಾಗೂ ಬಿ.ಎಂ. ರಸ್ತೆ ಸೌಂದರೀಕರಣ ಸಮಿತಿ ನೇತೃತ್ವದಲ್ಲಿ ವಿವಿಧ ಸಂಘಟನೆಗಳ ಪದಾಧಿಕಾರಿಗಳು ಶ್ರಮದಾನ ಮಾಡಿದರು.
ನಗರಸಭೆ ಅಧ್ಯಕ್ಷ ಆರ್.ಮೋಹನ್ ಶ್ರಮದಾನಕ್ಕೆಚಾಲನೆ ನೀಡಿದರು. ನಗರಸಭೆ ಪೌರಕಾರ್ಮಿಕರ ಸಹಕಾರದೊಂದಿಗೆ ರಸ್ತೆಯ ಎರಡೂ ಬದಿಯಲ್ಲಿ ಬಿದ್ದಿದ್ದ ಕಸವನ್ನು ಪೊರಕೆಯಿಂದ ಸ್ವಚ್ಛ ಮಾಡಲಾಯಿತು. ರಸ್ತೆ ವಿಭಜಕದಮಧ್ಯದಲ್ಲಿ ಬೆಳೆದಿದ್ದ ಗಿಡಗಳನ್ನು ಕಿತ್ತು ಸ್ವಚ್ಛ ಮಾಡಿದರು. ಕಸವನ್ನು ಚೀಲದಲ್ಲಿ ಸಂಗ್ರಹಿಸಿ ನಗರಸಭೆ ವಾಹನದಲ್ಲಿ ಸಾಗಿಸಲಾಯಿತು.
ಶ್ರಮದಾನಕ್ಕೆ ಎರಡು ತಂಡಗಳನ್ನು ರಚಿಸಲಾಗಿತ್ತು. ನಗರದ ಎನ್.ಆರ್. ವೃತ್ತದಿಂದ ಸಂತೆಪೇಟೆವರೆಗಿನ ತಂಡದ ನೇತೃತ್ವವನ್ನುಟಿ.ಎಚ್. ಅಪ್ಪಾಜಿಗೌಡ ಹಾಗೂ ಆನಂದ್ ವಹಿಸಿದ್ದರು. ತಣ್ಣೀರುಹಳ್ಳ ವೃತ್ತದಿಂದ ಸಂತೆಪೇಟೆ ವೃತ್ತದವರೆಗೆ ಸ್ವಚ್ಛತಾ ತಂಡದ ನೇತೃತ್ವವನ್ನು ಸಿ.ಬಿ. ವೆಂಕಟೇಗೌಡ ಹಾಗೂ ಆರೋಗ್ಯ ನಿರೀಕ್ಷಕ ಪ್ರಸಾದ್ ವಹಿಸಿ ಮುನ್ನಡೆಸಿದರು.
ಸ್ವಚ್ಛತೆಯ ಬಳಿಕ ರಸ್ತೆ ಬದಿಯಲ್ಲಿರುವ ಅಂಗಡಿಗಳ ಮುಂಭಾಗ ಹೂವಿನ ಕುಂಡಗಳನ್ನು ಇರಿಸಲಾಯಿತು. ಜತೆಗೆ ತಮ್ಮ ಅಂಗಡಿ ಮುಂದೆ ಸ್ವಚ್ಛತೆ ಕಾಪಾಡಿಕೊಳ್ಳುವಂತೆ ಮಾಲೀಕರಿಗೆ ಅರಿವು ಮೂಡಿಸಲಾಯಿತು.
ಈ ವೇಳೆ ಸುದ್ದಿಗಾರರೊಂದಿಗೆ ಹಸಿರುಭೂಮಿಪ್ರತಿಷ್ಠಾನದ ಟ್ರಸ್ಟಿ ಭವಾನಿ ಮಾತನಾಡಿ, ‘ಜ. 26ರಂದು 75ನೇ ಗಣರಾಜ್ಯೋತ್ಸವದ ಅಂಗವಾಗಿ ಬಿ.ಎಂ ರಸ್ತೆಯಲ್ಲಿ ಶ್ರಮದಾನ ಮಾಡಿ ಜನರಲ್ಲಿ ಸ್ವಚ್ಛತೆಯ ಬಗ್ಗೆ ಅರಿವುಮೂಡಿಸಲಾಗುತ್ತಿದೆ’ ಎಂದರು.
‘ನಮ್ಮ ಶ್ರಮದಾನಕ್ಕೆ ಇಂದು ಅನೇಕ ಸಮಿತಿಗಳು, ಸಂಘ ಸಂಸ್ಥೆಗಳ ಪ್ರತಿನಿಧಿಗಳು ಕೈಜೋಡಿಸಿದ್ದಾರೆ. ಭಾರತ ಜ್ಞಾನ ವಿಜ್ಞಾನ ಸಮಿತಿ ಇಂದು ರಿಂಗ್ ರಸ್ತೆಯಲ್ಲಿ ಸ್ವಚ್ಛತಾ ಕಾರ್ಯ ಮಾಡುತ್ತಿದೆ. ಸಂಘ ಸಂಸ್ಥೆಗಳು ಮಾತ್ರ ಸ್ವಚ್ಛತೆಗೆ ಜವಾಬ್ದಾರಿ ತೆಗೆದುಕೊಂಡರೆಸಾಲದು. ಪ್ರತಿ ನಾಗರಿಕರು ತಮ್ಮ ಮನೆಯನ್ನು, ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಬೇಕು’ ಎಂದು ಸಲಹೆ ನೀಡಿದರು.
‘ಹಾಸನವನ್ನು ಬಡವರ ಊಟಿ ಎಂದು ಕರೆಯುತ್ತಾರೆ. ಅದೇ ರೀತಿ ಸ್ವಚ್ಛ ನಗರ ಎಂಬ ಹೆಗ್ಗಳಿಕೆಗೂ ಹಾಸನ ಪಾತ್ರವಾಗಬೇಕಾದರೆ ಎಲ್ಲರ ಸಹಕಾರ ಮುಖ್ಯ. ನಿಟ್ಟಿನಲ್ಲಿ ನಗರದ ಹೃದಯ ಭಾಗದಲ್ಲಿ ಹಾದು ಹೋಗಿರುವ ಬಿ.ಎಂ. ರಸ್ತೆಯನ್ನು ಸ್ವಚ್ಛ ಮಾಡಿ, ಸೌಂದರ್ಯ ಹೆಚ್ಚಿಸಲು ಮುಂದಾಗಿದ್ದೇವೆ’ ಎಂದು ಹೇಳಿದರು.
ಶ್ರಮದಾನದಲ್ಲಿ ಹಸಿರುಭೂಮಿ ಪ್ರತಿಷ್ಠಾನದ ಸಂಸ್ಥಾಪಕ ಆರ್.ಪಿ. ವೆಂಕಟೇಶ್ ಮೂರ್ತಿ, ಮಾಜಿ ಅಧ್ಯಕ್ಷ ಅಪ್ಪಾಜಿಗೌಡ, ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಕಾಂಚನಮಾಲಾ, ಮುಂಜಾನೆ ಮಿತ್ರ ತಂಡದ ಅಧ್ಯಕ್ಷ ವೆಂಕಟೇಗೌಡ, ಜನನಿ ಫೌಂಡೇಷನ್ ಅಧ್ಯಕ್ಷೆ ಭಾನುಮತಿ, ರಾಮಣ್ಣ, ಹುಣಸಿನಕೆರೆ ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷ ಸಯ್ಯಾದ್ ತಾಜ್, ಹಸಿರುಭೂಮಿ ಪ್ರತಿಷ್ಠಾನದ ಪದಾಧಿಕಾರಿ ಚಿನ್ನೇನಹಳ್ಳಿ ಸ್ವಾಮಿ, ತೌಫೀಕ್ ಅಹಮದ್, ವನಜಾ ಸುರೇಶ್, ರಾಮೇಗೌಡ, ರಾಜೀವೆಗೌಡ, ಗೌಡೇಗೌಡ, ದೇವಿಕಾ ಮಧು, ಡಾ.ಕೆ.ಸಿ. ತೇಜಸ್ವಿ, ಡಾ.ಮಂಜುನಾಥ್, ಗೀತಾ, ರೋಟರಿ ಕ್ಲಬ್ ನ ಸುರೇಶ್ ಪಾಲ್ಗೊಂಡಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.